ಮುಂಬೈ ದಾಳಿ: ಹತ್ತು ವರ್ಷ ಕಳೆದರೂ ಇನ್ನೂ ಮಾಸದ ಗಾಯದ ಕಲೆ
ಮುಂಬೈ, ನವೆಂಬರ್ 26: ಇಡೀ ದೇಶವೇ ಬೆಚ್ಚಿಬಿದ್ದ ದಿನವದು. ಸುಭದ್ರವಾಗಿದೆ ಎಂದು ನಂಬಿದ್ದ ಭಾರತದೊಳಗೆ ಸಲೀಸಾಗಿ ಉಗ್ರರು ನುಗ್ಗಿದ್ದರು. ಗುಂಡುಗಳು ತುಂಬಿದ ಬಂದೂಕುಗಳನ್ನು ಹೊತ್ತುಕೊಂಡು ಹತ್ತು ಮಂದಿ ಉಗ್ರರು ಮನಬಂದಂತೆ ದಾಳಿ ನಡೆಸಿದ್ದರು.
ಆ ದಾಳಿಯಲ್ಲಿ ಬಲಿಯಾದವರು 166 ಮಂದಿ. 300ಕ್ಕೂ ಹೆಚ್ಚು ಜನರು ಗಾಯಾಳುಗಳಾದರು. ಅದರಲ್ಲಿ ಅನೇಕ ವಿದೇಶಿಗರೂ ಇದ್ದರು. 2008ರ ನವೆಂಬರ್ 26ರಂದು ನಡೆದ ಈ ಭೀಕರ ದಾಳಿಯ ನೆನಪು ಇನ್ನೂ ಹಸಿಯಾಗಿದೆ. ನೆತ್ತರ ಕಲೆ ಇನ್ನೂ ಆರಿಲ್ಲ. ನಿನ್ನೆ ಮೊನ್ನೆ ನಡೆದಂತೆ ಈಗಲೂ ಬೆಚ್ಚಿಬೀಳಿಸುವ ಆ ಕರಾಳ ಘಟನೆಗೆ ಇಂದು (ನ.26) ಬರೋಬ್ಬರಿ ಹತ್ತು ವರ್ಷ.
ಕರಾಚಿಯಿಂದ ದೋಣಿಯಿಂದ ಬಂದ ಹತ್ತು ಮಂದಿ ಲಷ್ಕರ್ ಉಗ್ರರು ಮೂರು ದಿನಗಳ ಕಾಲ ಮುಂಬೈನ ವಿವಿಧೆಡೆ ಬಾಂಬ್ ಮತ್ತು ಗುಂಡಿನ ದಾಳಿ ನಡೆಸಿದ್ದರು. ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ನಲ್ಲಿ ನೂರಾರು ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು.
ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣ ಮತ್ತು ಲಿಯೊಪೋಲ್ಡ್ ಕೆಫೆ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು.

ಸೆರೆ ಸಿಕ್ಕಿದ್ದ ಕಸಬ್
ಹೋಟೆಲ್ನಲ್ಲಿದ್ದ ಗ್ರಾಹಕರು, ಸಿಬ್ಬಂದಿ, ರೈಲ್ವೆ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಎಲ್ಲರನ್ನೂ ನಿರ್ದಯವಾಗಿ ಕೊಂದು ಹಾಕಿದ್ದ ಉಗ್ರರನ್ನು ತಡೆಯಲು ಭಾರತೀಯ ಸೇನೆ ಸಾಹಸ ಮಾಡಬೇಕಾಯಿತು. ಹತ್ತು ಮಂದಿ ಉಗ್ರರು ನೂರಾರು ಜನರನ್ನು ಸುಲಭವಾಗಿ ಕೊಂಡು ಹಾಕಿದ್ದರು. ಸೇನಾಪಡೆ ಅವರಲ್ಲಿ ಒಂಬತ್ತು ಮಂದಿಯನ್ನು ಹೊಡೆದುರುಳಿಸಿತು. ಕೊನೆಗೆ ಉಗ್ರ ಅಜ್ಮಲ್ ಕಸಬ್ನನ್ನು ಜೀವಂತವಾಗಿ ಸೆರೆಹಿಡಿದಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ನಡೆದು 2012ರಂದು ಮರಣದಂಡನೆ ಶಿಕ್ಷೆ ಜಾರಿ ಮಾಡಲಾಗಿತ್ತು.

35 ಕೋಟಿ ರೂ ಬಹುಮಾನ
ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದವರು ಮತ್ತು ವೈಯಕ್ತಿಕವಾಗಿ ದಾಳಿಯ ಸಂಚು ರೂಪಿಸಿದ್ದವರ ಬಗ್ಗೆ ಮಾಹಿತಿ ನೀಡಿದವರಿಗೆ 35 ಕೋಟಿ ರೂ. ಬಹುಮಾನ ನೀಡುವುದಾಗಿ ಅಮೆರಿಕದ ರಿವಾರ್ಡ್ ಫಾರ್ ಜಸ್ಟೀಸ್ (ಆರ್ಎಫ್ಜೆ) ಘೋಷಣೆ ಮಾಡಿದೆ.

ವಿವಿಧ ದೇಶಗಳೊಂದಿಗೆ ಮಾತುಕತೆ
ಮುಂಬೈ ದಾಳಿಗೆ ಹತ್ತು ವರ್ಷ ತುಂಬಿದ ಸಂದರ್ಭದಲ್ಲಿ ಅಮೆರಿಕದ ಕಾರ್ಯದರ್ಶಿ ಮೈಕ್ ಪೊಂಪೆಯೊ ಅವರು ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳನ್ನು ಮಾತುಕತೆಗೆ ಆಹ್ವಾನಿಸಿದೆ. ಲಷ್ಕರ್ ಎ ತೊಯಬಾ ಮತ್ತು ಇತರೆ ಉಗ್ರರ ಸಂಘಟನೆಗಳನ್ನು ನಿಗ್ರಹಿಸಲು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಿಯಮಗಳನ್ನು ಅನುಷ್ಠಾನಗೊಳಿಸುವ ಸಂಬಂಧ ಚರ್ಚೆ ನಡೆಯಲಿದೆ.
|
ಕಾಂಗ್ರೆಸ್ ಮಾತನಾಡುವುದೇ ಇಲ್ಲ
'ಹತ್ತು ವರ್ಷದ ಹಿಂದೆ ಕಾಂಗ್ರೆಸ್ ಕೇಂದ್ರ ಮತ್ತು ಮಹಾರಾಷ್ಟ್ರಗಳೆರಡರಲ್ಲಿಯೂ ಅಧಿಕಾರದಲ್ಲಿತ್ತು. ನವೆಂಬರ್ 26ರಂದು ಇಡೀ ಜಗತ್ತು ಮುಂಬೈ ಉಗ್ರರ ಭೀಕರ ದಾಳಿಯಿಂದ ಆಘಾತಕ್ಕೆ ಒಳಗಾಗಿತ್ತು. ರಾಜಸ್ಥಾನದಲ್ಲಿ ಚುನಾವಣೆ ಗೆಲ್ಲಲು ಈ ದಾಳಿಯನ್ನು ಕಾಂಗ್ರೆಸ್ ಬಳಸಿಕೊಂಡಿತ್ತು ಎನ್ನುವುದು ನನಗೆ ನೆನಪಿದೆ.
ಈಗ ಕಾಂಗ್ರೆಸ್ ಈಗ ಸೇನೆ ಗಡಿ ನಿಯಂತ್ರಣ ರೇಖೆಯ ಆಚೆಗೆ ನಡೆಸಿದ ಸರ್ಜಿಕಲ್ ದಾಳಿಯನ್ನು ಪ್ರಶ್ನಿಸುತ್ತಿದೆ. ನಮ್ಮ ಕಮಾಂಡೊಗಳು ಇವರಿಗೆ ಸಾಕ್ಷ್ಯ ಒದಗಿಸಲು ಕ್ಯಾಮೆರಾ ಹಿಡಿದುಕೊಂಡು ಹೋಗಬೇಕೇ? ಭಾರತವು 26/11ರ ದಾಳಿಯನ್ನು ಎಂದಿಗೂ ಮರೆಯುವುದಿಲ್ಲ. ಅದರ ತಪ್ಪಿತಸ್ಥರನ್ನು ಮರೆಯುವುದಿಲ್ಲ. ಕಾನೂನು ತನ್ನ ಕಾರ್ಯವನ್ನು ಪೂರ್ಣಗೊಳಿಸಲಿದೆ ಎಂದು ನನ್ನ ದೇಶದ ಜನತೆಗೆ ನಾಣು ಭರವಸೆ ನೀಡುತ್ತೇನೆ' ಎಂದು ಮೋದಿ ಚುನಾವಣಾ ಭಾಷಣದಲ್ಲಿ ಹೇಳಿದ್ದಾರೆ.
|
ಒಗ್ಗಟ್ಟು ಪ್ರದರ್ಶಿಸಿದ್ದೆವು
ಹತ್ತು ವರ್ಷಗಳ ಹಿಂದೆ, ನಮ್ಮ ಜನರಲ್ಲಿನ ಒಗ್ಗಟ್ಟು ಮತ್ತು ಏಕತೆಯನ್ನು ವಿಭಜನಾ ಶಕ್ತಿಗಳು ಒಡೆಯಲಾರವು ಎಂಬುದನ್ನು ನಾವು ಜಗತ್ತಿಗೆ ತೋರಿಸಿದ್ದೆವು. ಇಂದು 26/11ರ ಮುಂಬೈ ದಾಳಿಯಲ್ಲಿ ಜೀವ ಕಳೆದುಕೊಂಡವರಿಗೆ ನಾವು ಗೌರವ ಸಲ್ಲಿಸುತ್ತೇವೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.












Click it and Unblock the Notifications