Vande Bharat Express: ಕರಾವಳಿ ಭಾಗದ ಜನರಿಗೆ ಸಿಹಿಸುದ್ದಿ ವಂದೇ ಭಾರತ್ ಸೀಟುಗಳ ಸಂಖ್ಯೆ ಹೆಚ್ಚಳ
ಮಂಗಳೂರು, ಫೆಬ್ರವರಿ 15: ಕರ್ನಾಟಕದ ಕರಾವಳಿ ಭಾಗದ ಜನರಿಗೆ ಸಿಹಿಸುದ್ದಿಯೊಂದಿದೆ. ದೇಶದಲ್ಲಿ ಅತಿ ಹೆಚ್ಚು ಪ್ರಯಾಣಿಕರ ಬೇಡಿಕೆ ಇರುವ ವಂದೇ ಭಾರತ್ ರೈಲು ಮಾರ್ಗದಲ್ಲಿ ತಿರುವನಂತಪುರಂ-ಮಂಗಳೂರು ವಯಾ ಅಲಪ್ಪುಝಾ ಸಹ ಒಂದು. ಈ ಮಾರ್ಗದ ರೈಲಿನ ಬೋಗಿಗಳ ಸಂಖ್ಯೆಯನ್ನು ಏರಿಕೆ ಮಾಡಲಾಗುತ್ತಿದ್ದು, ಇದರಿಂದಾಗಿ ಸೀಟುಗಳ ಸಂಖ್ಯೆ ಸಹ 1,336ಕ್ಕೆ ಏರಿಕೆಯಾಗಲಿದೆ.
ರೈಲು ಸಂಖ್ಯೆ 20631/ 20632 ತಿರುವನಂತಪುರಂ- ಮಂಗಳೂರು ನಡುವೆ ಸಂಚಾರ ನಡೆಸುತ್ತದೆ. ಸದ್ಯ ಈ ರೈಲು 8 ಬೋಗಿಯನ್ನು ಹೊಂದಿದೆ. ಮುಂದಿನ 10 ದಿನಗಳಲ್ಲಿ ಕೇರಳದ 2ನೇ ವಂದೇ ಭಾರತ್ ರೈಲಾದ ಇದನ್ನು 20 ಬೋಗಿಯ ರೈಲಾಗಿ ಪರಿವರ್ತನೆ ಮಾಡಲಾಗುತ್ತದೆ.

ಸದ್ಯ ರೈಲು 512 ಸೀಟುಗಳನ್ನು ಹೊಂದಿದೆ. 20 ಬೋಗಿಯ ರೈಲಾಗಿ ಪರಿವರ್ತನೆಗೊಂಡ ಬಳಿಕ ರೈಲಿನ ಸೀಟುಗಳ ಸಂಖ್ಯೆ 1,336ಕ್ಕೆ ಏರಿಕೆಯಾಗಲಿದೆ. ಇದರಿಂದಾಗಿ ಕರ್ನಾಟಕದ ಕರಾವಳಿ ನಗರ ಮಂಗಳೂರಿನಿಂದ ಕೇರಳಕ್ಕೆ ಸಂಚಾರ ನಡೆಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
2ನೇ ವಂದೇ ಭಾರತ್ ರೈಲು: ತಿರುವನಂತಪುರಂ-ಮಂಗಳೂರು ವಯಾ ಅಲಪ್ಪುಝಾ ಕೇರಳದ 2ನೇ ವಂದೇ ಭಾರತ್ ರೈಲು. 2025ರ ಜನವರಿ 10ರಂದು ರಾಜ್ಯದ ಮೊದಲ ವಂದೇ ಭಾರತ್ ರೈಲು ತಿರುವನಂತಪುರಂ-ಕಾಸರಗೋಡು ರೈಲನ್ನು 20 ಬೋಗಿ ರೈಲಾಗಿ ಪರಿವರ್ತನೆ ಮಾಡಲಾಗಿದೆ. ಈಗ ರಾಜ್ಯದ 2ನೇ ರೈಲು ಸಹ 20 ಬೋಗಿಯಾಗಿ ಬದಲಾಗುತ್ತಿದೆ.
ದಕ್ಷಿಣ ರೈಲ್ವೆಗೆ ನಿಯೋಜನೆಗೊಂಡಿರುವ ವಂದೇ ಭಾರತ್ ರೈಲು ಬೋಗಿಗಳು ಈಗಾಗಲೇ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಿಂದ ಹೊರಟಿವೆ. ಮುಂದಿನ 10 ದಿನದಲ್ಲಿ ಇವು ಕೇರಳ ತಲುಪಲಿದ್ದು, ರೈಲು 20 ಬೋಗಿಯಾಗಿ ಬದಲಾಗಲಿದೆ.
ಮಂಗಳೂರುನಿಂದ ಬೆಳಗ್ಗೆ 6.25ಕ್ಕೆ ಹೊರಡುವ ರೈಲು ಮಧ್ಯಾಹ್ನ 3.05ಕ್ಕೆ ತಿರುವನಂತಪುರಕ್ಕೆ ತಲುಪುತ್ತದೆ. ತಿರುವನಂತಪುರದಿಂದ ಸಂಜೆ 4.05ಕ್ಕೆ ಹೊರಡುವ ಈ ರೈಲು 12.40ಕ್ಕೆ ಮಂಗಳೂರು ತಲುಪುತ್ತದೆ. ರೈಲು ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ 20 ಬೋಗಿಯ ರೈಲಾಗಿ ಇದನ್ನು ಪರಿವರ್ತನೆ ಮಾಡಲಾಗುತ್ತದೆ.
ರೈಲ್ವೆ ಮಂಡಳಿ ವಂದೇ ಭಾರತ್ ರೈಲಿಗಿರುವ ಬೇಡಿಕೆ ನೋಡಿಕೊಂಡು ಕೇರಳದ 2 ವಂದೇ ಭಾರತ್ ರೈಲುಗಳನ್ನು 20 ಬೋಗಿಯ ರೈಲಾಗಿ ಪರಿವರ್ತನೆ ಮಾಡಲಾಗುತ್ತದೆ ಎಂದು ಹೇಳಿತ್ತು. ಮೊದಲ ರೈಲು ಈಗಾಗಲೇ 20 ಬೋಗಿ ಆಗಿದ್ದು, 2ನೇ ರೈಲು 10 ದಿನದಲ್ಲಿ 20 ಬೋಗಿಯನ್ನು ಒಳ್ಳಗೊಳ್ಳಲಿದೆ.
ಮಂಗಳೂರು ರೈಲು ನಿಲ್ದಾಣದಲ್ಲಿ ಹೊಸ ಪಿಟ್ಲೈನ್ ನಿರ್ಮಾಣವಾಗುತ್ತಿದೆ. ಈ ಪಿಟ್ ಲೈನ್ 20 ಬೋಗಿಯ ರೈಲು ಸ್ವಚ್ಛತೆ, ನಿರ್ವಹಣೆ ಮಾಡುವ ಮೂಲ ಸೌಕರ್ಯವನ್ನು ಹೊಂದಿದೆ. ಪಿಟ್ ಲೈನ್ ಎಲೆಕ್ಟ್ರಿಕ್ ಓವರ್ ಹೆಡ್ ಲೈನ್ ಹೊಂದಿದ್ದು, ಈ ಕಾಮಗಾರಿ 10 ದಿನದಲ್ಲಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೊದಲು ರೈಲು ತಿರುವನಂತಪುರಂ-ಕಾಸರಗೋಡು ನಡುವೆ ಮಾತ್ರ ಸಂಚಾರ ನಡೆಸುತ್ತಿತ್ತು. ಆದರೆ ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ಅದನ್ನು ಮಂಗಳೂರು ತನಕ ವಿಸ್ತರಣೆ ಮಾಡಲಾಗಿದೆ. ಶೇ 100ರಷ್ಟು ಸೀಟುಗಳು ಭರ್ತಿಯಾಗುತ್ತಿದ್ದು, ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ತಿರುವನಂತಪುರಂ-ಮಂಗಳೂರು ವಂದೇ ಭಾರತ್ ರೈಲು ಮಂಗಳೂರು ನಗರಕ್ಕೆ ಬರುವ 2ನೇ ವಂದೇ ಭಾರತ್ ರೈಲಾಗಿದೆ. ಮಂಗಳೂರು ಮತ್ತು ಗೋವಾದ ಮಡಗಾಂವ್ ನಡುವೆ ಮತ್ತೊಂದು ವಂದೇ ಭಾರತ್ ರೈಲು ಓಡುತ್ತಿದೆ. ಇದನ್ನು ಕೇರಳ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆಯೂ ಇದೆ.












Click it and Unblock the Notifications