ಕಂಬಳ ಕೂಟದ ರಣರೋಚಕ ಓಟ: ಬಿದ್ದರೂ ಹಗ್ಗ ಬಿಡದೆ ಸ್ವರ್ಣ ಪದಕಕ್ಕೆ ಮುತ್ತಿಕ್ಕಿದ ಓಟಗಾರ
ಮಂಗಳೂರು, ಜನವರಿ 3: ಕರಾವಳಿಯಲ್ಲಿ ನಡೆಯುತ್ತಿರುವ ಕಂಬಳ ಕೂಟ ಹೊಸ ಕ್ರೇಜ್ ಹುಟ್ಟು ಹಾಕಿದೆ. ಭಾನುವಾರ ನಡೆದ ಮೂಲ್ಕಿ ಸೀಮೆಯ ಅರಸು ಕಂಬಳದ ಫೈನಲ್ ಹಣಾಹಣಿ ರಣರೋಚಕ ಕ್ಷಣಕ್ಕೆ ಸಾಕ್ಷಿಯಾಗಿದೆ.
ಹಗ್ಗ ಹಿರಿಯ ವಿಭಾಗದ ಫೈನಲ್ ಓಟದಲ್ಲಿ ಕೆಸರು ಗದ್ದೆಯಲ್ಲಿ ಕಂಬಳ ಓಟಗಾರ ಆಯತಪ್ಪಿ ಬಿದ್ದರೂ ಕೋಣದ ಹಗ್ಗ ಬಿಡದೇ ಶರವೇಗದ ಕೋಣಗಳ ಜೊತೆ ಹೊರಳಾಡುತ್ತಾ ಗುರಿಮುಟ್ಟಿ ಚಿನ್ನದಪದಕ ಗೆದ್ದಿದ್ದಾರೆ.
ಕಂಬಳದ ಇತಿಹಾಸದಲ್ಲೇ ಫೈನಲ್ ಪಂದ್ಯದ ರೋಮಾಂಚಕಾರಿ ಕ್ಷಣ ಇದಾಗಿದ್ದು, ಕಂಬಳ ಪ್ರೇಮಿಗಳು ಓಟಗಾರನ ಕ್ಷಮತೆಗೆ ಬಲೇ ಶಹಬ್ಬಾಸ್ ಅಂದಿದ್ದಾರೆ.

ಕೊನೆಯ ಪಂದ್ಯದಲ್ಲಿ ರೋಚಕ ಘಟನೆ
ಮೂಲ್ಕಿ ಸೀಮೆಯ ಅರಸು ಕಂಬಳವಾದ ಮೂಲ್ಕಿಯ ಮೂಡಾಯಿ-ಪಡ್ಡಾಯಿ ಜೋಡುಕರೆ ಕಂಬಳದ ಭಾನುವಾರದ ಹಗ್ಗ ಹಿರಿಯ ವಿಭಾಗದ ಫೈನಲ್ ಕಣ ಎರಡು ಬಲಿಷ್ಠ ತಂಡಗಳ ನಡುವೆ ಏರ್ಪಟ್ಟಿತ್ತು. ಮೂಡಾಯಿ ಕಂಬಳದ ಕರೆಯಲ್ಲಿ ಪದವು ಕಾನಡ್ಕ ಫ್ಲೇವಿ ಡಿಸೋಜಾ ಅವರ ಕೋಣಗಳು ನಿಂತಿದ್ದರೆ, ಪಡ್ಡಾಯಿ ಕರೆಯಲ್ಲಿ ನಂದಳಿಕೆ ಶ್ರೀಕಾಂತ್ ಭಟ್ಟರ ಕೋಣಗಳು ನಿಂತಿದ್ದವು. ಕಿಕ್ಕಿರಿದ್ದು ಸೇರಿದ್ದ ಕಂಬಳ ಅಭಿಮಾನಿಗಳು ಎರಡು ಬಲಿಷ್ಠ ತಂಡಗಳ ಫೈನಲ್ ಹಣಾಹಣಿಯತ್ತ ದೃಷ್ಟಿ ಹಾಯಿಸಿದ್ದರು.

ಬಿದ್ದರೂ ಛಲ ಬಿಡದ ವಂದಿತ್ ಶೆಟ್ಟಿ
ಫ್ಲಾಗ್ ಎತ್ತುತ್ತಿದ್ದಂತೆಯೇ ಕಂಬಳ ಕೋಣಗಳು ಶರವೇಗದ ಓಟಕ್ಕೆ ಮುಂದಾಗಿದೆ. ಪದವು ಕಾನಡ್ಕದ ಮುನ್ನೆ-ಗಂತು ಕೋಣ ಕೆಸರು ಕರೆಯಲ್ಲಿ ಮಿಂಚಿನ ಹೆಜ್ಜೆಯನ್ನಿಟ್ಟರೆ,ಇತ್ತ ನಂದಳಿಕೆ ಕುಟ್ಟಿ-ರಾಜಾ ಕೋಣಗಳೂ ಗಾಳಿಯ ವೇಗದಲ್ಲಿ ಓಟ ಆರಂಭಿಸಿದ್ದವು. 130 ಮೀಟರ್ ಉದ್ದದ ಕಂಬಳದ ಕರೆಯಲ್ಲಿ ನಂದಳಿಕೆಯ ಕೋಣವನ್ನು ಓಡಿಸುತ್ತಿದ್ದ ಯುವ ಕಂಬಳ ಓಟಗಾರ ಬಂಬ್ರಾಣಬೈಲು ವಂದಿತ್ ಶೆಟ್ಟಿ 80 ಮೀಟರ್ವರೆಗೆ ಕೋಣದ ಹಗ್ಗ ಹಿಡಿದೇ ಓಡಿದ್ದರು. ಆದರೆ ಆ ಸಂಧರ್ಭದಲ್ಲಿ ಎಡವಿದ ಅವರು, ಕೆಸರು ಗದ್ದೆಯಲ್ಲಿ ಬಿದ್ದಿದ್ದಾರೆ. ಬಿದ್ದರೂ ಹಗ್ಗವನ್ನು ಬಿಡದ ವಂದಿತ್ ಶೆಟ್ಟಿ, ಶರವೇಗದಲ್ಲೂ ಕೆಸರಿನಲ್ಲೇ ಹೊರಳಾಡಿ ಹಗ್ಗ ಬಿಗಿ ಹಿಡಿದು 11.50 ಸೆಕೆಂಡ್ನಲ್ಲಿ ಗುರಿ ತಲುಪಿದ್ದಾರೆ. ಈ ಮೂಲಕ ರೋಚಕ ಫೈನಲ್ ಪಂದ್ಯದಲ್ಲಿ ಕೋಣಗಳ ಯಜಮಾನನಿಗೆ ಸ್ವರ್ಣ ಪದಕದ ಗೌರವ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಕಂಬಳದ ರೋಮಾಂಚನಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಎರಡು ವರ್ಷದಿಂದ ಕಂಬಳದಲ್ಲಿ ಕೋಣಗಳನ್ನು ಓಡಿಸುತ್ತಿರುವ ವಂದಿತ್ ಶೆಟ್ಟಿಗೆ ಕೋಣಗಳ ಯಜಮಾನ ಶ್ರೀಕಾಂತ್ ಭಟ್ ರವರೇ ತರಬೇತಿ ಕೊಡಿಸಿದ್ದರು. ಮೂಲ್ಕಿ ಕಂಬಳದ ಫೈನಲ್ ಪಂದ್ಯದ ರೋಮಾಂಚನಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಂಬಳ ಪ್ರಿಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಓಟಗಾರ ಬಿದ್ದರೂ, ಹಗ್ಗ ಬಿಟ್ಟರೂ ಕೋಣಗಳು ತಮ್ಮ ಗುರಿ ಮುಟ್ಟಿದ ಅನೇಕ ಘಟನೆಗಳು ನಡೆದಿದೆ. ಬಿದ್ದರೂ ಹಗ್ಗ ಬಿಡದೇ ಓಟಗಾರ ಕೊನೆಯವರೆಗೆ ಕೆಸರಲ್ಲೇ ಹೊರಳಿ ಬಂದ ಘಟನೆಗಳೂ ನಡೆದಿದೆ. ಆದರೆ ಫೈನಲ್ ಪಂದ್ಯದಲ್ಲಿ ಈ ರೀತಿಯ ಸನ್ನಿವೇಶ ನಡೆದಿರುವುದು ಇದೇ ಮೊದಲಾಗಿದೆ. ಕಂಬಳದಲ್ಲಿ ಓಡುವ ಕೋಣಗಳು ಯಜಮಾನ ಸಾಕಿದ ಋಣವನ್ನು ಮೈ ಚಳಿ ಬಿಟ್ಟು ಓಡಿ ಪದಕ ಗೆಲ್ಲುವ ಮೂಲಕ ತೀರಿಸಿದ ಆನೇಕ ಘಟನೆಗಳೂ ಕಂಬಳ ಕೂಟದಲ್ಲಿ ನಡೆದಿದೆ..

