ಸಿಎಎ ಪ್ರತಿಭಟನೆ ವೇಳೆ ಅವಹೇಳನಕಾರಿ ಹೇಳಿಕೆ: ಡಾ. ಕಫೀಲ್ ಖಾನ್ ಬಂಧನ
ಮುಂಬೈ, ಜನವರಿ 30: ಗೋರಖ್ಪುರದ ವೈದ್ಯಕೀಯ ಕಾಲೇಜಿನಲ್ಲಿ 2017ರಲ್ಲಿ ಸಂಭವಿಸಿದ್ದ ಸಾಮೂಹಿಕ ಶಿಶುಮರಣ ಘಟನೆಯಲ್ಲಿ ಬಂಧಿತರಾಗಿ ಬಳಿಕ ನಿರ್ದೋಷಿಯೆಂದು ಬಿಡುಗಡೆಯಾಗಿದ್ದ ವೈದ್ಯ ಡಾ. ಕಫೀಲ್ ಖಾನ್ ಅವರನ್ನು ಉತ್ತರ ಪ್ರದೇಶ ಪೊಲೀಸರು ಬುಧವಾರ ರಾತ್ರಿ ಮುಂಬೈನಲ್ಲಿ ಬಂಧಿಸಿದ್ದಾರೆ.
ಅಲಿಗಢದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆ ವೇಳೆ ಅವಹೇಳನಾಕಾರಿ ಹೇಳಿಕೆಗಳನ್ನು ನೀಡಿದ್ದ ಆರೋಪದಲ್ಲಿ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಕಫೀಲ್ ಖಾನ್ ಅವರನ್ನು ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ಶಹೀನ್ ಬಾಗ್ ಮಾದರಿಯಲ್ಲಿಯೇ ಮುಂಬೈನಲ್ಲಿ ನಡೆಯುತ್ತಿರುವ ಮುಂಬೈ ಬಾಗ್ ಪ್ರತಿಭಟನೆಯಲ್ಲಿ ಗುರುವಾರ ಪಾಲ್ಗೊಳ್ಳುವ ಸಲುವಾಗಿ ಕಫೀಲ್ ಖಾನ್ ತೆರಳಿದ್ದರು. ಅವರನ್ನು ಬಂಧಿಸಿ ಮುಂಬೈನ ಸಹಾರ್ ಪೊಲೀಸ್ ಠಾಣೆಗೆ ಕರೆತರಲಾಗಿದೆ.

ಸಿಎಎ ವಿರುದ್ಧ ಅಲಿಗಢದಲ್ಲಿ ಡಿ. 13ರಂದು ನಡೆದ ಪ್ರತಿಭಟನಾ ಸಮಾವೇಶದಲ್ಲಿ ಕಫೀಲ್ ಖಾನ್ ಅವಹೇಳನಾಕಾರಿ ಮಾತುಗಳನ್ನು ಆಡಿದ್ದರು. ಅವರ ವಿರುದ್ಧ ಐಪಿಸಿ ಸೆಕ್ಷನ್ 153-ಎ ಅಡಿ (ಎರಡು ವಿಭಿನ್ ಗುಂಪುಗಳ ನಡುವೆ ಧರ್ಮದ ನೆಲೆಯಲ್ಲಿ ವೈರತ್ವ ಪ್ರಚೋದಿಸುವುದು) ಪ್ರಕರಣ ದಾಖಲಾಗಿತ್ತು ಎಂದು ಐಜಿ ಅಮಿತಾಬ್ ಯಶ್ ತಿಳಿಸಿದ್ದಾರೆ.
2017ರ ಆಗಸ್ಟ್ನಲ್ಲಿ ಗೋರಖ್ಪುರದ ಬಾಬಾ ರಾಘವ್ ದಾಸ್ (ಬಿಆರ್ಡಿ) ವೈದ್ಯಕೀಯ ಕಾಲೇಜಿನಲ್ಲಿ ಆಮ್ಲಜನಕದ ಪೂರೈಕೆ ಕೊರತೆಯಿಂದಾಗಿ 60 ಮಕ್ಕಳು ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಕಫೀಲ್ ಖಾನ್ ಕಾರಣ ಎಂದು ಆರೋಪಿಸಿ ಅವರನ್ನು ಕೆಲಸದಿಂದ ಅಮಾತುಗೊಳಿಸಿ, ಬಂಧಿಸಲಾಗಿತ್ತು. ಆದರೆ ಈ ಬಗ್ಗೆ ತನಿಖೆ ನಡೆಸಿದ್ದ ಉತ್ತರ ಪ್ರದೇಶ ಸರ್ಕಾರ ಅವರು ನಿರ್ದೋಷಿ ಎಂದು ವರದಿ ನೀಡಿತ್ತು.












Click it and Unblock the Notifications