ಭಾರತೀಯ ಸೇನೆ ಸೇರಲು ಕರಾವಳಿ ಯುವಕರಲ್ಲಿ ಅತ್ಯುತ್ಸಾಹ
ಭಾರತೀಯ ಸೇನೆ ಸೇರಲು ಕರಾವಳಿಯ ಜನ ಹಿಂದೇಟು ಹಾಕುತ್ತಿದ್ದುದೇ ಹೆಚ್ಚು. ಆದರೆ ಈ ಬಾರಿ ಹಾಗಲ್ಲ. ಸೇನೆ ಸೇರಲು ದಕ್ಷಿಣ ಕನ್ನಡದ ಯುವಕರು ಅತ್ಯಾಸಕ್ತಿ ತೋರಿದ್ದು ಪರಿಣಾಮ ಸೇನೆ ಸೇರಲು ಅರ್ಜಿ ಸಲ್ಲಿಸಿದವರ ಸಂಖ್ಯೆ 10 ಪಟ್ಟು ಹೆಚ್ಚಾಗಿದೆ.
ಮಂಗಳೂರು, ಏಪ್ರಿಲ್ 28: ದೇಶ ಸೇವೆಯೇ ಈಶ ಸೇವೆ ಎಂಬ ಮಾತೊಂದಿದೆ. ಇದೇ ರೀತಿ ಭಾರತೀಯ ಸೈನಿಕರು ರಾತ್ರಿ ಹಗಲೆನ್ನದೆ ದೇಶದ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಡುತ್ತಾರೆ. ನಾವು ನಮ್ಮ ಮನೆಗಳಲ್ಲಿ ಸುರಕ್ಷಿತವಾಗಿರಲು ಕಾರಣವೆಂದರೆ ಗಡಿ ಕಾಯುವ ನಮ್ಮ ಯೋಧರು.
ಆದರೆ ಭಾರತೀಯ ಸೇನೆ ಸೇರಲು ಕರಾವಳಿಯ ಜನ ಹಿಂದೇಟು ಹಾಕುತ್ತಿದ್ದುದೇ ಹೆಚ್ಚು. ಆದರೆ ಈ ಬಾರಿ ಹಾಗಲ್ಲ. ಸೇನೆ ಸೇರಲು ದಕ್ಷಿಣ ಕನ್ನಡದ ಯುವಕರು ತಾ ಮುಂದು ನಾ ಮುಂದು ಅಂತ ಬಂದಿದ್ದಾರೆ. ಪರಿಣಾಮ ಸೇನೆ ಸೇರಲು ಅರ್ಜಿ ಸಲ್ಲಿಸಿದವರ ಸಂಖ್ಯೆ 10 ಪಟ್ಟು ಹೆಚ್ಚಾಗಿದೆ.[ನಾನು ಈಶ್ವರಪ್ಪ ಅವರನ್ನು ಬೆಂಬಲಿಸುತ್ತೇನೆ: ಐವನ್ ಡಿಸೋಜಾ]

ಪ್ರತಿ ವರ್ಷದಂತೆ ಈ ವರ್ಷ ಕೂಡಾ ಭಾರತೀಯ ಸೇನೆಯಲ್ಲಿ ಹಲವಾರು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಆರಂಭವಾಗಿದೆ.ಇದಕ್ಕೆ ಪೂರಕವಾಗಿ ಈ ವರ್ಷ ನಡೆಯುವ ಸೇವಾ ನೇಮಕಾತಿ ರ್ಯಾಲಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಅರ್ಜಿ ಸಲ್ಲಿಸಿದವರ ಸಂಖ್ಯೆ ಕಳೆದ ವರ್ಷಕ್ಕಿಂತ 10 ಪಟ್ಟು ಹೆಚ್ಚಳವಾಗಿದೆ.
ಈ ವರ್ಷದ ರ್ಯಾಲಿಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಏ. 25 ಅಂತಿಮ ದಿನವಾಗಿತ್ತು. ಕರಾವಳಿಯಲ್ಲಿ ಈ ವರ್ಷ 365 ಯುವಕರು ಅರ್ಜಿ ಸಲ್ಲಿಸಿದ್ದಾರೆ. 2016 ರಲ್ಲಿ ನಡೆದ ನೇಮಕಾತಿ ರ್ಯಾಲಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇವಲ 34 ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದರು.
2015 ರಲ್ಲಿ 118 ಮಂದಿ ಅರ್ಜಿ ಸಲ್ಲಿಸಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆಕಾಂಕ್ಷಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದ್ದು, ಸ್ಥಳೀಯ ಸೇನಾ ಅಧಿಕಾರಿಗಳಲ್ಲಿ ಸಂತಸ ಮೂಡಿಸಿದೆ.[ಮಂಗಳೂರು ಯುವ ಜನತೆಗ್ಯಾಕೆ ಯುಪಿಎಸ್ಸಿ, ಕೆಪಿಎಸ್ಸಿ ಮೇಲೆ ನಿರಾಸಕ್ತಿ?]
ಭಾರತೀಯ ಸೇನೆಯಲ್ಲಿ ನಾನಾ ಹುದ್ದೆಗಳ ನೇಮಕಾತಿಗೆ ಸೇನೆಯು ಪ್ರತಿ ವರ್ಷ ರಾಜ್ಯದ ನಾನಾ ಕಡೆ ನೇಮಕಾತಿ ರ್ಯಾಲಿ ನಡೆಸುತ್ತದೆ. ಮೇ 12 ರಿಂದ ಬಿಜಾಪುರದಲ್ಲಿ ನೇಮಕಾತಿ ರ್ಯಾಲಿ ಆರಂಭವಾಗಲಿದ್ದು ಸುಮಾರು 18,600 ಆಕಾಂಕ್ಷಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ.
ಸೇನೆಗೆ ಆಯ್ಕೆಯಾಗಲು ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ. ಪ್ರಸಕ್ತ ವರ್ಷ ಮಂಗಳೂರು ಕೂಳೂರಿನಲ್ಲಿರುವ ಸೇನಾ ನೇಮಕಾತಿ ಕೇಂದ್ರವು ದಕ್ಷಿಣ ಕನ್ನಡ ಜಿಲ್ಲಾಡಳಿತ ಸಹಯೋಗದಲ್ಲಿ ಸೇನಾ ನೇಮಕಾತಿ ರ್ಯಾಲಿ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡಿತ್ತು. ಪರಿಣಾಮ ಭರಪೂರ ಅರ್ಜಿಗಳು ಹರಿದು ಬಂದಿವೆ.
ಸಾಮಾನ್ಯ ಸೈನಿಕ, ಸೈನಿಕ ಟ್ರೇಡ್ ಮೆನ್ , ತಾಂತ್ರಿಕ ಸೈನಿಕ, ನರ್ಸಿಂಗ್ ಸಹಾಯಕ ಹಾಗೂ ಸೈನಿಕ ಗುಮಾಸ್ತ ಮುಂತಾದ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಸೇನಾ ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಮೊದಲ ಹಂತದಲ್ಲಿ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿದ್ದು, ನಂತರ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು.
ಈ ಎರಡು ಹಂತದಲ್ಲಿ ಉತ್ತೀರ್ಣರಾದವರು ಲಿಖಿತ ಪರೀಕ್ಷೆ ಬರೆಯಬೇಕಾಗಿದ್ದು, ಇದರಲ್ಲಿ ಪಾಸಾದವರು ಸೇನೆಗೆ ಆಯ್ಕೆಯಾಗಿ ತರಬೇತಿಗೆ ತೆರಳಲಿದ್ದಾರೆ.












Click it and Unblock the Notifications