ಇದು ತಣ್ಣೀರುಬಾವಿ ಮುಳುಗುತಜ್ಞರ ತಂಡದ ಕಣ್ಣೀರ ಕಥೆ...

ಮಂಗಳೂರು, ಆಗಸ್ಟ್ 18: "ನಾವು ಹೋಗೋದು ಮದುವೆ ಮನೆಗೆ ಅಲ್ಲವಲ್ಲ. ಸಾವಿನ ಮನೆಯ ವಾತಾವರಣದಲ್ಲಿ ಹಣಕಾಸಿನ ವ್ಯವಹಾರ ಮಾತನಾಡಕ್ಕೆ ಆಗಲ್ಲ. ನಮಗೆ ಸಿಕ್ಕ ಪ್ರಶಸ್ತಿ, ಗೌರವಗಳಿಂದ ನಮ್ಮ ಬದುಕು ನಡೆಯಲ್ಲ. ಜೂನ್ ನಿಂದ ನವೆಂಬರ್ ನವರೆಗೆ ನಮ್ಮ ಹೊಟ್ಟೆ ತುಂಬಿಸಿಕೊಳ್ಳೋದೇ ಸವಾಲು" ಎಂದು ಮಾತಿಗಾರಂಭಿಸಿದವರು ಮೊಹ್ಮದ್ ಜಾವೀದ್.

ಮಂಗಳೂರಿನ ತಣ್ಣೀರು ಬಾವಿ ಮುಳುಗು ತಜ್ಞರ ತಂಡ ಅಂತಲೇ ಜಾವೀದ್ ಅವರನ್ನು ಒಳಗೊಂಡಂತೆ ಇರುವ ಈ ಐವರ ಗುಂಪನ್ನು ಇಡೀ ಕರ್ನಾಟಕದಲ್ಲಿ ಗುರುತಿಸಲಾಗುತ್ತದೆ. ಮಾಸ್ತಿಗುಡಿ ಸಿನಿಮಾದ ದುರಂತದ ವೇಳೆ ಅನಿಲ್ ಹಾಗೂ ಉದಯ್ ದೇಹವನ್ನು ನೀರಿನಿಂದ ಮೇಲೆತ್ತಿದ್ದು ಇದೇ ಐವರ ತಂಡ.

ಆದರೆ, ಈ ತಂಡದ ಸ್ಥಿತಿ ನೋಡಿದರೆ ಎಂಥವರಿಗೂ ಮರುಕ ಹುಟ್ಟುತ್ತದೆ. ಗೃಹ ರಕ್ಷಕ ದಳದಲ್ಲಿ ನೀಡಿದ ತಾತ್ಕಾಲಿಕ ಕೆಲಸದ ಜೂನ್ ತಿಂಗಳ ವೇತನವೇ ಅರ್ಧದಷ್ಟು ಬಂದಿದೆ. ಇನ್ನು ಜುಲೈ ತಿಂಗಳ ಸಂಬಳ ಹೇಗೆ ಬಂದೀತು? ಇಡೀ ಕರ್ನಾಟಕದಲ್ಲಿ ಈ ತಂಡದ ಬಗ್ಗೆ ಭಾರೀ ನಂಬಿಕೆ ಇದೆ. ಮನೆ ತುಂಬ ಪ್ರಶಸ್ತಿ ಫಲಕ, ಹಾರ-ತುರಾಯಿ. ಆದರೆ ಮಧ್ಯಾಹ್ನ- ರಾತ್ರಿ ಹೊತ್ತಿಗೆ ತಟ್ಟೆಯ ಬಹು ಭಾಗ ಖಾಲಿ ಖಾಲಿ.

ಜೀಪಿನ ಹಣ ಕೂಡ ಕೊಡುವುದಿಲ್ಲ

ಜೀಪಿನ ಹಣ ಕೂಡ ಕೊಡುವುದಿಲ್ಲ

ಕರ್ನಾಟಕದ ಯಾವ ಮೂಲೆಯಿಂದ ಕರೆ ಮಾಡಿದರೂ ಒಂದು ಜೀಪು ಮಾಡಿಕೊಂಡು ನಾವು ಐವರು ಹೊರಟು ನಿಲ್ತೇವೆ. ಜೀವ ಅಲ್ಲವಾ? ನಮ್ಮ ಮನೆಯಲ್ಲೇ ಅಂಥ ಅನಾಹುತ ಆದರೆ ಅನ್ನೋ ಕಾಳಜಿ ನಮ್ಮದು. ಕರೆಸಿಕೊಳ್ಳುವಾಗ ಬಂಗಾರ-ವಜ್ರ ಕೊಡ್ತೀವಿ ನೀರಿನಲ್ಲಿ ಮುಳುಗಿದವರ ಹುಡುಕಿಕೊಡಿ ಅಂತಾರೆ. ಕೆಲಸ ಆದ ನಂತರ ಜೀಪಿನ ಬಾಡಿಗೆ ಹಣ ಸಹ ಕೆಲ ಸಲ ನೀಡುವುದಿಲ್ಲ.

