ನಿಲ್ದಾಣಗಳಲ್ಲಿ ಗುಂಪುಗೂಡುತ್ತಿರುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಮನವಿ
ಮುಂಬೈ, ಏಪ್ರಿಲ್ 14: ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಆತಂಕಕಾರಿ ರೀತಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಲಾಕ್ಡೌನ್ ಸ್ವರೂಪದ ತೀವ್ರ ಕಠಿಣ ನಿರ್ಬಂಧಗಳನ್ನು ಪ್ರಕಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ವಿವಿಧ ಉದ್ಯೋಗಗಳಿಗಾಗಿ ಬಂದಿದ್ದ ಜನರು ಮತ್ತು ವಲಸೆ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ಹಿಂದಿರುಗಲು ಮುಂದಾಗಿದ್ದು, ರೈಲ್ವೆ ನಿಲ್ದಾಣಗಳಲ್ಲಿ ಬೃಹತ್ ಜನಸಂದಣಿ ಉಂಟಾಗಿದೆ.
ಮುಂಬೈನ ಲೋಕಮಾನ್ಯ ತಿಲಕ್ ರೈಲು ನಿಲ್ದಾಣದಲ್ಲಿ ದೂರದ ಪ್ರದೇಶಗಳಿಗೆ ತೆರಳುವ ರೈಲುಗಳನ್ನು ಏರಲು ಸಾವಿರಾರು ಮಂದಿ ಸೇರಿಕೊಳ್ಳುತ್ತಿದ್ದಾರೆ. ಇದು ಸರ್ಕಾರಕ್ಕೆ ಮತ್ತಷ್ಟು ಚಿಂತೆಯುಂಟುಮಾಡಿದೆ. ಜನರು ಭಯಭೀತರಾಗುವ ಅಗತ್ಯವಿಲ್ಲ ಮತ್ತು ನಿಲ್ದಾಣಗಳಲ್ಲಿ ಗುಂಪುಗೂಡುವುದನ್ನು ತಡೆಯುವಂತೆ ಕೇಂದ್ರ ರೈಲ್ವೆ ಮನವಿ ಮಾಡಿದೆ.
ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಭೀತಿ; ವಲಸೆ ಕಾರ್ಮಿಕರ ಗುಳೆ
ಜನರು ಗುಂಪು ಸೇರುವುದನ್ನು ತಡೆಯಲು ಲೋಕಮಾನ್ಯ ತಿಲಕ್ ಟರ್ಮಿನಸ್ ಹೊರಭಾಗದಲ್ಲಿ ಸರ್ಕಾರಿ ರೈಲ್ವೆ ಪೊಲೀಸ್ ಮತ್ತು ರೈಲ್ವೆ ಸಂರಕ್ಷಣಾ ದಳವು ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದೆ. ಮಹಾರಾಷ್ಟ್ರ ಸರ್ಕಾರದ ಕಠಿಣ ನಿಯಮಗಳಿಂದ ಕಂಗಾಲಾಗಿರುವ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಮರಳಿ ಹೋಗಲು ಮುಂದಾಗಿದ್ದಾರೆ.
ಕೋವಿಡ್ ಅಲೆಯ ತೀವ್ರತೆ ಕಾರಣದಿಂದ ಮುಂದಿನ 15 ದಿನಗಳವರೆಗೆ ಜನರ ಓಡಾಟದ ಮೇಲೆ ಕಠಿಣ ನಿರ್ಬಂಧಗಳನ್ನು ಸರ್ಕಾರ ವಿಧಿಸಿದೆ. ಅಗತ್ಯ ವಸ್ತುಗಳ ಸೇವೆಗಳನ್ನು ಹೊರತುಪಡಿಸಿ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ನಿರ್ಬಂಧಗಳು ಜಾರಿಯಲ್ಲಿರಲಿವೆ.
#WATCH | Mumbai: Huge crowd of migrant workers arrive at Lokmanya Tilak Terminus (LTT) in Kurla pic.twitter.com/6zkz8xt0eE
— ANI (@ANI) April 13, 2021
'ಜನರು ಭೀತಿಗೊಳ್ಳುವ ಅಗತ್ಯವಿಲ್ಲ. ನಿಲ್ದಾಣಗಳಲ್ಲಿ ಗುಂಪುಗೂಡುವುದನ್ನು ತಪ್ಪಿಸಬೇಕು. ಟಿಕೆಟ್ ಖಚಿತವಾದ ಜನರು ಮಾತ್ರ ವಿಶೇಷ ರೈಲುಗಳನ್ನು ಏರಲು ಅನುಮತಿ ನೀಡಲಾಗಿದೆ. ರೈಲು ಹೊರಡುವ ಒಂದೂವರೆ ಗಂಟೆ ಮುನ್ನ ಅವರು ನಿಲ್ದಾಣಕ್ಕೆ ಬರಬೇಕು' ಎಂದು ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಶಿವಾಜಿ ಸುತಾರ್ ತಿಳಿಸಿದ್ದಾರೆ.
ಲಾಕ್ಡೌನ್ ಇಲ್ಲ, ಹದಿನೈದು ದಿನ ಶಿಸ್ತಿನ ಕರ್ಫ್ಯೂ: ಸಿಎಂ ಉದ್ಧವ್ ಠಾಕ್ರೆ
ಕೇಂದ್ರ ರೈಲ್ವೆಯು ರೈಲುಗಳಲ್ಲಿನ ಕಾಯ್ದಿರಿಸುವ ಪಟ್ಟಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದೆ. ಯಾವುದೇ ನಿರ್ದಿಷ್ಟ ಸ್ಥಳಕ್ಕೆ ಟಿಕೆಟ್ಗಳಿಗೆ ಬೇಡಿಕೆ ಇದೆಯೇ ಎಂಬುದನ್ನು ಪರಿಶೀಲಿಸುತ್ತಿದೆ ಎಂದು ತಿಳಿಸಿದ್ದಾರೆ.