'ಬಿಜೆಪಿ ಮತ್ತು ಶಿವಸೇನೆಯ ಬಂಧ ಅಮೀರ್ ಖಾನ್, ಕಿರಣ್ ರಾವ್ ನಡುವಿನ ಸಂಬಂಧದಂತೆ': ರಾವತ್
ನವದೆಹಲಿ, ಜು.05: ಬಿಜೆಪಿಯೊಂದಿಗೆ ಶಿವಸೇನೆಯ ಮೈತ್ರಿಯ ಊಹಾಪೋಹಗಳ ಬಿಸಿಯಾಗುತ್ತಿದ್ದಂತೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಿವಸೇನೆಯ ನಾಯಕ ಸಂಜಯ್ ರಾವತ್, ಬಿಜೆಪಿ ಮತ್ತು ಶಿವಸೇನೆ ನಡುವಿನ ಸಂಬಂಧವು ಅಮೀರ್ ಖಾನ್, ಕಿರಣ್ ರಾವ್ ನಡುವಿನ ಬಂಧದಂತೆ ಎಂದು ಹೇಳಿದ್ದಾರೆ.
ಈ ಬಗ್ಗೆ ಎಎನ್ಐಗೆ ಪ್ರತಿಕ್ರಿಯೆ ನೀಡಿದ ಶಿವಸೇನೆ ಸಂಸದ, "ನಾವು ಭಾರತ-ಪಾಕಿಸ್ತಾನವಲ್ಲ. ಅಮೀರ್ ಖಾನ್ ಮತ್ತು ಕಿರಣ್ ರಾವ್ರನ್ನು ನೋಡಿ. ನಾವು ಅವರಂತೆಯೇ. ನಮ್ಮ (ಶಿವಸೇನೆ, ಬಿಜೆಪಿ) ರಾಜಕೀಯ ಮಾರ್ಗಗಳು ವಿಭಿನ್ನವಾಗಿವೆ. ಆದರೆ ಸ್ನೇಹ ಹಾಗೇ ಉಳಿಯುತ್ತದೆ," ಎಂದು ತಿಳಿಸಿದ್ದಾರೆ.
ಅಮೀರ್ ಖಾನ್ ಮತ್ತು ಕಿರಣ್ ರಾವ್ 15 ವರ್ಷಗಳ ದಾಂಪತ್ಯದ ನಂತರ ಕಳೆದ ವಾರಾಂತ್ಯದಲ್ಲಿ ವಿಚ್ಛೇದನ ಘೋಷಿಸಿದರು. ಭಾನುವಾರ, ಇಬ್ಬರು ಜೊತೆಯಾಗಿ ವರ್ಚುವಲ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾದವರು.

ಈ ಸಂದರ್ಭದ ಅಮೀರ್ ಖಾನ್, ಕಿರಣ್ ರಾವ್ ಕೈ ಹಿಡಿದು, "ನೀವು ನಮ್ಮ ಬಗ್ಗೆ ಕೇಳಿರಬಹುದು. ನಿಮಗೆ ಬೇಸರವಾಗಿರಬಹುದು, ಆಘಾತಕ್ಕೊಳಗಾಗಿರಬಹುದು. ಆದರೆ ನಾವು ತುಂಬಾ ಸಂತೋಷವಾಗಿದ್ದೇವೆ ಹಾಗೂ ನಾವು ಒಂದೇ ಕುಟುಂಬವಾಗಿದ್ದೇವೆ ಎಂದು ನಿಮ್ಮಲ್ಲಿ ಹೇಳಲು ಬಯಸುತ್ತೇವೆ. ನಮ್ಮ ಸಂಬಂಧ ಬದಲಾಗಿದೆ ಆದರೆ ನಾವು ಇನ್ನೂ ಒಟ್ಟಿಗೆ ಇದ್ದೇವೆ," ಎಂದು ಹೇಳಿದ್ದರು.
ಇದನ್ನು ಉಲ್ಲೇಖ ಮಾಡಿ ಮಾತನಾಡಿದ ಸಂಜಯ್ ರಾವತ್, ಬಿಜೆಪಿ ಮತ್ತು ಶಿವಸೇನೆ ನಡುವಿನ ಸಂಬಂಧವು ಅಮೀರ್ ಖಾನ್, ಕಿರಣ್ ರಾವ್ ನಡುವಿನ ಬಂಧದಂತೆ ಎಂದಿದ್ದಾರೆ.
