ಬುದ್ಧಿವಂತರ ಜಿಲ್ಲೆಯಲ್ಲಿ ಸಂಪರ್ಕವೇ ಇಲ್ಲದ ಕುಗ್ರಾಮ!
ಮಂಗಳೂರು, ಸೆಪ್ಟೆಂಬರ್ 21 : ಈ ಗ್ರಾಮ ಮಳೆಗಾಲದಲ್ಲಿ ದ್ವೀಪವಾಗುತ್ತದೆ. ಮಳೆಗಾಲದಲ್ಲಿ ಇಲ್ಲಿನ ಜನರಿಗೆ ಅನಾರೋಗ್ಯ ಉಂಟಾದರೆ ಸಾವೊಂದೇ ಮೊದಲ ಹಾಗೂ ಕೊನೆಯ ಆಯ್ಕೆ. ಪಟ್ಟಣವನ್ನು ಸಂಪರ್ಕಿಸಲು ಬಿದಿರಿನಿಂದ ನಿರ್ಮಿಸಿದ ಪಾಪೊಂದೇ ಇವರಿಗಿರುವ ಸೇತುವೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದ ಶೆಟ್ಟಿಕಜೆ ಎನ್ನುವ ಕುಗ್ರಾಮದ ಕಥೆ ಹಾಗೂ ವ್ಯಥೆ ಇದು. ಕಳೆದ 60 ವರ್ಷಗಳಿಂದ ಈ ಗ್ರಾಮದ ಜನರ ಬೇಡಿಕೆ ಒಂದೇ ಅದು ಸೇತುವೆ ನಿರ್ಮಾಣ. ಹಲವು ಸರ್ಕಾರಗಳು ಬಂದು ಹೋದರೂ ಗ್ರಾಮಸ್ಥರ ಬೇಡಿಕೆ ಮಾತ್ರ ಅರಣ್ಯರೋಧನವಾಗಿದೆ.
ಇದೀಗ ಜನಪ್ರತಿನಿಧಿಗಳು ಪ್ರತಿಯೊಂದು ಯೋಜನೆಗೂ ಕೋಟಿ-ಕೋಟಿ ಹಣ ಕೊಡುತ್ತೇನೆಂದು ಹೇಳಿಕೆ ನೀಡುತ್ತಿರುವುದನ್ನು ನೋಡುತ್ತಿರುವ ಈ ಗ್ರಾಮದ ಜನರು ತಮ್ಮ ಊರಿನ ಸೇತುವೆಗೂ ಏನಾದರೂ ಕೊಡುತ್ತಾರೆಯೋ? ಎನ್ನುವ ನಿರೀಕ್ಷೆಯಲ್ಲಿ ಬಕಪಕ್ಷಿಯಂತೆ ಕಾಯುತ್ತಿದ್ದಾರೆ.
ಬೇಸಿಗೆಯಲ್ಲಿ ಗ್ರಾಮದ ಜನರು ಹಳ್ಳದಾಟಿ ಪಟ್ಟಣಕ್ಕೆ ಕಾಲ್ನೆಡಿಗೆ ಮೂಲಕ ತೆರಳುತ್ತಾರೆ.ಆದರೆ, ಮಳೆಗಾಲದಲ್ಲಿ ಜನರ ಸಂಕಷ್ಟ ಮಾತ್ರ ತಪ್ಪಿದ್ದಲ್ಲ. ಅತೀ ಅವಶ್ಯಕತೆ ಬಂದಾಗ ಉಪಯೋಗವಾಗಲಿ ಎನ್ನುವ ಕಾರಣಕ್ಕೆ ಪ್ರತಿವರ್ಷವೂ ಇಲ್ಲಿನ ಜನರು ಹಳ್ಳಕ್ಕೆ ಬಿದಿರಿನ ಪಾಪೊಂದನ್ನು (ಬಿದಿರಿನ ಪುಟ್ಟ ಸೇತುವೆ) ನಿರ್ಮಿಸುತ್ತಾರೆ. ಶೆಟ್ಟಿಕಜೆ ಗ್ರಾಮದ ವಿವರಗಳು ಚಿತ್ರಗಳಲ್ಲಿವೆ...

ಹಳ್ಳ ದಾಟಿಯೇ ಹೋಗಬೇಕು
ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದ ಶೆಟ್ಟಿಕಜೆ ಗ್ರಾಮದ ಜನರು ಎಲ್ಲಿಗೆ ಹೋಗಬೇಕಾದರೂ ಹಳ್ಳ ದಾಟಿಯೇ ಮುಂದೆ ಸಾಗಬೇಕು. ಮಳೆಗಾಲ ಆರಂಭವಾದರೆ ಜನರಿಗೆ ಆತಂಕ ಶುರುವಾಗುತ್ತದೆ. ಕಾರಣವಿಷ್ಟೇ ಮಳೆಗಾಲದಲ್ಲಿ ಹಳ್ಳ ತುಂಬಿ ಹರಿಯುವಾಗ ಅದನ್ನು ದಾಟುವುದು ಸಾಧ್ಯವೇ ಇಲ್ಲ.

60 ವರ್ಷಗಳ ಬೇಡಿಕೆ
ಗ್ರಾಮಕ್ಕೆ ಸೇತುವೆ ಬೇಕು ಎಂಬುದು 60 ವರ್ಷಗಳ ಬೇಡಿಕೆ. ಬೇಸಿಗೆ ಕಾಲದಲ್ಲಿ ಈ ಹಳ್ಳದಲ್ಲಿ ನೀರಿನ ಮಟ್ಟ ಕ್ಷೀಣಿಸುತ್ತದೆ. ಇದರಿಂದಾಗಿ ಈ ಭಾಗದ ಜನ ಹಳ್ಳದಲ್ಲೇ ಇಳಿದು ತಮ್ಮ ಅವಶ್ಯಕತೆಗಳಿಗಾಗಿ ಬೇರೆ ಊರುಗಳಿಗೆ ಪಯಣಸುತ್ತಾರೆ. ಆದರೆ, ಮಳೆಗಾಲದಲ್ಲಿ ತುಂಬಿ ಹರಿಯುವ ಈ ಹಳ್ಳವನ್ನು ದಾಟುವುದು ಬಿಡಿ, ಅದರ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ. ಆದರೂ ಅತೀ ಅವಶ್ಯಕತೆ ಬಂದಾಗ ಉಪಯೋಗವಾಗಲಿ ಎನ್ನುವ ಕಾರಣಕ್ಕೆ ಪ್ರತಿವರ್ಷವೂ ಇಲ್ಲಿನ ಜನ ಹಳ್ಳಕ್ಕೆ ಬಿದಿರಿನ ಪಾಪೊಂದನ್ನು ನಿರ್ಮಿಸುತ್ತಾರೆ.

ಶಾಲಾ ಮಕ್ಕಳಿಗೂ ತೊಂದರೆ
ಮಳೆ ಸುರಿಯುತ್ತಿರುವ ಸಂದರ್ಭದಲ್ಲಿ ಇದನ್ನು ಬಳಸಿದ್ದೇ ಆದಲ್ಲಿ ಕಿರು ಸೇತುವೆ ಜೊತೆಗೆ ಅದರಲ್ಲಿ ಸಾಗುವವರೂ ಹಳ್ಳದಲ್ಲಿ ಹರಿಯುವ ನೀರಿನ ರಭಸಕ್ಕೆ ಕೊಚ್ಚಿ ಹೋಗಬೇಕಾಗುತ್ತದೆ. ಶಾಲೆಗೆ ತೆರಳುವ ಮಕ್ಕಳು ಇದೇ ಅಪಾಯಕಾರಿ ಪಾಪುವಿನ ಮೇಲೆ ಸಾಗಬೇಕು.

ಸಮಸ್ಯೆ ಬಗೆಹರಿಸುವವರು ಯಾರು?
ಜನಪ್ರತಿನಿಧಿಗಳು ಪ್ರತಿಯೊಂದು ಯೋಜನೆಗೂ ಕೋಟಿ-ಕೋಟಿ ಹಣ ಕೊಡುತ್ತೇನೆಂದು ಹೇಳಿಕೆ ನೀಡುತ್ತಿರುವುದನ್ನು ನೋಡುತ್ತಿರುವ ಈ ಗ್ರಾಮದ ಜನರು ತಮ್ಮ ಊರಿಗೂ ಸೇತುವೆ ನಿರ್ಮಾಣ ವಾಗಲಿದೆಯೇ? ಎಂದು ಕಾದು ನೋಡುತ್ತಿದ್ದಾರೆ. ಈ ಗ್ರಾಮದ ಜನರ ಬವಣೆಗೆ ಇನ್ನಾದರು ಸರ್ಕಾರ ಕಿವಿಕೊಡಲಿದೆಯೇ?.












Click it and Unblock the Notifications