ವಿಚಾರವಾದಿಗಳ ಬಂಧಿಸಿದ ಕ್ರಮ ಪ್ರಶ್ನಿಸಿ, ಮಹಾ ಸರ್ಕಾರಕ್ಕೆ ನೋಟಿಸ್
ಮುಂಬೈ, ಆಗಸ್ಟ್ 31: ಭೀಮಾ ಕೊರೆಂಗಾವ್ ಘಟನೆಗೆ ಸಂಬಂಧಿಸಿದಂತೆ ಸದ್ಯ ಗೃಹ ಬಂಧನಕ್ಕೊಳಪಟ್ಟಿರುವವರಿಗೂ ಮಾವೋವಾದಿಗಳಿಗೂ ನಿಕಟ ಸಂಪರ್ಕವಿದೆ, ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದರ ಬಗ್ಗೆ ಐವರಿಗೆ ಅರಿವಿತ್ತು ಎಂದು ಮಹಾರಾಷ್ಟ್ರ ಎಡಿಜಿಪಿ ಪರಮ್ ಬೀರ್ ಸಿಂಗ್ ಹೇಳಿದ್ದಾರೆ.
ಈ ನಡುವೆ ಐವರನ್ನು ಬಂಧಿಸುವ ಸಂದರ್ಭದಲ್ಲಿ ಸರಿಯಾದ ಕ್ರಮವನ್ನು ಅನುಸರಿಸಿಲ್ಲ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ ಎಚ್ ಆರ್ ಸಿ) ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು, ಮಹಾರಾಷ್ಟ್ರ ಸರ್ಕಾರ ಹಾಗೂ ಪೊಲೀಸ್ ವರಿಷ್ಠರಿಗೆ ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆ ಉತ್ತರಿಸಲು ನಾಲ್ಕು ವಾರಗಳ ಗಡುವು ನೀಡಲಾಗಿದೆ.
ಪುಣೆ ಪೊಲೀಸರು ಮಂಗಳವಾರದಂದು ಎಡಪಂಥೀಯ ವಿಚಾರವಾದಿಗಳಾದ ಸಾಹಿತಿ ವರವರರಾವ್ (ಹೈದರಾಬಾದ್), ವೆರ್ನಾನ್ ಗೊನ್ಜಾಲ್ವೆಸ್, ಅರುಣ್ ಫೆರೆರಿಯಾ(ಮುಂಬೈ), ವಕೀಲೆ ಸುಧಾ ಭಾರದಾಜ್ (ಫರೀದಾಬಾದ್), ಕಾರ್ಯಕರ್ತ ಗೌತಮ್ ನವಲಾಖಾ(ದೆಹಲಿ) ಅವರನ್ನು ಬಂಧಿಸಿದ್ದರು.

ಭೀಮಾ- ಕೊರೆಂಗಾವ್ ನಲ್ಲಿ ದಲಿತರು ಹಾಗೂ ಮೇಲ್ವರ್ಗದ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಈ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದರು. ಪುಣೆ ಸಮೀಪದ ಭೀಮಾ -ಕೊರೆಂಗಾವ್ ಗ್ರಾಮದಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಎಲ್ಗಾರ್ ಪರಿಷದ್ ಹಾಗೂ ಮಾವೋವಾದಿಗಳ ಜತೆ ಈ ಐವರಿಗೆ ನಂಟಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಸುಪ್ರೀಂಕೋರ್ಟ್ ಸೆಪ್ಟೆಂಬರ್ 05ರ ತನಕ ಐವರಿಗೆ ಗೃಹ ಬಂಧನ ಶಿಕ್ಷೆ ನೀಡಿತ್ತು. ಈ ಪೈಕಿ ತೆಲುಗು ಕ್ರಾಂತಿಕಾರಿ ಸಾಹಿತಿ ವರವರ ರಾವ್ ಅವರಿಗೆ ಮುಕ್ತಿ ಸಿಕ್ಕಿದ್ದು, ಹೈದರಾಬಾದಿನಲ್ಲಿರುವ ತಮ್ಮ ನಿವಾಸಕ್ಕೆ ತೆರಳಿದ್ದಾರೆ.
ಡಿಸೆಂಬರ್ 31, 2017ರ ಪ್ರಚೋದನಕಾರಿ ಭಾಷಣ ಕುರಿತಂತೆ, ಜನವರಿ 08ರಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿದ ಬಳಿಕ ಬಂಧಿತರೆಲ್ಲರಿಗೂ ನಿರಂತರವಾಗಿ ನಕ್ಸಲರ ಜತೆ ಸಂಪರ್ಕವಿರುವುದು ಪತ್ತೆಯಾಯಿತು. ಕಬೀರ್ ಕಾಲ ಮಂಚ್ ಜತೆ ಸಂಪರ್ಕವಿರಿಸಿಕೊಂಡಿದ್ದ ಆರೋಪಿಗಳಿಗೆ ಮಾವೋವಾದಿಗಳ ಮುಂದಿನ ಸಂಚಿನ ಬಗ್ಗೆ ಮಾಹಿತಿ ಇತ್ತು.
WATCH: Maharashtra Police briefing on Bhima Koregaon violence case https://t.co/kavuKpwQFF
— ANI (@ANI) August 31, 2018
ಮಾವೋವಾದಿಗಳು ರೂಪಿಸಿದ್ದ ಭಾರಿ ಸಂಚನ್ನು(ಮೋದಿ ಹತ್ಯೆ ಸಂಚು) ಗುರಿಯತ್ತ ಕೊಂಡೊಯ್ಯಲು ಬೇಕಾದ ಕ್ರಮಗಳ ಬಗ್ಗೆ ಆರೋಪಿಗಳು ಚರ್ಚೆ ನಡೆಸಿದ್ದರು ಎಂದಿದ್ದಾರೆ.












Click it and Unblock the Notifications