ಮಾಧ್ಯಮವು ಶಿವಸೇನೆ ಹಾಗೂ ಬಿಜೆಪಿ ಮತ್ತೆ ಜೊತೆಯಾಗುವ ಸಾಧ್ಯತೆ ಇದೆಯೇ ಎಂದು ಕೇಳಿದಾಗ, ಇದಕ್ಕೆ ಪ್ರತಿಕ್ರಿಯೆ ನೀಡಿದ ದೇವೇಂದ್ರ ಫಡ್ನವೀಸ್, "ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ನಾವು (ಸೇನಾ ಮತ್ತು ಬಿಜೆಪಿ) ಎಂದಿಗೂ ಶತ್ರುಗಳಲ್ಲ. ಅವರು ನಮ್ಮ ಸ್ನೇಹಿತರು. ಶಿವಸೇನೆ ಯಾರ ವಿರುದ್ದ ಹೋರಾಡಿದೆಯೋ ಅವರ ಜೊತೆಯೇ ಸರ್ಕಾರವನ್ನು ರಚಿಸಿತು. ನಮ್ಮನ್ನು ತೊರೆಯಿತು," ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ-ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) - ಕಾಂಗ್ರೆಸ್ ಮೈತ್ರಿಕೂಟದಲ್ಲಿ ಬಿರುಕು ಉಂಟಾಗಿದೆ ಎಂಬ ವರದಿಗಳ ಮಧ್ಯೆ ಉಭಯ ಪಕ್ಷಗಳು ಕೆಲವು ಸಮಯದಿಂದ ಮಾತುಕತೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ಕಳೆದ ತಿಂಗಳು ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಧಾನಿ ನರೇಂದ್ರ ಮೋದಿ ಜೊತೆ ಸಭೆ ನಡೆಸಿದ್ದರು. ಈ ಬೆನ್ನಲ್ಲೇ ಸೇನಾ ಮತ್ತು ಬಿಜೆಪಿ ಮತ್ತೆ ಮೈತ್ರಿ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಅಷ್ಟೇ ಅಲ್ಲದೇ ಆ ಬಳಿಕ ಕಳೆದ ವಾರ ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಸಂಜಯ್ ರಾವತ್, ಠಾಕ್ರೆ ಹಾಗೂ ಪ್ರಧಾನಿ ನರೇಂದ್ರ ಮೋದಿ "ದೇಶದ ಉನ್ನತ ನಾಯಕರು" ಎಂದಿದ್ದರು.
"ಉದ್ಧವ್ ಠಾಕ್ರೆ, ಪ್ರಧಾನಿ ಮೋದಿ ಸುಮಾರು 40 ನಿಮಿಷಗಳ ಕಾಲ ಮಾತ್ರ ಮಾತನಾಡಿದ್ದಾರೆ. ಆದರೆ ಇದುವೇ ಸರ್ಕಾರಕ್ಕಾಗಿ ಬಿಜೆಪಿ ಸೇನೆಯೊಂದಿಗೆ ಕೈಜೋಡಿಸುತ್ತದೆ ಎಂಬ ಊಹಾಪೋಹಗಳಿಗೆ ಕಾರಣವಾಗಬಾರದು. ನಮ್ಮ ಮಾರ್ಗಗಳು ವಿಭಿನ್ನವಾಗಿವೆ. ಬಿಜೆಪಿ ವಿರೋಧದಲ್ಲಿದೆ ಮತ್ತು ನಾವು ಅಧಿಕಾರದಲ್ಲಿದ್ದೇವೆ. ಆದರೆ ನಮ್ಮಲ್ಲಿ ಇನ್ನೂ ಬಲವಾದ ವೈಯಕ್ತಿಕ ಬಂಧಗಳಿವೆ. ಠಾಕ್ರೆ ಕುಟುಂಬ ಮತ್ತು ನರೇಂದ್ರ ಮೋದಿಯವರ ನಡುವಿನ ಸಂಬಂಧವು ವರ್ಷಗಳಷ್ಟು ಹಳೆಯದಾಗಿದೆ. ರಾಜಕೀಯವು ಪ್ರತ್ಯೇಕವಾಗಿರಬಹುದು ಆದರೆ ವೈಯಕ್ತಿಕ ಸಂಬಂಧಗಳು ಬಲವಾಗಿರುತ್ತವೆ," ಎಂದು ತಿಳಿಸಿದ್ದರು.
"ಶರದ್ ಪವಾರ್ ಅವರನ್ನು ನೋಡಿ. ನಮ್ಮ ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ನಾವು ಯಾವಾಗಲೂ ಪವಾರ್ ಕುಟುಂಬದೊಂದಿಗೆ ಸಂಬಂಧ ಹೊಂದಿದ್ದೇವೆ. ಇದು ಮಹಾರಾಷ್ಟ್ರದ ಸಂಪ್ರದಾಯ. ನಾವು ಸಂಬಂಧಗಳನ್ನು ಹಾಗೇ ಇಟ್ಟುಕೊಳ್ಳುವ ಜನರು," ಎಂದು ಕೂಡಾ ಹೇಳಿಕೊಂಡಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications