ಆರ್ ಟಿಐ ಮೊಟಕುಗೊಳಿಸಿ ಸರ್ಕಾರ ಜನರ ಹಕ್ಕು ಕಸಿಯುತ್ತಿದೆ- ಯುಟಿ ಖಾದರ್
ಮಂಗಳೂರು, ಜುಲೈ25: "ಆರ್ ಟಿಐ ಹಕ್ಕನ್ನು ಮೊಟಕುಗೊಳಿಸುವ ಕೇಂದ್ರ ಸರಕಾರ ಜನರ ಹಕ್ಕನ್ನು ಕಸಿಯಲು ಯತ್ನಿಸುತ್ತಿದೆ. ಭ್ರಷ್ಟಾಚಾರಕ್ಕೆ ಪ್ರೋತ್ಸಾಹಿಸುತ್ತಿದೆ" ಎಂದು ಮಾಜಿ ಸಚಿವ ಯು.ಟಿ. ಖಾದರ್ ಕಿಡಿಕಾರಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, "ಕೇಂದ್ರ ಸರಕಾರ ಮಸೂದೆ ತಿದ್ದುಪಡಿ ಮೂಲಕ ಆರ್ ಟಿಐ ಕಾಯ್ದೆಯನ್ನೇ ಬದಲಿಸುತ್ತಿದೆ. ಸರಕಾರದ ಕೆಲವು ಯೋಜನೆಗಳ ಮಾಹಿತಿ ಪಡೆಯಲು ಇನ್ನು ಸರಕಾರದ ಅನುಮತಿ ಬೇಕಾಗುತ್ತದೆ. ಇದರಿಂದ ಪಾರದರ್ಶಕತೆ ಸಾಧ್ಯವಿಲ್ಲ. ಆರ್ ಟಿಐ ಕಾಯ್ದೆ ಭಷ್ಟಾಚಾರದ ವಿರುದ್ಧ ಬ್ರಹ್ಮಾಸ್ತ್ರವಾಗಿತ್ತು. ಅದನ್ನೇ ಸರಕಾರ ಜನರಿಂದ ಕಿತ್ತುಕೊಳ್ಳುತ್ತಿದೆ" ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

"ಮೈತ್ರಿ ಸರಕಾರಕ್ಕೆ ವಿಶ್ವಾಸ ಮತದಲ್ಲಿ ಸೋಲಾಗಿದೆ. ಈ ಸೋಲನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇವೆ. ಸರಕಾರದಲ್ಲಿ ನಗರಾಭಿವೃದ್ಧಿ ಸಚಿವನಾಗಿ ಬಹಳಷ್ಟು ಕಾರ್ಯಗಳನ್ನು ಮಾಡಿದ್ದೇನೆ. ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಮರಳು ಮಾಫಿಯಾ, ಸ್ಕಿಲ್ ಗೇಮ್, ಇಸ್ಪೀಟ್ ಕ್ಲಬ್ ಕಡಿವಾಣ ಹಾಕಲು ನಿರ್ದೇಶನ ನೀಡಿದ್ದೆ. ಸಹಕಾರ ಕೊಟ್ಟ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ" ಎಂದರು.











Click it and Unblock the Notifications