ಕುಕ್ಕೆ ದೇಗುಲ ಭೂಮಿ ಕಬಳಿಸಿಲ್ಲ: ಯುಟಿ ಖಾದರ್
ಮಂಗಳೂರು, ಮಾ.28: ಶ್ರೀಕ್ಷೇತ್ರ ಕುಕ್ಕೆ ಸುಬ್ರಮಣ್ಯ ದೇಗುಲಕ್ಕೆ ಸೇರಿರುವ ಭೂಮಿಯನ್ನು ಸಚಿವ ಯುಟಿ ಖಾದರ್ ಅವರ ಸೋದರರು ಕಬಳಿಸಿದ್ದಾರೆ ಎಂಬ ಆರೋಪಕ್ಕೆ ಸಚಿವ ಖಾದರ್ ಸ್ಪಷ್ಟನೆ ನೀಡಿದ್ದಾರೆ. ಇದು ಬಿಜೆಪಿ ಮಾಡುತ್ತಿರುವ ಕುತಂತ್ರವಾಗಿದ್ದು, ನಮ್ಮ ಕುಟುಂಬ ಈ ರೀತಿ ಕೃತ್ಯ ಎಸಗಿಲ್ಲ ಎಂದು ಹೇಳಿದ್ದಾರೆ.
ಕುಕ್ಕೆ ಸುಬ್ರಮಣ್ಯ ದೇಗುಲಕ್ಕೆ ಸೇರಿದ ಬೆಂಗಳೂರಿನಲ್ಲಿರುವ ಜಮೀನನ್ನು ಸಚಿವ ಯು.ಟಿ ಖಾದರ್ ಅವರು ತಮ್ಮ ಪ್ರಭಾವ ಬಳಸಿಕೊಂಡು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿ ತಮ್ಮ ಸೋದರ ನಡೆಸುವ ಯುಟಿ ನಸೀಮಾ ಫರೀದ್ ಅವರ ಸ್ಮಾರಕ ದತ್ತಿ ಸಂಸ್ಥೆಗೆ ವರ್ಗಾಯಿಸಿದ್ದಾರೆ ಎಂಬ ಆರೋಪ ಇತ್ತೀಚೆಗೆ ಕೇಳಿ ಬಂದಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಯುಟಿ ಖಾದರ್, ಬಿಜೆಪಿ ಅಭ್ಯರ್ಥಿ ನಳೀನ್ ಕುಮಾರ್ ಕಟೀಲ್ ಅವರು ಈ ರೀತಿ ನಮ್ಮ ಕುಟುಂಬದ ಮೇಲೆ ಅನಾವಶ್ಯಕವಾಗಿ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಆರೋಪಕ್ಕೆ ಸಚಿವ ಖಾದರ್ ಸ್ಪಷ್ಟನೆ
2012-13ರಲ್ಲಿ ಬಿಡಿಎ ಸಿಎ ನಿವೇಶನಕ್ಕಾಗಿ ನೀಡಿದ ಜಾಹೀರಾತಿನ ಅಡಿಯಲ್ಲಿ ನನ್ನ ಸೋದರ ನಡೆಸುವ ಟ್ರಸ್ಟಿಗೆ ಜಮೀನು ಸಿಕ್ಕಿದೆ. ವಿಕಲ ಚೇತನ, ಅಂಗವಿಕಲರಿಗೆ ಸಿಗುವ ವಿಭಾಗದಡಿಯಲ್ಲಿ ನಿವೇಶನ ಲಭ್ಯವಾಗಿದ್ದು ಇದನ್ನು 2004ರಲ್ಲೇ ಸ್ಥಾಪಿತವಾದ ಯುಟಿ ನಸೀಮಾ ಫರೀದ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಬಳಕೆ ಮಾಡಿಕೊಂಡಿದೆ.
ನಿವೇಶನ ಮಂಜೂರು ಅಕ್ರಮವಾಗಿಲ್ಲ
ಕುಕ್ಕೆ ಸುಬ್ರಮಣ್ಯ ದೇಗುಲದ ಟ್ರಸ್ಟ್ ಕೂಡಾ ಇದೇ ಜಾಗಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ, ವಿಶೇಷ ಕ್ಯಾಟಗರಿ ಅಡಿಯಲ್ಲಿ ನಮಗೆ ನಿವೇಶನ ಸಿಕ್ಕಿದೆ. ಅರ್ಹತೆ ಇದ್ದ ಕಾರಣ ಬಿಡಿಎ ಮುಖ್ಯಸ್ಥ ಶ್ಯಾಮ್ ಭಟ್, ಮೂವರು ಐಎಎಸ್ ಅಧಿಕಾರಿಗಳಿದ್ದ ಸಮಿತಿ ನನ್ನ ತಾಯಿ ಹೆಸರಿಗೆ ನಿವೇಶನ ಮಂಜೂರು ಮಾಡಿದೆ.
ಟ್ರಸ್ಟ್ ಜತೆ ಯಾವುದೇ ಸಂಬಂಧವಿಲ್ಲ.
ನನಗೆ ಟ್ರಸ್ಟ್ ಜತೆ ಯಾವುದೇ ಸಂಬಂಧವಿಲ್ಲ. ನಾನು ನನ್ನ ಪ್ರಭಾವ ಬಳಸಿ ನಿವೇಶನ ಮಂಜೂರು ಮಾಡಿಸಿಲ್ಲ. ಅರ್ಜಿ ಸಲ್ಲಿಸಿದ್ದವರು 39,958 ಪಾವತಿಸಿದರು. ಸಾಮಾಜಿಕ ಕಳಕಳಿಯಿಂದ ದೇಗುಲ ಟ್ರಸ್ಟ್ ಅರ್ಜಿ ಸಲ್ಲಿಸಿದ್ದರೆ ಅವರಿಗೆ ಸಿಗುತ್ತಿತ್ತು ಎಂದಿದ್ದಾರೆ.
ಕಾನೂನಿನ ಪ್ರಕಾರ ದೂರು ಸಲ್ಲಿಸಿ
ಇಷ್ಟಾದರೂ ಯಾರಿಗಾದರೂ ಅನುಮಾನವಿದ್ದರೆ ಕಾನೂನಿನ ಪ್ರಕಾರ ದೂರು ಸಲ್ಲಿಸಿ ಕ್ರಮ ಜರುಗಿಸಬಹುದು. ನಾನು ನಳೀನ್ ಕುಮಾರ್ ಕಟೀಲ್ ಅಥವಾ ಜಯರಾಮ್ ಶೆಟ್ಟಿ ಅವರಷ್ಟು ಬುದ್ಧಿವಂತನಲ್ಲ. ಮೂರು ಬಾರಿ ಶಾಸಕನಾಗಿ ಸ್ವಲ್ಪ ನಿವೇಶನ ಹೊಂದಿದ್ದೇನೆ. ನಳೀನ್ ಅವರು ಸಂಸದರಾದ ಮೂರೇ ತಿಂಗಳಿಗೆ ಬಿಡಿಎ ಸೈಟ್ ಪಡೆದುಕೊಂಡರು. ನೋಡಿದರೆ ನನ್ನ ಮೇಲೆ ಅಪಾದನೆ ಮಾಡುತ್ತಾರೆ ಎಂದು ಖಾದರ್ ಸಿಡಿಮಿಡಿಗೊಂಡರು.