ಗುಜರಿ ವ್ಯಾಪಾರಿಗಳಿಂದ 83 ಕೋಟಿ ರೂಪಾಯಿ ಜಿಎಸ್ ಟಿ ವಂಚನೆ!
ಮಂಗಳೂರು, ಜೂನ್ 11: ಗುಜರಿ ವ್ಯಾಪಾರಿಗಳಿಬ್ಬರು ನಕಲಿ ಬಿಲ್ ತಯಾರಿಸಿ ಜಿಎಸ್ ಟಿ ಪಾವತಿಸದೆ 83 ಕೋಟಿ ರೂಪಾಯಿ ವಂಚಿಸಿದ ಪ್ರಕರಣವನ್ನು ಮಂಗಳೂರಿನ ಕೇಂದ್ರೀಯ ಜಿಎಸ್ ಟಿ ಕಮಿಷನರೇಟ್ ಬಯಲಿಗೆಳೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಗುಜರಿ ವ್ಯಾಪಾರಿಗಳನ್ನು ಬಂಧಿಸಲಾಗಿದೆ.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಸ್ಕ್ರಾಪ್ ಉದ್ಯಮ ನಡೆಸುತ್ತಿರುವ ತೌಹೀದ್ ಸ್ಕ್ರಾಪ್ ಡೀಲರ್ನ ಪಿ.ಕೆ. ಅಬ್ದುಲ್ ರಹೀಂ ಮತ್ತು ಎಂ.ಕೆ. ಟ್ರೇಡರ್ಸ್ ನ ಅಬ್ದುಲ್ ಖಾದರ್ ಕೂಳೂರು ಚಾಯಬ್ಬ ಎಂಬುವರನ್ನು ಬಂಧಿಸಲಾಗಿದೆ.
ಮಂಗಳೂರಿನ ಕೇಂದ್ರೀಯ ಜಿಎಸ್ ಟಿ ಕಮಿಷನರೇಟ್ ನ ತೆರಿಗೆಗಳ್ಳತನ ಪತ್ತೆ ತಂಡ (ಆಂಟಿ ಇವೇಶನ್ ವಿಂಗ್) ಖಚಿತ ಮಾಹಿತಿ ಮೇರೆಗೆ ಕೆಲವು ದಿನಗಳಿಂದ ಕಾರ್ಯಾಚರಣೆ ನಡೆಸಿ ಈ ವಂಚನೆಯನ್ನು ಬಯಲಿಗೆಳೆದಿದೆ. ಈ ಸಂಸ್ಥೆಗಳು ರಾಜ್ಯದ ವಿವಿಧೆಡೆ ವ್ಯವಹಾರ ಸಂಬಂಧ ಹೊಂದಿದ್ದು, ಎರಡು ದಿನಗಳ ಹಿಂದೆ ಬೆಳ್ತಗಂಡಿ ಗುಜರಿ ಅಂಗಡಿಗೂ ಜಿಎಸ್ ಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಎರಡೂ ಸಂಸ್ಥೆಗಳು ಸುಮಾರು 15 ಕೋಟಿ ರೂಪಾಯಿ ಮೊತ್ತದ ನಕಲಿ ಬಿಲ್ ಬಳಕೆ ಮಾಡಿದ್ದು, ಒಟ್ಟು 83 ಕೋಟಿ ರೂಪಾಯಿ ಮೊತ್ತದ ಸರಕು ಇದರಲ್ಲಿ ಒಳಗೊಂಡಿದೆ ಎಂದು ಕೇಂದ್ರೀಯ ಜಿಎಸ್ ಟಿ ಕಮಿಷನರ್ ಧರ್ಮ ಸಿಂಗ್ ಪ್ರಕಟಣೆ ತಿಳಿಸಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಸಂಸ್ಥೆಗಳ ಮಾಲೀಕರು ನೋಂದಣಿ ರಹಿತ ವ್ಯಾಪಾರಿಗಳಿಂದ ಖರೀದಿಸಿದ ಲೋಹದ ಗುಜರಿ ಸಾಮಗ್ರಿಗಳನ್ನು ಅಲ್ಯೂಮಿನಿಯಂ ಎಂಎಸ್ ಕಾಪರ್ ರಾಡ್ಸ್ ಇಂಗೊಟ್ಸ್ ಕಾಸ್ಟಿಂಗ್ಸ್ ಮತ್ತಿತರ ಸಾಮಗ್ರಿಗಳ ತಯಾರಿಕಾ ಸಂಸ್ಥೆಗಳಿಗೆ ಪೂರೈಕೆ ಮಾಡುವ ಸಂದರ್ಭದಲ್ಲಿ ಜಿಎಸ್ ಟಿ ಪಾವತಿಯಿಂದ ತಪ್ಪಿಸಿಕೊಳ್ಳಲು ಈ ನಕಲಿ ಐಟಿಸಿಗಳನ್ನು ಉಪಯೋಗಿಸುತ್ತಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.












Click it and Unblock the Notifications