ಮಂಗಳೂರು: ಕಸದಲ್ಲೂ ಲಕ್ಷ್ಮೀಯನ್ನು ಕಾಣುವ ವಿನೂತನ ಯೋಜನೆ ಜಾರಿಗೆ ಚಿಂತನೆ
ಮಂಗಳೂರು, ಜುಲೈ 30 : ನಮ್ಮಲ್ಲಿ ದೈವಿಶಕ್ತಿಗಳ ಮೆಲೆ ನಂಬಿಕೆ ಹೆಚ್ಚು. ಪ್ರತಿಯೊಬ್ಬರೂ ತಾವು ಸಿರಿ ಸಂಪತ್ತಿನಿಂದ ಚೆನ್ನಾಗಿರಬೇಕು ಎಂದು ಲಕ್ಷ್ಮೀದೇವಿಯನ್ನು ಆರಾಧಿಸುತ್ತಾರೆ. ಲಕ್ಷ್ಮೀ ನೆಲೆನಿಂತಲ್ಲಿ ಸಂಪತ್ತು ತುಂಬಿ ತುಳುಕುತ್ತದೆ ಎಂಬ ನಂಬಿಕೆಯೂ ಇದೆ.
ಲಕ್ಷ್ಮೀದೇವಿ ಎಂತಹವರನ್ನು ಇಷ್ಟ ಪಡುತ್ತಾಳೆ ಎಂದರೆ ಯಾರು ತಾವು ಗಳಿಸಿದ ಹಣ, ಆಸ್ತಿ, ಸಂಪತ್ತನ್ನು ಬಡವರಿಗೆ, ನಿರ್ಗತಿಕರಿಗೆ ದಾನ ಮಾಡುತ್ತಾರೋ ಅವರ ಮೇಲೆ ದೇವಿಯ ಆಶೀರ್ವಾದವೂ ಸದಾ ಇರುತ್ತದೆ ಎಂದು ಹೇಳಲಾಗುತ್ತದೆ. ಅಂತಹವರ ಮನೆಯಲ್ಲಿ ಲಕ್ಷ್ಮೀದೇವಿ ಉಳಿದುಕೊಂಡು ಇನ್ನಷ್ಟು ಹೆಚ್ಚು ಸಿರಿ ಸಂಪತ್ತನ್ನು ಕರುಣಿಸುತ್ತಾಳೆ ಎಂಬ ನಂಬಿಕೆಯೂ ಗಾಢವಾಗಿದೆ.
ಕಸ ವಿಲೇವಾರಿ ಅಸಡ್ಡೆ: ಬಿಬಿಎಂಪಿಗೆ ಹೈಕೋರ್ಟ್ ತಪರಾಕಿ
ಈ ನಂಬಿಕೆಯನ್ನೇ ಸ್ವಚ್ಛತೆಗಾಗಿ ಬಳಸಿಕೊಳ್ಳಲು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಮುಂದಾಗಿದೆ. ಯಾರಿಗೂ ಬೇಡವಾದ ಕಸದಲ್ಲೂ ಲಕ್ಷ್ಮೀಯನ್ನು ಕಾಣಬೇಕೆಂಬ ಪರಿಕಲ್ಪನೆಯಲ್ಲಿ ಕಸ ಲಕ್ಷ್ಮೀ ಎಂಬ ವಿನೂತನ ಯೋಜನೆ ಪರಿಚಯಿಸಲು ಮುಂದಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳು ಸೇರಿದಂತೆ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಕಸ ಲಕ್ಷ್ಮೀ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಸಲಾಗುತ್ತಿದೆ.
ಜಿಲ್ಲಾ ಪಂಚಾಯತ್ ನ ಸ್ವಚ್ಛ ಭಾರತ್ ಯೋಜನೆ ಅಡಿಯಲ್ಲೇ ಈ ಕಸ ಲಕ್ಷ್ಮೀ ಯೋಜನೆ ಜಾರಿಗೆ ಚಿಂತಿಸಲಾಗಿದೆ. ಆ ಮೂಲಕ ಎಲ್ಲೆಂದರಲ್ಲಿ ಕಸ ಎಸೆಯುವ ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಪಂಚಾಯತ್ ಮುಂದಾಗಿದೆ.
ಕಸ ಎಂಬುದು ಯಾರಿಗೂ ಬೇಡವಾದ ವಸ್ತು. ಆದರೆ ಈ ಕಸದಿಂದಲೇ ಸಂಪನ್ಮೂಲವನ್ನು ಕ್ರೂಢೀಕರಿಸಬಹುದು ಎಂಬುದನ್ನು ಜನರಿಗೆ ವಿವರಿಸುವುದೇ ಈ ಯೋಜನೆಯ ಉದ್ದೇಶವಾಗಿದೆ.
ಅಂಗನವಾಡಿಗಳಲ್ಲಿ ಪ್ಲಾಸ್ಟಿಕ್ ಸಂಗ್ರಹಿಸುವ ಯೋಜನೆಗಳಿಗೆ ಹಲವಾರು ಗ್ರಾಮಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರ್ವಜನಿಕರು ತ್ಯಾಜ್ಯವೆಂದು ದೂರ ಎಸೆಯುವ ಪ್ಲಾಸ್ಟಿಕ್ ಸಂಗ್ರಹಿಸಿ ಅಂಗನವಾಡಿಗಳು ಒಂದಿಷ್ಟು ಹಣ ಸಂಗ್ರಹಿಸಿ ಒಂದಂಶವನ್ನು ಅಂಗನವಾಡಿ ಅಭಿವೃದ್ಧಿಗೆ ಬಳಸಿಕೊಳ್ಳುವ ವ್ಯವಸ್ಥೆ ಈಗ ಜಾರಿಯಲ್ಲಿದೆ.
ಅಂಗನವಾಡಿಗೆ ದೊರೆಯುವ ಹಣ ಸಾರ್ವಜನಿಕರೂ ಗಳಿಸಬಹುದಲ್ಲವೇ? ಎಂಬ ಚಿಂತನೆಯೊಂದಿಗೆ ಈ ಕಸ ಲಕ್ಷ್ಮಿ ಯೋಜನೆ ಜಾರಿಗೆ ಸಿದ್ಧತೆ ನಡೆದಿದೆ. ಈ ಯೋಜನೆಯ ರೂಪು ರೇಷೆ ಇನ್ನಷ್ಟೇ ಸಿದ್ದಗೊಳ್ಳಬೇಕಿದೆ.