ದಕ್ಷಿಣ ಕನ್ನಡದಲ್ಲಿ ಮಿನಿ ಚುನಾವಣಾ ಸಮರಕ್ಕೆ ವೇದಿಕೆ ಸಿದ್ಧ
ಮಂಗಳೂರು, ಆಗಸ್ಟ್ 27: ಬಾರಿಯ ಚುನಾವಣೆಯಲ್ಲಿ ಎಲ್ಲಾ ಮೂರೂ ಸ್ಥಳೀಯ ಸಂಸ್ಥೆಗಳ ಅಧಿಕಾರದ ಗದ್ದುಗೆಯನ್ನು ಹಿಡಿಯುವ ವಿಶ್ವಾಸದಲ್ಲಿದೆ.
ಆದರೆ ಕಾಂಗ್ರೆಸ್ ಮತ್ತೆ ಈ ಮೂರು ಸಂಸ್ಥೆಗಳ ಆಡಳಿತವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ. ಪುತ್ತೂರು ಪುರಸಭೆಯು ನಗರಸಭೆಯಾಗಿ ಮೇಲ್ದರ್ಜೆಗೆ ಏರಿದ ಬಳಿಕ ಇದೇ ಮೊದಲ ಚುನಾವಣೆಯಾಗಿದೆ. ಪುರ ಸಭೆಯಾಗಿದ್ದ ಸಂದರ್ಭದಲ್ಲಿ 27 ಇದ್ದ ವಾರ್ಡ್ ಗಳ ಸಂಖ್ಯೆ ಇದೀಗ 31 ಕ್ಕೆ ಏರಿಕೆಯಾಗಿದೆ.
1973 ರಿಂದ ಈ ವರೆಗೆ ಬಿಜೆಪಿ ಪಕ್ಷವೇ ಬಹುತೇಕ ಪುತ್ತೂರು ಪುರಸಭೆಯ ಅಧಿಕಾರವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರೆ, ಕಾಂಗ್ರೆಸ್ ಕೇವಲ ಎರಡು ಬಾರಿ ಆಡಳಿತ ನಡೆಸಿದೆ. ಈ ಬಾರಿ 31 ವಾರ್ಡ್ ಗಳಿಗೆ 77 ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್ 31, ಬಿಜೆಪಿ 31, ಜೆಡಿಎಸ್ 9, ಬಿಎಸ್ಪಿ 1 , ಎಸ್.ಡಿ.ಪಿ.ಐ 3 ಹಾಗೂ ಪಕ್ಷೇತರರು 2 ಸ್ಥಾನದಲ್ಲಿ ಕಣಕ್ಕಿಳಿಯಲಿದ್ದಾರೆ.

ಪುತ್ತೂರಿಗೆ ಸಂಬಂಧಿಸಿದಂತೆ ಈ ಚುನಾವಣೆಯು ಬಿಜೆಪಿ ಹಾಗೂ ಕಾಂಗ್ರೇಸ್ ನಡುವಿನ ನೇರ ಹಣಾಹಣಿಯಾಗಿದ್ದು, ಉಳಿದ ಪಕ್ಷಗಳು ಇಲ್ಲಿ ನಗಣ್ಯದಂತಿದೆ.
ಬಂಟ್ವಾಳದಲ್ಲಿ ತ್ರಿಕೋನ ಸ್ಪರ್ಧೆ
ಇನ್ನು ಬಂಟ್ವಾಳ ಪುರಸಭೆ. ಸತತವಾಗಿ ಬಿಜೆಪಿ ಇಲ್ಲಿ ಗೆಲುವ ಸಾಧಿಸಿಕೊಂಡು ಬಂದಿತ್ತು. ಆದರೆ ಬಿಜೆಪಿಯ ಕೈಯಲ್ಲಿದ್ದ ಬಂಟ್ವಾಳ ಪುರಸಭೆಯನ್ನು ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಕೈ ವಶ ಮಾಡಿಕೊಂಡಿತ್ತು. ಕಳೆದ ಬಾರಿ 23 ವಾರ್ಡ್ ಗಳನ್ನು ಹೊಂದಿದ್ದ ಬಂಟ್ವಾಳ ಪುರಸಭೆಗೆ ಈ ಬಾರಿ ನಾಲ್ಕು ವಾರ್ಡ್ ಗಳ ಹೆಚ್ಚುವರಿಯಾಗಿ ಸೇರ್ಪಡೆಗೊಂಡಿದ್ದು, ವಾರ್ಡ್ ಗಳ ಸಂಖ್ಯೆ ಇದೀಗ 27 ಕ್ಕೆ ಏರಿದೆ.
27 ವಾರ್ಡ್ ಗಳಿಗೆ ಇದೀಗ ಕಣದಲ್ಲಿ 71 ಅಭ್ಯರ್ಥಿಗಳಿದ್ದಾರೆ. ಬಿಜೆಪಿ 27, ಕಾಂಗ್ರೆಸ್ 25, ಜೆಡಿಎಸ್ 5, ಎಸ್.ಡಿ.ಪಿ.ಐ 12, ಸಿಪಿಐಎಂ 1 ಹಾಗೂ ಪಕ್ಷೇತರ 1 ಸ್ಥಾನಕ್ಕೆ ಸ್ಪರ್ಧೆ ನಡೆಸಿದ್ದಾರೆ.