ನಾವು ಹೋಗೋದು ಮದುವೆ ಮನೆಯೋ ಸಂಭ್ರಮ ಪಡುವ ಕಾರ್ಯಕ್ರಮ ಅಲ್ಲವಲ್ಲಾ, ಅಂಥ ಕಡೆ ದುಡ್ಡಿನ ವ್ಯವಹಾರ ಏನು ಮಾತನಾಡ್ತೀರಿ ಎಂದು ಸುಮ್ಮನೆ ನಗುತ್ತಾರೆ ಜಾವೀದ್.

ನೂರೈವತ್ತಕ್ಕೂ ಹೆಚ್ಚು ಮಂದಿ ಜೀವ ಉಳಿಸಿದ್ದಾರೆ

ನೂರೈವತ್ತಕ್ಕೂ ಹೆಚ್ಚು ಮಂದಿ ಜೀವ ಉಳಿಸಿದ್ದಾರೆ

ಈ ಐವರ ತಂಡ ಕಳೆದ ಹದಿಮೂರು-ಹದಿನೈದು ವರ್ಷಗಳಲ್ಲಿ ನೂರೈವತ್ತಕ್ಕೂ ಹೆಚ್ಚು ಮಂದಿ ನೀರಿನಲ್ಲಿ ಮುಳುಗಿದವರನ್ನು ರಕ್ಷಿಸಿದೆ. ಇನ್ನೂರಕ್ಕೂ ಹೆಚ್ಚು ಮಂದಿಯ ನೀರಿನಲ್ಲಿ ಮುಳುಗಿದ ದೇಹವನ್ನು ಹೊರತೆಗೆದಿದೆ. ಆ ಸಾಧನೆ ಗುರುತಿಸಿ ಬಹಳ ಸನ್ಮಾನಗಳಾಗಿವೆ. ಶಾಸಕರು, ಸಚಿವರೇ ಮುಂದೆ ನಿಂತು ಹಾಡಿ-ಹೊಗಳಿ ಸನ್ಮಾನ ಮಾಡಿದ್ದಾರೆ. ಆದರೆ ಈ ಐವರ ಪಾಲಿಗೆ ಒಂದು ಗುಂಪು ಇನ್ಷೂರೆನ್ಸ್ ಕೂಡ ಇಲ್ಲ.

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಆಯುಧ ಹೆಕ್ಕಿ ತೆಗೆದಿದ್ದಾರೆ

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಆಯುಧ ಹೆಕ್ಕಿ ತೆಗೆದಿದ್ದಾರೆ

ಇಡೀ ಕರ್ನಾಟಕದಲ್ಲಿ ಸದ್ದು- ಸುದ್ದಿ ಮಾಡಿದ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಹತ್ಯೆಗೆ ಬಳಸಿದ ಆಯುಧಗಳನ್ನು ಆರೋಪಿಗಳು ನೀರಿನಲ್ಲಿ ಹಾಕಿದ್ದರು. ಅವುಗಳನ್ನು ಹೊರತೆಗೆದಿದ್ದು ಇದೇ ತಂಡ. ಅಷ್ಟೇ ಅಲ್ಲ, ಮೊನ್ನೆಯ ಬಾರ್ಜ್ ಹಡಗು ದುರಂತ ಸೇರಿದಂತೆ ಹಲವು ಸನ್ನಿವೇಶದಲ್ಲಿ ಸಮುದ್ರದಲ್ಲಿ ಮುಳುಗಿದ ಹಲವರ ಜೀವವನ್ನು ಉಳಿಸಿದ್ದಾರೆ.

