ಕಾಂಗ್ರೆಸ್ ನಾಯಕರನ್ನು ಕುತಂತ್ರದ ಮೂಲಕ ಬಂಧಿಸುವ ಕೆಲಸ ನಡೆಯುತ್ತಿದೆ - ಯು.ಟಿ.ಖಾದರ್
ಮಂಗಳೂರು, ಆಗಸ್ಟ್ 31: "ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಹಾಗೂ ಆದಾಯ ತೆರಿಗೆ ಇಲಾಖೆ ಮೂಲಕ ಬಂಧಿಸುವ ಷಡ್ಯಂತ್ರ ನಡೆಯುತ್ತಿದೆ. ಕಾಂಗ್ರೆಸ್ ನಾಯಕರನ್ನು ಕುತಂತ್ರದಿಂದ ಬಂಧಿಸುವ ಕೆಲಸ ಮಾಡಲಾಗುತ್ತಿದೆ" ಎಂದು ಶಾಸಕ ಯು.ಟಿ.ಖಾದರ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, "ಕಾನೂನಾತ್ಮಕವಾಗಿ ಡಿಕೆಶಿ ಅವರದ್ದೇ ರೀತಿ ಹೋರಾಟ ಮಾಡುತ್ತಾರೆ. ಡಿಕೆಶಿ ಜತೆ ನಾವಿದ್ದೇವೆ. ಕಾನೂನು ಹೋರಾಟದಲ್ಲಿಯೂ ಅವರು ಜಯಗಳಿಸುವ ವಿಶ್ವಾಸ ಇದೆ" ಎಂದರು.
"ಯುಪಿಎ ಸರಕಾರ ಆಡಳಿತದಲ್ಲಿದ್ದಾಗ ಆರ್ಬಿಐನಲ್ಲಿ 3.90 ಲಕ್ಷ ಕೋಟಿ ರೂಪಾಯಿ ಹಣ ಆರ್ಬಿಐನಲ್ಲಿತ್ತು. ಅದರಲ್ಲಿ 1.76 ಲಕ್ಷ ಕೋಟಿ ಹಣವನ್ನು ಕೇಂದ್ರ ಪಡೆದಿದೆ. ದೇಶಕ್ಕಾಗಿ ನಾವು ಈ ರೀತಿ ಮಾಡುತ್ತಿದ್ದೇವೆ ಎಂದು ಹೇಳಬಹುದು. ಆದರೆ ಪಾರದರ್ಶಕ ಆಡಳಿತದ ಬಗ್ಗೆ ಮಾತನಾಡುವ ಕೇಂದ್ರ ಸರ್ಕಾರ ಈ ಹಣವನ್ನು ಯಾಕಾಗಿ ಪಡೆದಿದೆ ಎಂಬುದನ್ನು ಜನಸಾಮಾನ್ಯರಿಗೆ ತಿಳಿಸಬೇಕು. ದೇಶದ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಹೂಡಿಕೆಗೆ ಮುಂದಾಗುವವರು ಹಿಂದೇಟು ಹಾಕುತ್ತಾರೆ" ಎಂದು ಹೇಳಿದರು.
"ರಾಜ್ಯದ ಪ್ರವಾಹ ಪರಿಸ್ಥಿತಿಯ ಸಂದರ್ಭ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭೇಟಿ ನೀಡಿ ಸಂತೈಸುತ್ತಾರೆ ಎಂದು ಇಲ್ಲಿನ ಸಂತ್ರಸ್ತರು ಕಾಯುತ್ತಿದ್ದರೆ, ಅವರು ಭೂತಾನ್ನ ಮಕ್ಕಳ ಜತೆ ಆಡುತ್ತಿರುವ ವರದಿ, ಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ. ಇದೆಂತಹ ವಿಪರ್ಯಾಸ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭ, "ಕರಾವಳಿಯಲ್ಲಿ ಉಗ್ರರು ನುಸುಳಿದ್ದಾರೆಂಬ ಮಾಹಿತಿ ಹರಿದಾಡುತ್ತಿದೆ. ಈ ಬಗ್ಗೆ ಉಡುಪಿ ಎಸ್ಪಿ ಕೇಳಿದರೆ ಮಾಹಿತಿ ಇಲ್ಲ. ಕರಾವಳಿ ಪಡೆಗೂ ಮಾಹಿತಿ ಇಲ್ಲ. ಬೀಟ್ ಪೊಲೀಸರು ಈ ಕುರಿತಾದ ಕರಪತ್ರ ಅಂಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸ್ ವರಿಷ್ಠರಿಗೇ ಮಾಹಿತಿ ಇಲ್ಲದೆ ನೋಟೀಸು ಅಂಟಿಸುವ ಅಧಿಕಾರ ಬೀಟ್ ಪೊಲೀಸರಿಗೆ ನೀಡಿದವರು ಯಾರು? ಈ ಬಗ್ಗೆ ತನಿಖೆಯಾಗಬೇಕು" ಎಂದು ಕಿಡಿಕಾರಿದರು.












Click it and Unblock the Notifications