6 ತಿಂಗಳಾದರೂ ಶಿಷ್ಯ ಸ್ವೀಕಾರವಾಗದೆ ಅನಾಥವಾಗಿ ಉಳಿದ ಶಿರೂರು ಮಠ
ಉಡುಪಿ, ಜನವರಿ 23: ಉಡುಪಿಯ ಶಿರೂರು ಶ್ರೀಗಳ ಅಕಾಲಿಕ ಸಾವು ಸಂಭವಿಸಿ ಆರು ತಿಂಗಳು ಕಳೆದಿದೆ. ಆದರೆ ಈ ಶಿರೂರು ಮಠಕ್ಕೆ ಇನ್ನೂ ಉತ್ತರಾಧಿಕಾರಿ ನೇಮಕಗೊಂಡಿಲ್ಲ. ಶೀರೂರು ಮಠದ ದ್ವಂದ್ವ ಮಠವಾದ ಸೋದೆ ಮಠ ಶಿಷ್ಯನನ್ನು ಸ್ವೀಕರಿಸುವ ಜವಾಬ್ದಾರಿ ಹೊತ್ತಿದೆ. ಆದ್ರೆ ಶಿಷ್ಯ ಸ್ವೀಕಾರವಾಗದೆ ಶಿರೂರು ಮಠ ಅನಾಥವಾಗಿದ್ದು, ಮಠಕ್ಕೆ ಶೀಘ್ರವಾಗಿ ಉತ್ತರಾಧಿಕಾರಿ ನೇಮಕಗೊಳ್ಳಬೇಕು ಎನ್ನುವ ಆಗ್ರಹ ಭಕ್ತ ವೃಂದದಿಂದ ಕೇಳಿಬರುತ್ತಿದೆ.
ಶ್ರೀ ಕೃಷ್ಣನ ಊರು ಉಡುಪಿ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠ ಈಗ ಪೀಠಾಧಿಪತಿ ಇಲ್ಲದೆ ಅನಾಥವಾಗಿದೆ. ಶೀರೂರು ಮಠಕ್ಕೆ ನೂರಾರು ವರುಷಗಳ ಇತಿಹಾಸವಿದೆ. ಜೊತೆಗೆ ನೂರಾರು ಕೋಟಿ ಆಸ್ತಿ ಕೂಡ ಇದೆ. ಶೀರೂರು ಮಠಾಧೀಶ ಲಕ್ಷ್ಮೀವರ ಶ್ರೀ ಪಾದರು ಅಕಾಲಿಕ ನಿಧನರಾಗಿ ಸರಿ ಸುಮಾರು 6 ತಿಂಗಳು ಕಳೆದಿದೆ.
ಶಿರೂರು ಶ್ರೀಗಳು ಅಸ್ತಂಗತರಾದ ನಂತರ ಮಠದ ಅಧಿಕಾರವನ್ನು ಶೀರೂರು ದ್ವಂದ್ವ ಮಠವಾದ ಸೋದೆ ಮಠಕ್ಕೆ ನೀಡಲಾಗಿದೆ. ಆದರೆ ಶಿರೂರು ಮಠಕ್ಕೆ ಉತ್ತರಾಧಿಕಾರಿ ನೇಮಕ ಮಾತ್ರ ಇನ್ನು ನಡೆದಿಲ್ಲ.

ಸೋದೆ ಮಠ ಕೆಲವೇ ದಿನಗಳಲ್ಲಿ ಶಿರೂರು ಮಠಕ್ಕೆ ಉತ್ತರಾಧಿಕಾರಿ ನೇಮಿಸುವ ಬಗ್ಗೆ ಹೇಳಿಕೊಂಡಿತ್ತು. ಆದ್ರೆ ಸದ್ಯ ಶಿಷ್ಯ ಸ್ವೀಕಾರದ ಕಡೆಗೆ ಗಮನಹರಿಸದೆ ಮೌನವಹಿಸಿದೆ. ಶೀರೂರು ಶ್ರೀ ಗಳ ಸಾವಿಗೆ ಒಂದು ತಾರ್ಕಿಕ ಅಂತ್ಯ ಸಿಕ್ಕಿದೆಯಾದರೂ ಶಿರೂರುಮಠ ಇನ್ನೂ ಅನಾಥವಾಗಿಯೇ ಉಳಿದಿದೆ.
ಶಿರೂರು ಮಠದ ಅದೆಷ್ಟೋ ಕೆಲಸಗಳು ಉತ್ತರಾಧಿಕಾರಿ ಇಲ್ಲದೆ ಅರ್ಧದಲ್ಲೇ ನಿಂತಿವೆ. ಶೀರೂರು ಮೂಲ ಮಠದಲ್ಲಿ ಪಟ್ಟದೇವರು ವಿಠಲ ಹಾಗೂ ಮುಖ್ಯ ಪ್ರಾಣ ದೇವರಿಗೆ ಸೋದೆ ಮಠದ ಶ್ರೀ ಮುಖೇನ ಪೂಜೆ ಪುರಸ್ಕಾರ ನಡೆಯುತ್ತಿದೆ. ಆದರೆ ಮಠದ ಪೀಠಕ್ಕೆ ಉತ್ತರಾಧಿಕಾರಿ ನೇಮಕವಾಗದೆ ಇರುವುದು ಭಕ್ತರ ಅಸಮಾಧಾನಕ್ಕೆ ಕಾರಣವಾಗಿದ್ದು, ಶೀರೂರು ಮಠಕ್ಕೆ ಶೀಘ್ರವಾಗಿ ಶಿಷ್ಯ ನೇಮಕವಾಗಬೇಕಿದೆ.

ಶೀರೂರು ಶ್ರೀಗಳ ಸಾವಿನ ಮುನ್ನ ಸೋದೆ ಮತ್ತು ಶೀರೂರು ಮಠಗಳ ಮಧ್ಯೆ ಸಾಕಷ್ಟು ಗೊಂದಲಗಳು ನಡೆದಿತ್ತು. ಶ್ರೀಗಳ ಸಾವಿನ ಬಳಿಕ ದ್ವಂದ್ವ ಮಠವಾದ ಸೋದೆ ಮಠ ಶೀರೂರು ಮಠದ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಆದರೆ ಶಿರೂರು ಮಠಕ್ಕೆ ಉತ್ತಾರಾಧಿಕಾರಿಯನ್ನು ಈವರೆಗೂ ನೇಮಿಸಿಲ್ಲ. ಇನ್ನು ಕೆಲವೇ ವರ್ಷಗಳಲ್ಲಿ ಶಿರೂರು ಮಠದ ಪರ್ಯಾಯ ನಡೆಯಲಿರುವುದರಿಂದ ಭಕ್ತರ ಆತಂಕ ಹೆಚ್ಚಿದೆ











Click it and Unblock the Notifications