ಮಂಗಳೂರು: ಮಹಿಳೆಗೆ ಕಾರು ಗುದ್ದಿ ಅವಾಚ್ಯವಾಗಿ ನಿಂದಿಸಿದ ಅಭಯ್ ಚಂದ್ರ
ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆದೆ ಡಿಕ್ಕಿ ಹೊಡೆದು ಆಕೆಯನ್ನೇ ಅವಾಚ್ಯ ಶಬ್ದಗಳಿಂದ ನಿಂದಿ ಮಾಜಿ ಸಚಿವ ಅಭಯಚಂದ್ರ ಜೈನ್. ಕಾರಿಲ್ಲಿ ಹೋಗುತ್ತಿದ್ದಾಗ ನಡೆದ ಘಟನೆ. ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಮಹಿಳೆ.
ಮಂಗಳೂರು, ಜುಲೈ 22: ಸಾರ್ವಜನಿಕ ಜೀವನದಲ್ಲಿ ರೋಷಾವೇಶ ಪ್ರದರ್ಶಿಸಿ ಸುದ್ದಿಯಾಗುವ ಮಾಜಿ ಸಚಿವ ಅಭಯ ಚಂದ್ರ ಜೈನ್ ಅವರು ಈಗ ಮತ್ತೊಮ್ಮೆ ಅಂಥದ್ದೇ ಘಟನೆಯಿಂದ ಸುದ್ದಿಯಾಗಿದ್ದಾರೆ.
ಕಾರಿನಲ್ಲಿ ವೇಗವಾಗಿ ಬಂದು ಮುಸ್ಲಿಂ ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದಿದ್ದಲ್ಲದೆ, ಆಕೆಯನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಜೈನ್. ಈ ಘಟನೆ ಶನಿವಾರ (ಜುಲೈ 22) ನಡೆದಿದ್ದು, ನೊಂದ ಮಹಿಳೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆಯ ವಿವರ: ಬಜ್ಪೆ ಸಮೀಪದ ಕಿನ್ನಿಪದವು ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜೈನಾಬು (48) ಎಂಬ ಮಹಿಳೆಗೆ ಅಭಯಚಂದ್ರರ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಜೈನಾಬು ಚರಂಡಿಗೆ ಹೊಗಿ ಬಿದ್ದಿದ್ದಾರೆ.
ತಮ್ಮಿಂದಾದ ತಪ್ಪಿಗೆ, ಕನಿಷ್ಠ ಪಕ್ಷ ಕಾರಿನಿಂದ ಇಳಿದು ಆ ಜೈನಾಬು ಅವರನ್ನು ಎಬ್ಬಿಸುವ ಸೌಜನ್ಯವನ್ನೂ ತೋರದ ಜೈನ್, ಕಾರಿನಲ್ಲೇ ಕೂತು ನಿಷ್ಕರುಣೆ ಮೆರೆದಿದ್ದಾರೆ. ಚರಂಡಿಯಿಂದ ಬಿದ್ದೆದ್ದು ಬಂದ ಮಹಿಳೆ, ಸಾವಧಾನದಿಂದ ಕಾರು ಚಲಾಯಿಸಬಾರದೇ ಎಂದು ಕೇಳಿದ್ದಾರೆ.
ಇದರಿಂದ ರೊಚ್ಚಿಗೆದ್ದ ಅವರು, ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಲ್ಲದೆ, ಮತ್ತೆ ಮಹಿಳೆಯನ್ನು ತಳ್ಳಿದ್ದಾರೆ. ಇದರಿಂದಾಗಿ ಮಹಿಳೆಗೆ ಮತ್ತಷ್ಟು ಗಾಯಗಳಾಗಿವೆ. ಇದೀಗ ಅವರು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಮಹಿಳೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಅಭಯಚಂದ್ರ ಜೈನ್ ಮತ್ತು ಅವರ ಕಾರು ಚಾಲಕನ ವಿರುದ್ದ ದೂರು ದಾಖಲಿಸಿದ್ದಾಳೆ.