ಸುಬ್ರಹ್ಮಣ್ಯದಲ್ಲಿ ಶ್ರೀ ದೇವರ ಬಂಡಿ ಉತ್ಸವ, ಸಂಭ್ರಮಪಟ್ಟ ಗಜರಾಣಿ
ಮಂಗಳೂರು, ಡಿಸೆಂಬರ್ 21: ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಕೊಪ್ಪರಿಗೆ ಇಳಿಯುವುದರೊಂದಿಗೆ ಸಮಾಪನಗೊಂಡಿದೆ. ನಿನ್ನೆ ಗುರುವಾರ (ಡಿಸೆಂಬರ್ 20) ರಾತ್ರಿ ನೀರಿನಲ್ಲಿ ಶ್ರೀ ದೇವರ ಬಂಡಿ ಉತ್ಸವ ನೆರವೇರಿದೆ. ನೀರಬಂಡಿ ಉತ್ಸವದ ಹಿನ್ನಲೆಯಲ್ಲಿ ದೇವಳದ ಹೊರಾಂಗಣದ ಸುತ್ತಲೂ ನೀರನ್ನು ಬೆಳಗ್ಗೆಯಿಂದಲೇ ತುಂಬಿಸಲಾಗಿತ್ತು.
ರಾತ್ರಿ ಮಹಾಪೂಜೆಯ ಬಳಿಕ ಪಲ್ಲಕ್ಕಿ ಉತ್ಸವವು ನೀರಿನಲ್ಲಿ ನೆರವೇರಿದೆ. ನಂತರ ನೀರಿನಲ್ಲಿ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ರಥೋತ್ಸವ ನಡೆಯಿತು. ಈ ಉತ್ಸವದೊಂದಿಗೆ ಶ್ರೀ ಕ್ಷೇತ್ರದಲ್ಲಿ ಚಂಪಾಷಷ್ಠಿ ಉತ್ಸವಗಳು ಮುಕ್ತಾಯವಾಗಿದೆ.

ದೇವಳದ ಗಜರಾಣಿ ಯಶಸ್ವಿ ಹೊರಾಂಗಣದಲ್ಲಿ ನೀರು ತುಂಬಿಸಿದುದರಿಂದ ಹೆಚ್ಚಿನ ಸಂಭ್ರಮಪಟ್ಟಿದೆ. ನೀರಿನಲ್ಲಿ ಹೊರಳಾಡಿ ಸಂತೋಷ ಪಡುವುದರೊಂದಿಗೆ ತನಗೆ ನೀರು ಹಾರಿಸಿದ ಪುಟಾಣಿ ಮಕ್ಕಳ ಮೇಲೆ ತನ್ನ ಕಾಲು ಹಾಗೂ ಸೊಂಡಿಲಿನಿಂದ ನೀರು ಎರಚಿ, ಮಕ್ಕಳೊಂದಿಗೆ ನೀರಾಟವಾಡಿ, ತಾನು ಸಂಭ್ರಮ ಪಟ್ಟಿದೆ.

ಈ ಪ್ರಸಂಗ ಭಕ್ತಾಧಿಗಳಿಗೂ ಹೆಚ್ಚಿನ ಸಂತಸವನ್ನುನೀಡಿದೆ . ಅಲ್ಲದೆ ಮಕ್ಕಳೂ ನೀರಿನಲ್ಲಿ ಒದ್ದೆಯಾಗಿ ಆಟವಾಡಿದ್ದಾರೆ. ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಸರ್ಪ ಸಂಸ್ಕಾರ ಸೇವೆಗಳು ಇಂದಿನಿಂದ ಮತ್ತೆ ಆರಂಭಗೊಂಡಿದೆ.












Click it and Unblock the Notifications