ಜೋಡುಕರೆ ಅರಸು ಕಂಬಳ ಕೂಟದ ಫಲಿತಾಂಶ
ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆ "ಮೂಡು - ಪಡು" ಜೋಡುಕರೆ ಅರಸು ಕಂಬಳ ಕೂಟದ ಫಲಿತಾಂಶ ಈ ರೀತಿಯಾಗಿದೆ.
ಕಂಬಳ ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ
ಕನೆಹಲಗೆ: 05 ಜೊತೆ
ಅಡ್ಡಹಲಗೆ: 07 ಜೊತೆ
ಹಗ್ಗ ಹಿರಿಯ: 15 ಜೊತೆ
ನೇಗಿಲು ಹಿರಿಯ: 26 ಜೊತೆ
ಹಗ್ಗ ಕಿರಿಯ: 17 ಜೊತೆ
ನೇಗಿಲು ಕಿರಿಯ: 80 ಜೊತೆ
ಒಟ್ಟು ಕೋಣಗಳ ಸಂಖ್ಯೆ: 150 ಜೊತೆ
ಕನೆಹಲಗೆ
( ನೀರು ನೋಡಿ ಬಹುಮಾನ )
ಪ್ರಥಮ: ಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
ದ್ವಿತೀಯ: ಬಾರ್ಕೂರು ಶಾಂತಾರಾಮ ಶೆಟ್ಟಿ
ಹಲಗೆ ಮುಟ್ಟಿದವರು: ಬೈಂದೂರು ರಾಘವೇಂದ್ರ ಪೂಜಾರಿ
ಅಡ್ಡ ಹಲಗೆ
ಪ್ರಥಮ: ಮೋರ್ಲ ಪ್ರಾಪ್ತಿ ಗಿರೀಶ್ ಆಳ್ವ
ಹಲಗೆ ಮುಟ್ಟಿದವರು: ಮುಳಿಕಾರು ಕೆವುಡೇಲು ಅಣ್ಣಿ ದೇವಾಡಿಗ
ದ್ವಿತೀಯ: ಮೇರಮಜಲ್ ಮಿಷನ್ ಗೋಡ್ವಿನ್ ವಾಸ್
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ
ಹಗ್ಗ ಹಿರಿಯ
ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ "ಬಿ"
ಓಡಿಸಿದವರು: ಬಂಬ್ರಾಣ ಬೈಲು ವಂದಿತ್ ಶೆಟ್ಟಿ
ದ್ವಿತೀಯ: ಪದವು ಕಾನಡ್ಕ ಫ್ಲೇವಿ ಡಿಸೋಜ "ಬಿ"
ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ
ಹಗ್ಗ ಕಿರಿಯ
ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್
ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್
ದ್ವಿತೀಯ: ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್
ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್
ನೇಗಿಲು ಹಿರಿಯ
ಪ್ರಥಮ: ಬೆಳ್ಳಿಪ್ಪಾಡಿ ಕೈಪ ಕೇಶವ ಮಂಕು ಭಂಡಾರಿ "ಬಿ"
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ಮೂಡಬಿದ್ರಿ ನ್ಯೂ ಪಡಿವಾಳ್ಸ್ ಹಾರ್ದಿಕ್ ಹರ್ಷವರ್ಧನ ಪಡಿವಾಳ್
ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ
ನೇಗಿಲು ಕಿರಿಯ
ಪ್ರಥಮ: ವರಪಾಡಿ ಬಡಗುಮನೆ ದಿವಾಕರ ಚೌಟ
ಓಡಿಸಿದವರು: ಪಟ್ಟೆ ಗುರುಚರಣ್
ದ್ವಿತೀಯ: ಕಾರ್ಕಳ ಗುಂಡ್ಯಡ್ಕ ದುರ್ಗಾಪ್ರಸಾದ್ ನಿಲಯ ಪ್ರಶಾಂತ್ ಅನ್ನು ಶೆಟ್ಟಿ "ಎ"
ಓಡಿಸಿದವರು: ಭಟ್ಕಳ ಶಂಕರ್












Click it and Unblock the Notifications