ತಾಯಿ ಜೊತೆ ಮಾತನಾಡಲು ಮೊಬೈಲ್ ಕೊಡದ ವಾರ್ಡನ್, ವಿದ್ಯಾರ್ಥಿ ಆತ್ಮಹತ್ಯೆ
ಮಂಗಳೂರು, ಜೂನ್ 13: ತಾಯಿಗೆ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಲು ಹಾಸ್ಟೆಲ್ ವಾರ್ಡನ್ ಫೋನ್ ಕೊಡಲಿಲ್ಲವೆಂದು ಮನನೊಂದ ತಲಪಾಡಿ ಕಿನ್ಯಾ ಶಾರದಾ ನಿಕೇತನಾ ಶಾಲೆಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮೂಲದ 14 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಶನಿವಾರ (ಜೂನ್ 11) ಬಾಲಕನ ತಾಯಿ ಹುಟ್ಟಿದ ದಿನವಾಗಿತ್ತು. ಮನೆಯವರ ಜೊತೆ ಮಾತನಾಡಲು ಮೊಬೈಲ್ ಕೇಳಿದಾಗ ಶಾಲಾ ಆಡಳಿತ ಮಂಡಳಿಯ ನಿಯಮದಂತೆ ಹಾಸ್ಟೆಲ್ ವಾರ್ಡನ್ ತಿರಸ್ಕರಿಸಿದ್ದಾರೆ ಎನ್ನುವುದು ಆರೋಪ. ಇದರಿಂದ ಮನನೊಂದ ಬಾಲಕ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿದ್ಯಾರ್ಥಿಯನ್ನು ಮನೆ ಮಂದಿಯೂ ಕೂಡ ವಿದ್ಯಾರ್ಥಿಯನ್ನು ಸಂಪರ್ಕಿಸಲು ಸುಮಾರು ಸಲ ಕರೆ ಮಾಡಿದ್ದರೂ ವಾರ್ಡನ್ ಮಾತನಾಡಲು ಬಿಟ್ಟಿರಲಿಲ್ಲ. ಇದರಿಂದ ಬೇಸರಕ್ಕೊಳಗಾಗಿದ್ದ ವಿದ್ಯಾರ್ಥಿ ರಾತ್ರಿ 12 ಗಂಟೆಯವರೆಗೂ ಮಂಕಾಗಿ ಕುಳಿತಿದ್ದ ಎಂದು ಹಾಸ್ಟೆಲ್ ವಿದ್ಯಾರ್ಥಿಗಳು ಬಾಲಕನ ಸಂಬಂಧಿಕರಿಗೆ ತಿಳಿಸಿದ್ದಾರೆ.

ವಿಷಯ ತಿಳಿದ ಕೂಡಲೇ ಹಾಸ್ಟೆಲ್ಗೆ ಬಂದ ವಿದ್ಯಾರ್ಥಿ ತಾಯಿ ತಮ್ಮ ಮಗನಿಗೆ ಹಾಸ್ಟೆಲ್ ಸಿಬ್ಬಂದಿಗಳು ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.
"ತಾಯಿಗೆ ಕರೆ ಮಾಡಲು ಫೋನ್ ಕೊಡಲಿಲ್ಲವೆಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ನಲ್ಲಿ ವಿದ್ಯಾರ್ಥಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ. ಆದ್ದರಿಂದ ಆ ವಿದ್ಯಾ ಸಂಸ್ಥೆಯಲ್ಲಿ ಯಾವ ರೀತಿ ನಿಯಮಗಳಿವೆ ಅಥವಾ ಬೇರೆ ಉದ್ದೇಶಕ್ಕೆ ಫೋನ್ ಕೊಡಲಿಲ್ಲವೇ? ಎಂಬ ಬಗ್ಗೆ ತನಿಖೆ ಕೈಗೊಳ್ಳಲಾಗುತ್ತದೆ" ಎಂದು ಕಮೀಷನರ್ ಹೇಳಿದ್ದಾರೆ.

"ಅಮ್ಮನಿಗೆ ಹುಟ್ಟುಹಬ್ಬದ ಶುಭಾಶಯಗಳು. ಎಲ್ಲರೂ ಖುಷಿಯಾಗಿರಿ, ಶಾಲೆಗೆ ನನಗಾಗಿ ಕಟ್ಟಿರುವ ಶುಲ್ಕವನ್ನು ವಾಪಸ್ ಪಡೆದುಕೊಳ್ಳಿ. ನಿಮ್ಮಿಂದ ನಾನು ದೂರವಾಗುತ್ತಿದ್ದೇನೆ. ನೀವು ನನ್ನನ್ನು ದುಃಖಕ್ಕೆ ತಳ್ಳಿದಿರಿ. ಯಾರೂ ಅಳಬೇಡಿ" ಎಂದು ಬಾಲಕ ಇಂಗ್ಲಿಷ್ನಲ್ಲಿ ಬರೆದಿರುವ ಡೆತ್ ನೋಟ್ ಲಭ್ಯವಾಗಿದೆ. ಭಾನುವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಾಗ ಇತರ ವಿದ್ಯಾರ್ಥಿಗಳು ಹಾಸ್ಟೆಲ್ ಪ್ರಮುಖರ ಗಮನಕ್ಕೆ ತಂದಿದ್ದರು.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications