ಮುಂಬೈ ಉದ್ಯಮಿ ಹತ್ಯೆ ಕೇಸ್, ಜನಪ್ರಿಯ ನಟಿ ವಿಚಾರಣೆ
ಮುಂಬೈ, ಡಿಸೆಂಬರ್ 09: ವಜ್ರದ ವ್ಯಾಪಾರಿ ರಾಜೇಶ್ವರ್ ಕೆ.ಉದಾನಿ ಅವರ ಅಪಹರಣ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೂಪದರ್ಶಿ, ಕಿರುತೆರೆ ನಟಿ, ಸಾಥ್ ನಿಭಾನಾ ಸಾಥಿಯಾ ಖ್ಯಾತಿಯ ಡೆವೋಲಿನಾ ಭಟ್ಟಾಚಾರ್ಯ ಅವರನ್ನು ಮುಂಬೈ ಪೊಲೀಸರು ತೀವ್ರವಾಗಿ ವಿಚಾರಣೆಗೊಳಪಡಿಸಿದ್ದಾರೆ.
ಉದಾನಿ ಅವರ ಫೋನ್ ಕಾಲ್ ಪಟ್ಟಿಯಲ್ಲಿ ನಟಿ 'ಗೋಪಿ ಬಹು' ಡೆವೋಲಿನಾ ಹೆಸರು ಕಾಣಿಸಿಕೊಂಡಿದ್ದರಿಂದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕಾರಣಿಯೊಬ್ಬರ ಆಪ್ತ ಸಹಾಯಕ ಹಾಗೂ ಅಮಾನತಾಗಿರುವ ಪೊಲೀಸ್ಸಿಬ್ಬಂದಿಯೊಬ್ಬರನ್ನು ಬಂಧಿಸಲಾಗಿದೆ. ಬಂಧಿತರನ್ನು ಸಚಿನ್ ಪವಾರ್ ಹಾಗೂ ದಿನೇಶ್ ಪವಾರ್ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಕೊಲೆ, ಕೊಲೆ ಸಂಚು ಹಾಗೂ ಇತರೆ ಅಪರಾಧ ಕೇಸ್ಗಳನ್ನು ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದ ಸಂಚಿನಲ್ಲಿ ಭಾಗಿಯಾಗಿರುವ ಶಂಕೆಯ ಮೇರೆಗೆ ಇಬ್ಬರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ. ಕೊಲೆಯಾದ ವಜ್ರದ ವ್ಯಾಪಾರಿಯ ಗೆಳೆಯರಾಗಿದ್ದ ಸಚಿನ್ ಪವಾರ್ ಅವರು ವಸತಿ ಸಚಿವ ಪ್ರಕಾಶ್ ಮೆಹ್ತಾ ಅವರ ಆಪ್ತ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪೊಲೀಸ್ ಕಾನ್ಸ್ ಟೇಬಲ್ ದಿನೇಶ್ ಅವರು ಪಂತ್ ನಗರ ಪೊಲೀಸ್ ಠಾಣೆಯಲ್ಲಿದ್ದಾಗ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿ, 2014ರಲ್ಲೆ ಅಮಾನತುಗೊಂಡಿದ್ದಾರೆ.
ಘಟ್ ಕೊಪಾರ್ ನ ಮಹಾಲಕ್ಷ್ಮಿ ಸೊಸೈಟಿಯ ನಿವಾಸಿಯಾಗಿದ್ದ 57ವರ್ಷ ವಯಸ್ಸಿನ ಉದ್ಯಮಿ ರಾಜೇಶ್ವರ್ ಉದಾನಿ ಅವರು ನವೆಂಬರ್ 28ರಿಂದ ನಾಪತ್ತೆಯಾಗಿದ್ದರು. ವಜ್ರದ ವ್ಯಾಪಾರಿಯ ಶವ ರಾಯಗಡ್ ಜಿಲ್ಲೆಯ ಅರಣ್ಯದಲ್ಲಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ವರದಿಗಳು ಬಂದಿದ್ದು, ಹಿಂಸೆ ನೀಡಿ ಕೊಲ್ಲಲಾಗಿದೆ ಎಂದು ತಿಳಿದು ಬಂದಿತ್ತು.
Maharashtra:TV actors Devoleena Bhattacharjee & Sachin Pawar today appeared before Pant Nagar Police station to record their statements in connection with the death of a businessman in Navi Mumbai. The businessman was missing since November 29 & his body was recovered yesterday. pic.twitter.com/TrbpjUSB7L
— ANI (@ANI) December 8, 2018
ಉದಾನಿ ಅವರು ಕೆಲ ಬಾರ್ ಹಾಗೂ ಗ್ಲ್ಯಾಮರ್, ಎಂಟರ್ಟೈನ್ಮೆಂಟ್ ಉದ್ಯಮದಲ್ಲಿರುವ ಮಹಿಳೆಯರ ಜೊತೆ ಸಚಿನ್ ಪವಾರ್ ಮೂಲಕ ಸಂಪರ್ಕದಲ್ಲಿದ್ದರು ಎಂದು ಅವರ ಕಾಲ್ ಡಾಟಾ ಪ್ರಕಾರ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೊತೆಗೆ ಸಚಿನ್ ಪವಾರ್ ಮತ್ತು ಉದಾನಿ ಮಧ್ಯೆ ಕೆಲ ಹಣಕಾಸು ಮನಸ್ತಾಪಗಳು ಇದ್ದವು ಎಂದು ತಿಳಿದು ಬಂದಿದೆ. ಅಂತೆಯೇ ಕೊಲೆ ಪ್ರಕರಣದ ಬಳಿಕ ಸಚಿನ್ ಪವಾರ್ ಪರಾರಿಯಾಗಿದ್ದರು. ಬಳಿಕ ಪೊಲೀಸರು ತನಿಖೆ ಕೈಗೊಂಡು ಗುವಾಹಟಿಯಲ್ಲಿದ್ದ ಸಚಿನ್ ಪವಾರ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.