ಇನ್ಷೂರೆನ್ಸ್ ಮಾಡಿಸಿಕೊಡಿ

ಇನ್ಷೂರೆನ್ಸ್ ಮಾಡಿಸಿಕೊಡಿ

ನಮ್ಮದು ಆರು ಮಂದಿಯ ತಂಡವಿತ್ತು. ಮಹಮ್ಮದ್ ಸಿದ್ದೀಕ್ ಅಂತ ಆರನೆಯವನ ಹೆಸರು. ರಕ್ಷಣಾ ಕಾರ್ಯವೊಂದರಲ್ಲಿ ತೀರಿಕೊಂಡುಬಿಟ್ಟ. ಅವನಿಗೆ ಮದುವೆಯಾಗಿ ಬರೀ ಮೂರು ತಿಂಗಳಾಗಿತ್ತು. ನಮ್ಮೆಲ್ಲರಿಗೂ ಕುಟುಂಬವಿದೆ. ಹೆಂಡತಿ-ಮಕ್ಕಳಿದ್ದಾರೆ. ನಮಗೊಂದು ಇನ್ಷೂರೆನ್ಸ್ ಮಾಡಿಸಿಕೊಟ್ಟರೆ ಈ ಜೀವ ಇರೋವರೆಗೆ ಋಣಿಗಳಾಗಿರ್ತೇವೆ.

ನಮ್ಮ ಗುಂಪಿಗೆ ಪ್ರೀತಿಯಿಂದ ಎಷ್ಟೋ ಮಂದಿ ಸನ್ಮಾನ ಮಾಡಿದ್ದಾರೆ. ಅವರ ಪ್ರೀತಿ ದೊಡ್ಡದು. ನಮ್ಮ ಬಡತನಕ್ಕೆ ಬಾಯಿ ಬಂದು ಅಂಥವರನ್ನು ಕತ್ತು ಬಗ್ಗಿಸಿ ಕೇಳ್ತೇವೆ, ನಮಗೊಂದು ಇನ್ಷೂರೆನ್ಸ್ ಮಾಡಿಸಿಕೊಡಿ ಎಂದು ಕೇಳುತ್ತಾರೆ ಜಾವೀದ್.

ಮನುಷ್ಯತ್ವ ಅಲ್ಲವಾ?

ಮನುಷ್ಯತ್ವ ಅಲ್ಲವಾ?

ನಮಗೆ ಫೋನ್ ಮಾಡಿಯೇ ತಿಳಿಸಬೇಕು ಅಂತಿಲ್ಲ. ಯಾರಾದರೂ ನೀರಿನಲ್ಲಿ ಮುಳುಗಿದ್ದಾರೆ ಅಂದ ತಕ್ಷಣ ಹೊರಟು ಬಿಡ್ತೀವಿ. ಮನುಷ್ಯತ್ವ ಅಲ್ಲವಾ? ನಮ್ಮಿಂದ ಮಾಡೋಕೆ ಆಗೋದು ಇದು ಮಾತ್ರ. ಆದರೆ ಕೆಲವು ಸಲ ಅವರಾಗಿಯೇ ಕರೆಸಿ, ಹೆಣ ತೇಲಿಬಿಟ್ಟಿದೆ. ನಿಮ್ಮ ಅಗತ್ಯ ಇಲ್ಲ ಎಂದು ಅರ್ಧ ದಾರಿಯಲ್ಲಿ ನಾವಿರುವಾಗ ಹೇಳ್ತಾರೆ. ನಾವೇ ದುಡ್ಡು ಹಾಕಿಕೊಂಡು ವಾಪಸ್ ಬರಬೇಕಾಗುತ್ತದೆ.

ಹಾಗಂತ ಅವರಿಗೆ ಕೇಡಾಗಲಿ ಅಂತ ಬಯಸುವ ಜನರಲ್ಲ ನಾವು. ಆದರೆ ನಮಗೂ ಕುಟುಂಬವಿದೆ. ನೀರಿನಲ್ಲಿ ಮುಳುಗಿ ಯಾರನ್ನೋ ಬದುಕಿಸುವಾಗ ನಾವೇ ಇಲ್ಲ ಅಂತಾದರೆ ಕುಟುಂಬದ ಗತಿ ಏನು? ನಾವು ಬದುಕಿರುವವರೆಗಾದರೂ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕಲ್ವಾ ಎನ್ನುತ್ತಾರೆ ತಂಡದ ಮೊಹ್ಮದ್ ವಾಸೀಂ.

ದೋಣಿ ಖರೀದಿಸಬೇಕಿದೆ

ದೋಣಿ ಖರೀದಿಸಬೇಕಿದೆ

ನಮಗೆ ವರ್ಷದಲ್ಲಿ ಆರೇಳು ತಿಂಗಳು ಕೆಲಸ ಇರಲ್ಲ. ಓದಿಕೊಂಡಿರೋದು ಮೂರು-ನಾಲ್ಕನೇ ಕ್ಲಾಸ್. ನಾವೆಲ್ಲರೂ ಒಂದೊಂದು ದೋಣಿ ತೆಗೆದುಕೊಂಡು ಮೀನು ಹಿಡಿದು ಜೀವನ ಸಾಗಿಸುವ ಅಂದುಕೊಂಡೆವು. ಆದರೆ ಅದಕ್ಕೆ ತಲಾ ಎಪ್ಪತ್ತು ಸಾವಿರ ಬೇಕು. ಸರಕಾರದಿಂದ ಐವತ್ತು ಸಾವಿರ ಸಾಲವನ್ನು ಅಲ್ಪಸಂಖ್ಯಾತರಿಗೆ ಅಂತ ಕೊಡ್ತಾರಂತೆ. ಅದು ಸಿಕ್ಕಿದರೂ ನಮ್ಮ ಬದುಕು ಸ್ವಲ್ಪ ಮಟ್ಟಿಗೆ ಸುಧಾರಿಸುತ್ತದೆ.