ಬಿಜೆಪಿಯಿಂದ ಈ ಬಾರಿ ಐವರು ಮುಸ್ಲಿಂ ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಅಲ್ಪಸಂಖ್ಯಾತ ಮತಗಳ ಮೇಲೂ ಕಣ್ಣಿಟ್ಟಿದೆ. ಈ ಬಾರಿ ಬಂಟ್ವಾಳದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಎಸ್.ಡಿ.ಪಿ.ಐ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.
ಮೊದಲ ಬಾರಿಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಬಿಜೆಪಿಯ ರಾಜೇಶ್ ನಾಯ್ಕ್ ಗೆ ಈ ಚುನಾವಣೆ ಪ್ರತಿಷ್ಟೆಯ ಕಣವಾಗಿದ್ದು, ಈ ಬಾರಿ ಬಂಟ್ವಾಳ ಪುರಸಭೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನ ತಂತ್ರಗಾರಿಗೆ ಯಲ್ಲಿ ನಿರತರಾಗಿದ್ದಾರೆ.
ಉಳ್ಳಾಲ ಕಾಂಗ್ರೆಸ್ ನ ಭದ್ರಕೋಟೆ
ಉಳ್ಳಾಲ ಪುರಸಭೆಯು ಈ ಬಾರಿ ನಗರಸಭೆಯಾಗಿ ಮೇಲ್ದರ್ಜೆಗೆ ಏರಿದೆ. ಉಳ್ಳಾಲ ಪುರಸಭೆ ಚುನಾವಣೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರ ಪ್ರತಿಷ್ಟೆಯ ಕಣವಾಗಿದೆ. ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿರುವ ಉಳ್ಳಾಲದಲ್ಲಿ ಕಾಂಗ್ರೆಸ್ ನಿರಂತರವಾಗಿ ಪುರಸಭೆಯ ಆಡಳಿತ ಚುಕ್ಕಾಣಿ ಹಿಡಿಯುತ್ತಾ ಬಂದಿದೆ.

27 ಇದ್ದ ವಾರ್ಡ್ ಗಳ ಸಂಖ್ಯೆ ಇದೀಗ 31 ಕ್ಕೆ ಏರಿದ್ದು, ಒಟ್ಟು 102 ಅಭ್ಯರ್ಥಿಗಳು ಇದೀಗ ಕಣದಲ್ಲಿದ್ದಾರೆ. ಕಾಂಗ್ರೆಸ್ 31, ಬಿಜೆಪಿ 24, ಜೆಡಿಎಸ್ 21, ಎಸ್.ಡಿ.ಪಿ.ಐ 9, ಸಿ.ಪಿ.ಐ 5 ಹಾಗೂ ಪಕ್ಷೇತರ 1 ಸ್ಥಾನದಲ್ಲಿ ಸ್ಪರ್ಧಿಸಲಿದ್ದಾರೆ. ರಾಜ್ಯ ಜೆಡಿಎಸ್ ನಲ್ಲಿರುವಂತೆ ಉಳ್ಳಾಲ ನಗರಸಭಾ ಚುನಾವಣೆಯಲ್ಲೂ ಜೆಡಿಎಸ್ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದೆ.
ಇಲ್ಲಿನ ನಾಲ್ಕು ವಾರ್ಡ್ ಗಳಲ್ಲಿ ಗಂಡ -ಹೆಂಡತಿ, ಅಣ್ಣ-ತಮ್ಮ ಜೆಡಿಎಸ್ ಮೂಲಕ ಸ್ಪರ್ಧೆಗೆ ಇಳಿದಿದ್ದಾರೆ. ಕಾಂಗ್ರೆಸ್ ನ ಭದ್ರಕೋಟೆಯಾಗಿರುವ ಕಾರಣ ಹಾಗೂ ಅಲ್ಪಸಂಖ್ಯಾತ ಮತಗಳೇ ಹೆಚ್ಚಾಗಿರುವ ಕಾರಣ ಈ ಬಾರಿಯೂ ಕಾಂಗ್ರೆಸ್ ಗೆ ಇಲ್ಲಿ ಅದೃಷ್ಟ ಖುಲಾಯಿಸುವ ಸಾಧ್ಯತೆಗಳು ಹೆಚ್ಚಾಗಿದೆ.
ಈ ನಡುವೆ ಜೆಡಿಎಸ್ ಕೂಡ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿರುವ ಕಾರಣ ಉಳ್ಳಾಲದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯೂ ಇದೆ.
ಮೂರೂ ಸ್ಥಳೀಯ ಸಂಸ್ಥೆಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಬೇಕು ಎನ್ನುವ ಲೆಕ್ಕಾಚಾರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಈಗಾಗಲೇ ರಣತಂತ್ರಗಳನ್ನು ಹೆಣೆದಿವೆ . ಈ ಹಿನ್ನೆಲೆಯಲ್ಲಿ ಜಿದ್ದಾಜಿದ್ದಿನ ಕಣವಾಗಿರುವ ಈ ಚುನಾವಣಾ ಫಲಿತಾಂಶ ಕುತೂಹಲ ಮೂಡಿಸಿದೆ.












Click it and Unblock the Notifications