ಸಂಭ್ರಮದ ದಸರಾ ಮಹೋತ್ಸವಕ್ಕೆ ಸಜ್ಜಾದ ಕಡಲತಡಿಯ ನಗರ ಮಂಗಳೂರು
ಮಂಗಳೂರು, ಅಕ್ಟೋಬರ್. 09: ಕಡಲತಡಿಯ ನಗರ ಮಂಗಳೂರು ನವರಾತ್ರಿ ಹಬ್ಬಕ್ಕೆ ಸಜ್ಜುಗೊಂಡಿದ್ದು, ದಸರಾ ವೈಭವಕ್ಕೆ ಮೈತಳೆದು ನಿಂತಿದೆ. ನಾಳೆಯಿಂದ ಅಂದರೆ ಅಕ್ಟೋಬರ್ 10 ರಿಂದ 20 ರವರೆಗೆ ಮಂಗಳೂರು ದಸರಾ ಮಹೋತ್ಸವ ನಡೆಯಲಿದೆ.
ಕುದ್ರೋಳಿ ಶ್ರೀ ಗೋಕರ್ಣನಾಥನ ಸನ್ನಿಧಿಯಲ್ಲಿ ನಾಳೆ ಗಣಪತಿ ಸೇರಿದಂತೆ ನವದುರ್ಗೆಯರ ಸಹಿತ ಶಾರದೆ ದೇವಿಯ ಪ್ರತಿಷ್ಠಾಪನೆ ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿ ವೈಭವದ ಶಾರದೆಯ ದರ್ಬಾರು ಮಂಟಪ ಅಣಿಯಾಗಿದೆ.
ಶ್ರೀ ಗೋಕರ್ಣನಾಥ ಕ್ಷೇತ್ರದ ಅಂಗಳ ಎಲ್ಲಿ ನೋಡಿದರಲ್ಲಿ ಮೈನವಿರೇಳಿಸುವ ಬೆಳಕಿನ ಚಿತ್ತಾರಕ್ಕಾಗಿ ಸಿಂಗಾರಗೊಳ್ಳುತ್ತಿದೆ. ರಾಜ ಬೀದಿಯಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಪೂರ್ಣಗೊಂಡಿದೆ. ದಸರಾ ಹಿನ್ನೆಲೆಯಲ್ಲಿ ಮಂಗಳೂರು ನಗರದ ಪ್ರಮುಖ ಕಟ್ಟಡಗಳಿಗೆ ವಿದ್ಯುತ್ ಅಲಂಕಾರ ಗೊಳಿಸಿ ಸಿದ್ಧಗೊಳಿಸಲಾಗಿದೆ .
ಈ ಬಾರಿಯ ಮಂಗಳೂರು ದಸರಾ ಉದ್ಘಾಟಿಸಲಿದ್ದಾರೆ ಸಿಎಂ ಕುಮಾರಸ್ವಾಮಿ
ದಸರಾ ಮೆರವಣಿಗೆ ಸಾಗಿ ಬರುವ ರಸ್ತೆಯ ಇಕ್ಕೆಲೆಗಳಲ್ಲಿನ ಕಟ್ಟಡಗಳಿಗೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಜೊತೆಗೆ ಮೆರವಣಿಗೆ ಸಾಗುವ ರಸ್ತೆಗಳ ಡಿವೈಡರ್ ಗಳಿಗೆ ಬಣ್ಣ ಬಳೆಯಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ಸಹಿತ ಬಹುತೇಕ ಕಟ್ಟಡಗಳಿಗೆ ಬಣ್ಣ ಬಳೆಯಲಾಗಿದೆ. ಮಂಗಳೂರು ದಸರಾ ಕುರಿತ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ...
ಪಿಲಿನಲಿಕೆ ತಂಡಗಳ ದರ್ಬಾರ್
ನವರಾತ್ರಿ ಎಂದರೆ ಸಾಕು ಕರಾವಳಿಯಲ್ಲಿ ತಾಸೆಯ ಶಬ್ದ ಮೊಳಗಲಾರಂಭಿಸುತ್ತದೆ. ತಾಸೆ ಸದ್ದು ಕೇಳಿತೆಂದರೆ ಸಾಕು ಹುಲಿಕುಣಿತದ ತಂಡ ಬಂತೆಂದು ಲೆಕ್ಕ. ನವರಾತ್ರಿ ಆರಂಭವಾಗುತ್ತಿದ್ದಂತೆ ಥೇಟ್ ಹುಲಿಯಂತೇ ಕಾಣುವ ವೇಷಧಾರಿಗಳಿಂದ ರಸ್ತೆ-ವೃತ್ತಗಳಲ್ಲಿ ವಿಶಿಷ್ಟ ನರ್ತನ ಕಂಡುಬರುತ್ತದೆ.
ಈಗಾಗಲೇ ಪಿಲಿನಲಿಕೆ ತಂಡಗಳು ಸಜ್ಜಾಗಿವೆ. ನಾಳೆಯಿಂದ ಎಲ್ಲೆಲ್ಲೂ ಪಿಲಿನಲಿಕೆ ತಂಡಗಳ ದರ್ಬಾರ್ ಆರಂಭವಾಗಲಿದೆ. ದಸರಾ ಮೆರವಣಿಗೆಯಲ್ಲಿ ಹುಲಿ ಕುಣಿತ ಆಕರ್ಷಣೆಯಾಗಿರುತ್ತದೆ.
ಸರಕಾರೀ ನೌಕರರಿಗೆ ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟ ಎಚ್ಡಿಕೆ
ಬೆಳಕಿನ ಚೆಂದವನ್ನು ಕಣ್ತುಂಬಿಕೊಳ್ಳಿ
ಮಂಗಳೂರಿನ ವೈಭವದ ದಸರಾ ಅಂದರೆ ಇಲ್ಲಿನ ಬೆಳಕಿನ ಚಿತ್ತಾರದ ಅಂದ ಚೆಂದವನ್ನು ಕಣ್ತುಂಬಿಕೊಳ್ಳುವುದೇ ಆನಂದ. ಅದರಲ್ಲೂ ನಗರದ ಎಲ್ಲಾ ದೇವಿ ದೇವಾಲಯ ಸುಣ್ಣ ಬಣ್ಣ ಬಳಿದು ವಿದ್ಯುತ್ ಅಲಂಕಾರಗಳಿಂದ ಅಲಂಕೃತಗೊಂಡಿದೆ.
ಮೈಸೂರು ದಸರಾಕ್ಕೂ ತಟ್ಟಿದ ಚುನಾವಣಾ ನೀತಿ ಸಂಹಿತೆ ಬಿಸಿ
ಶೃಂಗಾರಗೊಂಡ ದೇವಾಲಯಗಳು
ಕುದ್ರೋಳಿ ದೇವಸ್ಥಾನ, ಶ್ರೀ ಮಂಗಳಾದೇವಿ ದೇವಸ್ಥಾನ, ಕಟೀಲು ದುರ್ಗಾಪರಮೇಶ್ವರಿ ದೇವಳ, ಸುಂದರ ಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ದೇವಾಲಯ , ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ, ಕೊಡಿಯಾಲ್ ಬೈಲ್ ಭಗವತಿ ದೇವಸ್ಥಾನ , ಉರ್ವ ಮಾರಿಯಮ್ಮ ದೇವಸ್ಥಾನ, ಬೋಳೂರು ಮಾರಿಯಮ್ಮ ದೇವಸ್ಥಾನ, ಕುರುಅಂಬಾ ರಾಜರಾಜೇಶ್ವರಿ ದೇವಸ್ಥಾನ, ನವರಾತ್ರಿ ಹಬ್ಬದ ಸಡಗರಕ್ಕೆ ಶೃಂಗಾರಗೊಂಡಿದೆ.
ಸಾಂಸ್ಕೃತಿಕ ಕಾರ್ಯಕ್ರಮ, ಅನ್ನದಾನ
ನಾಳೆ ಅಕ್ಟೊಬರ್ 10 ರಿಂದ 20 ರ ರವರೆಗೆ ನವರಾತ್ರಿ ಸಡಗರ ಕುದ್ರೋಳಿಯಲ್ಲಿ ನಡೆಯಲಿದ್ದು, ನಾಳೆ ಮಂಗಳೂರು ದಸರಾ ಮಹೋತ್ಸವಕ್ಕೆ ಕರ್ನಾಟಕ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ ಎಸ್ ಚಾಲನೆ ನೀಡಲಿದ್ದಾರೆ.
ಮಂಗಳೂರು ದಸರಾ ಮಹೋತ್ಸವವನ್ನು ಅಕ್ಟೋಬರ್ 14 ರಂದು ಸಂಜೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ . ಮಂಗಳೂರು ದಸರಾ ಮಹೋತ್ಸವದ ಅಂಗವಾಗಿ ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ಪ್ರತಿನಿತ್ಯ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮ , ಅನ್ನದಾನ ನಡೆಯಲಿದೆ.