ಐವರ ಹೆಸರು ಹಾಗೂ ಸಂಪರ್ಕ ಸಂಖ್ಯೆ

ಐವರ ಹೆಸರು ಹಾಗೂ ಸಂಪರ್ಕ ಸಂಖ್ಯೆ

ಅಂದಹಾಗೆ ಈ ತಂಡದಲ್ಲಿ ಇರುವುದು ಐವರು. ಮೊಹ್ಮದ್ ಜಾವೀದ್, ಮೊಹ್ಮದ್ ವಾಸೀಂ, ಜಾಕೀರ್ ಹುಸೇನ್, ಸಾದಿಕ್, ಹಸನ್ ಪೀಟಿ. ಆ ಪೈಕಿ ಜಾವೀದ್ ಅವರ ಸಂಪರ್ಕ ಸಂಖ್ಯೆ 8951438687, ಮೊಹ್ಮದ್ ವಾಸೀಂ 9845152078. ಕರ್ನಾಟಕದಲ್ಲಿ ಯಾವುದೇ ಭಾಗದಲ್ಲಿ ನೀರಿನಲ್ಲಿ ಮುಳುಗಿ ದುರಂತ ಸಂಭವಿಸಿದೆ. ನೀರಿನಿಂದ ದೇಹಗಳನ್ನು ಹೊರ ತೆಗೆಯುವುದಕ್ಕೆ ಅಥವಾ ಜನರನ್ನು ರಕ್ಷಿಸುವುದಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದಿಂದಲೂ ಆಗಲಿಲ್ಲ ಅಂದಾಗ ಈ ತಣ್ಣೀರುಬಾವಿ ಮುಳುಗು ತಜ್ಞರ ತಂಡವನ್ನೇ ಕರೆಸಲಾಗುತ್ತದೆ.

ಅಂಥ ಉಪಕರಣ ಇದ್ದಿದ್ದರೆ...

ಅಂಥ ಉಪಕರಣ ಇದ್ದಿದ್ದರೆ...

ಎನ್ ಡಿಆರ್ ಎಫ್ ಅವರ ಹತ್ತಿರ ಎಂಥೆಂಥ ಉಪಕರಣವಿದೆ ಗೊತ್ತಾ? ಅಂಥ ಉಪಕರಣಗಳು ನಮ್ಮ ಬಳಿಯೂ ಇದ್ದಿದ್ದರೆ ಇನ್ನೂ ಹೆಚ್ಚು ಜನರ ನೆರವಿಗೆ ನಾವು ಆಗಬಹುದಿತ್ತು. ನಮ್ಮ ವಿದ್ಯೆ ಅಂದರೆ ಮೂರು-ನಾಲ್ಕನೇ ಕ್ಲಾಸು, ಸರಕಾರಿ ಕೆಲಸಕ್ಕೆ ಆಗಲ್ಲವಂತೆ. ಆದರೆ ನಾವು ಕಲಿತ ಈಜು ಖಂಡಿತ ಸಹಾಯಕ್ಕೆ ಆಗುತ್ತದೆ.

ಆ ಕಾರಣಕ್ಕಾದರೂ ಒಂದೊಂದು ಕೆಲಸ ಕೊಡಲಿ. ನಾವು ಅವಿದ್ಯಾವಂತರಿರಬಹುದು. ಆದರೆ ದಡ್ಡರಲ್ಲ, ಸೋಮಾರಿಗಳಂತೂ ಮೊದಲೇ ಅಲ್ಲ. ಇಷ್ಟೆಲ್ಲ ಮಾತನಾಡೋರಲ್ಲ ನಾವು. ಆದರೆ ನಮ್ಮ ಹಸಿವು, ಕುಟುಂಬದ ಸ್ಥಿತಿ ಹೀಗೆ ಮಾತನಾಡಿಸುತ್ತಿದೆ ಎಂದು ಮಾತು ಮುಗಿಸಿದರು ಮೊಹ್ಮದ್ ಜಾವೀದ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+