ನಗುತ್ತಾ ದುಬೈ ವಿಮಾನ ಹತ್ತಿದ ಪತಿ ಇಳಿದ ತಕ್ಷಣ ಕೇಳಿದ್ದು ಪತ್ನಿ ಸಾವಿನ ಸುದ್ದಿ
ಮಂಗಳೂರು, ಏಪ್ರಿಲ್ 22:ಶ್ರೀಲಂಕಾದಲ್ಲಿ ಭಾನುವಾರ (ಏ.21) ಮುಂಜಾನೆ ನಡೆದ ಭೀಕರ ಸರಣಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಮಂಗಳೂರು ಮೂಲದ ರಝೀನಾ ಖಾದರ್ (58) ಇಂದು ಸೋಮವಾರ(ಏ.22) ಮಂಗಳೂರಿಗೆ ಮರಳಲು ಸಿದ್ಧತೆ ಮಾಡಿಕೊಂಡಿದ್ದರಂತೆ.
ಪತಿ ಅಬ್ದುಲ್ ಖಾದರ್ ಭಾನುವಾರ (ಏ.21) ಮುಂಜಾನೆ ದುಬೈಗೆ ತೆರಳಿದ ಬಳಿಕ ರಝೀನಾ ಮಂಗಳೂರಿಗೆ ಆಗಮಿಸಲು ಯೋಜನೆ ಹಾಕಿಕೊಂಡಿದ್ದರು. ಕಾರಣಾಂತರಗಳಿಂದ ಅದನ್ನು ಇಂದು ಸೋಮವಾರಕ್ಕೆ ಮುಂದೂಡಿದ್ದರು. ಈ ಹಿನ್ನೆಲೆಯಲ್ಲಿ ವಿಮಾನ ಟಿಕೆಟನ್ನೂ ಕಾಯ್ದಿರಿಸಿದ್ದರು. ಆದರೆ ವಿಧಿಯಾಟ ಬೇರೆಯೇ ಆಗಿತ್ತು.
ದುಬೈ ವಿಮಾನ ಹತ್ತಿದ ಬಳಿಕ ಕೊಲೊಂಬೋದಲ್ಲಿ ನಡೆದ ಬಾಂಬ್ ಸ್ಫೋಟದ ಸುದ್ದಿ ಪತಿ ಅಬ್ದುಲ್ ಖಾದರ್ ಅವರಿಗೆ ಗೊತ್ತೇ ಇರಲಿಲ್ಲ. ಮಧ್ಯಾಹ್ನ ವೇಳೆಗೆ ದುಬೈ ಏರ್ಪೋರ್ಟಲ್ಲಿ ಇಳಿದ ನಂತರವೇ ಪತಿ ಅಬ್ದಲ್ ಖಾದರ್ ಅವರಿಗೆ ಪತ್ನಿ ಸಾವಿನ ಆಘಾತಕಾರಿ ಸುದ್ದಿ ದೊರೆತಿದ್ದು.

ಕೂಡಲೇ ಅವರು ಮತ್ತೊಂದು ವಿಮಾನದ ಮೂಲಕ ಕೊಲೊಂಬೋಗೆ ವಾಪಸಾಗಿದ್ದಾರೆ. ರಝೀನಾ ಅವರ ಇಬ್ಬರು ಮಕ್ಕಳು ಅಮೆರಿಕದಲ್ಲಿ ವಾಸವಾಗಿದ್ದು, ತಾಯಿ ನಿಧನದ ಸುದ್ದಿ ಕೇಳಿ ಅವರೂ ಪ್ರಯಾಣ ಬೆಳೆಸಿದ್ದಾರೆ.
ಮೂಲತಃ ಕಾಸರಗೋಡಿನವರಾದ ರಝೀನಾ ಕುಟುಂಬ ತಂದೆಯ ಕಾಲದಿಂದಲೂ ಶ್ರೀಲಂಕಾದಲ್ಲಿ ವಾಸವಾಗಿದೆ. ರಝೀನಾ ಅವರು ಅಬ್ದುಲ್ ಖಾದರ್ ಅವರನ್ನು ವಿವಾಹವಾದ ಬಳಿಕ ಸುರತ್ಕಲ್ ಸಮೀಪದ ಕುಳಾಯಿಯಲ್ಲಿ ಹಲವು ವರ್ಷಗಳ ಕಾಲ ವಾಸವಾಗಿದ್ದರು. ಪತಿ ದುಬೈನಲ್ಲಿ ನೆಲೆಸಿರುವುದರಿಂದ 2 ವರ್ಷಗಳ ಹಿಂದೆ ದುಬೈಗೆ ತೆರಳಿದ್ದರು.
ಒಂದು ವಾರದ ಹಿಂದಷ್ಟೇ ಶ್ರೀಲಂಕಾದಲ್ಲಿರುವ ಕುಟುಂಬಸ್ಥರನ್ನು ಭೇಟಿಯಾಗಲು ರಝೀನಾ ಮತ್ತು ಅವರ ಪತಿ ದುಬೈನಿಂದ ಕೊಲಂಬೋಗೆ ಬಂದಿದ್ದರು. ಸಂಬಂಧಿಕರನ್ನು ಭೇಟಿಯಾದ ಬಳಿಕ ಕೊಲಂಬೋದ ಪ್ರತಿಷ್ಠಿತ ಶಾಂಗ್ರಿಲಾ ಹೊಟೇಲ್ ನಲ್ಲಿ ಉಳಿದುಕೊಂಡಿದ್ದರು.
ಪತಿ ಖಾದರ್ ಗೆ ದುಬೈಗೆ ತೆರಳುವ ಅನಿವಾರ್ಯತೆ ಇದ್ದುದರಿಂದ ಭಾನುವಾರ (ಏ.21) ಅವರನ್ನು ಕೊಲಂಬೋ ವಿಮಾನ ನಿಲ್ದಾಣದವರೆಗೆ ಹೋಗಿ ಬೀಳ್ಕೊಟ್ಟ ರಝೀನಾ, ತಾನು ತಂಗಿದ್ದ ಹೊಟೇಲ್ ಗೆ ವಾಪಸ್ ಆಗಿದ್ದರು. ಹೋಟೆಲ್ ಗೆ ಮರಳಿ ಉಪಹಾರ ಸೇವಿಸಲು ಕುಳಿತದ್ದಷ್ಟೇ, ಏಕಾಏಕಿ ಬಾಂಬ್ ಸ್ಫೋಟವಾಗಿದೆ. ತೀವ್ರ ಗಾಯಗೊಂಡ ರಝೀನಾ ಸ್ಥಳದಲ್ಲೇ ಅಸುನೀಗಿದ್ದಾರೆ.












Click it and Unblock the Notifications