ಪ್ರವಾಹ ಸೃಷ್ಟಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ನದಿಗಳಲ್ಲಿ ನೀರಿನ ಹರಿವು ಏಕಾಏಕಿ ಕ್ಷೀಣಿಸಿದ್ದೇಕೆ?
ಮಂಗಳೂರು ಆಗಸ್ಟ್ 21: ಇತ್ತೀಚೆಗೆ ಸುರಿದ ಭಾರೀ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ, ಕುಮಾರಧಾರಾ ಸೇರಿದಂತೆ ಬಹುತೇಕ ನದಿಗಳು ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ಸೃಷ್ಟಿಸಿದ್ದವು. ಅಪಾಯಮಟ್ಟ ಮೀರಿ ಹರಿಯುತ್ತಿದ್ದ ನದಿಗಳಲ್ಲಿ ಈಗ ನೀರಿನ ಪ್ರಮಾಣ ಏಕಾಏಕಿ ಕುಗ್ಗಿದೆ. ನೇತ್ರಾವತಿ ಸೇರಿದಂತೆ ಅದರ ಉಪನದಿಗಳಲ್ಲಿ ನೀರಿನ ಹರಿವು ಗಣನೀಯ ಪ್ರಮಾಣದಲ್ಲಿ ಕ್ಷೀಣಿಸಿದೆ. ಪ್ರಕೃತಿಯಲ್ಲಾಗುತ್ತಿರುವ ಈ ಬೆಳವಣಿಗೆ ಆತಂಕ ಮೂಡಿಸಿದೆ.
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಭೂಕುಸಿತ ಸಂಭವಿಸಿತ್ತು. ಜಲಸ್ಫೋಟದಿಂದಾಗಿ ಬೆಟ್ಟದ ಮೇಲಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದು ಹಲವಾರು ನದಿಗಳ ಪಾತ್ರವೇ ಬದಲಾಗಿತ್ತು. ಆದರೆ ಇದೀಗ ಉಕ್ಕಿ ಹರಿದ ತೊರೆಗಳಲ್ಲಿ ನೀರೇ ಕಡಿಮೆಯಾಗಿದೆ.

ಬೆಟ್ಟ ಪ್ರದೇಶಗಳಲ್ಲಿ ಮಳೆಗಾಲ ಸಂದರ್ಭ ಸುರಿಯುವ ನಿರಂತರ ಮಳೆ ಹುಲ್ಲುಗಾವಲು ಹಾಗೂ ಶೋಲಾ ಅರಣ್ಯಗಳ ಮೂಲಕ ಭೂ ಅಂತರಾಳದಲ್ಲಿ ಶೇಖರಣೆಗೊಂಡು ನಂತರ ನಿಧಾನವಾಗಿ ಬೆಟ್ಟಗಳ ಮೂಲಕ ಹರಿದು ನದಿಯಾಗಿ ಸಾಗರ ಸೇರುವುದು ರೂಢಿ. ಕಳೆದ ವರ್ಷ ಸಾಕಷ್ಟು ಮಳೆ ಸುರಿದು ನದಿ ಅಪಾಯ ಮಟ್ಟಕ್ಕಿಂತಲೂ ಎತ್ತರದಲ್ಲಿ ಹರಿದಿದ್ದರೂ, ಅಕ್ಟೋಬರ್ ಅಂತ್ಯದವರೆಗೂ ನೀರಿನ ಹರಿವಿತ್ತು. ನವೆಂಬರ್ ವೇಳೆ ನದಿಗಳಲ್ಲಿ ನೀರಿನ ಕೊರತೆ ಕಂಡುಬಂದಿತ್ತು. ಆದರೆ ಈ ಬಾರಿ ಆಗಸ್ಟ್ ನಲ್ಲಿಯೇ ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ.

ನೇತ್ರಾವತಿಯ ಪ್ರಮುಖ ಮೂಲ ಮೃತ್ಯುಂಜಯ ನದಿಯಲ್ಲಿ ನೀರಿನ ಪ್ರಮಾಣ ಬಹುತೇಕ ಕಡಿಮೆಯಾಗಿದೆ. ಅಣಿಯೂರು ಹಳ್ಳ, ಸುನಾಳ ಹೊಳೆ, ನೆರಿಯ ಹೊಳೆ, ಎಳನೀರು ಹೊಳೆಗಳು ಚಾರ್ಮಾಡಿ ಘಾಟಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿದ್ದು, ಇವುಗಳಲ್ಲಿ ನೀರಿನ ಕೊರತೆ ಕಂಡುಬಂದಿದೆ. ದೇವರ ಕಣಿವೆ ಹಾಗೂ ಕುಂಬಕಲ್ಲುಬೆಟ್ಟ ಮೂಲಕ ಉಗಮವಾಗುವ ನೆರಿಯಹೊಳೆ ಗಂಡಿಬಾಗಿಲು ಸಮೀಪ ನೇತ್ರಾವತಿ ನದಿ ಸೇರುತ್ತದೆ. ಇಲ್ಲಿಯೂ ನೀರು ಹಿಂದಿನ ಮಟ್ಟದಲ್ಲಿಲ್ಲ.
ಭೂಕುಸಿತ, ಪ್ರವಾಹದ ಪರಿಣಾಮ ಪಶ್ಚಿಮಘಟ್ಟ ಪ್ರದೇಶದ ಭೂ ಸಂರಚನೆಯಲ್ಲಿ ಬದಲಾವಣೆ ಆಗಿರುವುದರಿಂದ ನೈಸರ್ಗಿಕ ನೀರಿನ ಮೂಲಗಳಿಗೂ ತೊಂದರೆಯಾಗಿದೆ. ಬಹುತೇಕ ನೀರು ಭೂ ಅಂತರಾಳದಲ್ಲಿ ಅಂತರ್ಗಾಮಿಯಾಗಿ ಹರಿಯುವ ಸಾಧ್ಯತೆ ಇದೆ. ಇದೇ ಕಾರಣದಿಂದ ನದಿಮೂಲ, ಉಪನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಭೂ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಸರ್ಕಾರಗಳು ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಇದ್ದಲ್ಲಿ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಇಂತಹ ಘಟನೆ ನಿರಂತರವಾಗಿ ನಡೆದರೂ ಅನುಮಾನವಿಲ್ಲ ಎಂಬ ಆತಂಕ ವ್ಯಕ್ತವಾಗಿದೆ.












Click it and Unblock the Notifications