4 ತಿಂಗಳಿನಿಂದ ಸಂಬಳ ನೀಡದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಕಾರ್ಮಿಕ
ಮಂಗಳೂರು, ನವೆಂಬರ್ 24:ವೇತನ ದೊರೆಯದ ಹಿನ್ನೆಲೆಯಲ್ಲಿ ಜೆಬಿಎಫ್ ಸಂಸ್ಥೆಯ ಕಾರ್ಮಿಕನೋರ್ವ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರು ಹೊರವಲಯದ ಬಜ್ಪೆಯಲ್ಲಿರುವ ಜೆಬಿಎಫ್ ಪ್ಲಾಂಟ್ ನಲ್ಲಿ ನಾಲ್ಕು ತಿಂಗಳಿನಿಂದ ನೌಕರರಿಗೆ ಸಂಬಳ ಸಮರ್ಪಕವಾಗಿ ನೀಡುತ್ತಿರಲಿಲ್ಲ. ಇದರಿಂದ ಮನನೊಂದ ನೌಕರ ಸಂಬಳಕ್ಕಾಗಿ ಎತ್ತರದ ಚಿಮಿಣಿ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಆತ್ಮಹತ್ಯೆಗೆ ಯತ್ನಿಸಿದ ಕಾರ್ಮಿಕನನ್ನು ಉತ್ತರ ಭಾರತ ಮೂಲದ ಕಿರ್ತನ್ ಎಂದು ಗುರುತಿಸಲಾಗಿದೆ. ಜೆಬಿಎಫ್ ಕಂಪೆನಿಯಲ್ಲಿ ಕಾಂಟ್ರಾಕ್ಟ್ ನಡಿ ವೆಲ್ಟಿಂಗ್ ವೃತ್ತಿ ಮಾಡಿಕೊಂಡಿರುವ ಈತನಿಗೆ ಕಳೆದ 4 ತಿಂಗಳಿಂದ ಸಂಸ್ಥೆಯಿಂದ ಸಂಬಳ ನೀಡಲಾಗಿಲ್ಲ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಕಾರ್ಮಿಕ ಕಿರ್ತನ್ ಜೆಬಿಎಫ್ ಪ್ಲಾಂಟ್ ನ ಎತ್ತರದ ಚಿಮಿಣಿ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಕೆಲವೇ ದಿನಗಳಲ್ಲಿ ತಂಗಿ ಮದುವೆ ಕಾರ್ಯಕ್ರಮ ನಡೆಯಲಿದ್ದು, ಮದುವೆಗೆ ಹಣದ ಅವ್ಯಶಕತೆ ಬಹಳಷ್ಟಿದೆ. ಆದರೆ ಕಂಪೆನಿ ಸಂಬಳ ನೀಡದೆ ಮೋಸ ಮಾಡಿದೆ ಎಂದು ಆರೋಪಿಸಿದ್ದಾನೆ.

ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಆತಂಕದ ವಾತವರಣ ಸೃಷ್ಟಿಯಾಗಿತ್ತು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಮೇಲಾಧಿಕಾರಿಗಳು ಆತ್ಮಹತ್ಯೆಗೆ ಯತ್ನಿಸಿದ ಕಾರ್ಮಿಕನ ಮನ ಒಲಿಸಲು ಯತ್ನಿಸಿದ್ದಾರೆ. ಸಂಸ್ಥೆಯ ಹಿರಿಯ ಅಧಿಕಾರಿಗಳು ಸಂಬಳ ನೀಡುವ ಭರವಸೆ ನೀಡಿದ ಬಳಿಕ ನೌಕರ ಚಿಮಿಣಿಯಿಂದ ಕೆಳಗೆ ಇಳಿದಿದ್ದಾನೆ.












Click it and Unblock the Notifications