ಬಂಟ್ವಾಳದ ಕ್ರಿಮಿನಲ್ ಗಳಿಗೆ ಭಯಹುಟ್ಟಿಸಿದ ಎಸ್ಪಿ ಅಣ್ಣಾಮಲೈ
ಮಂಗಳೂರು, ಜೂನ್ 23: ಜಿಲ್ಲಾ ಪೊಲೀಸರ ನಿಯಂತ್ರಣಕ್ಕೆ ಬಾರದ ಬಂಟ್ವಾಳ ಕಳೆದ ಎರಡು ದಿನಗಳಿಂದ ಚಿಕ್ಕಮಗಳೂರು ಖಡಕ್ ಎಸ್ಪಿ ಅಣ್ಣಾಮಲೈ ಬಿಗಿಮುಷ್ಟಿಯಲ್ಲಿದೆ.
ಸರಕಾರದ ನಿರ್ದೇಶನ ಸಿಗುತ್ತಿದ್ದಂತೆ ಬುಧವಾರ ಸಂಜೆಯೇ ಬಂಟ್ವಾಳಕ್ಕೆ ಭೇಟಿ ನೀಡಿದ ಅಣ್ಣಾಮಲೈ ತನ್ನ ವಿಶಿಷ್ಟ ಕಾರ್ಯತಂತ್ರವನ್ನು ಶುರು ಮಾಡಿದ್ದರು. ಅವರ ರಫ್ ಅಂಡ್ ಟಫ್ ಕಾರ್ಯಾಚರಣೆ ಬಂಟ್ವಾಳದಲ್ಲಿ ಬಿಡು ಬಿಟ್ಟಿರುವ ಕೋಮುವಾದಿ ಹಾಗೂ ಕ್ರಿಮಿನಲ್ ವ್ಯಕ್ತಿಗಳಿಗೆ ಭಯ ಹುಟ್ಟಿಸಿದೆ.
ಬಂಟ್ವಾಳ ಪೊಲೀಸ್ ನಗರ ಠಾಣೆಗೆ ಭೇಟಿ ನೀಡಿದ ಅಣ್ಣಾಮಲೈ, ನಂತರ ತಾಲೂಕಿನ ಅತಿಸೂಕ್ಷ್ಮ ಪ್ರದೇಶಗಳಾದ ಮಾರಿಪಳ್ಳ, ಫರಂಗಿಪೇಟೆ, ಬಿ.ಸಿ.ರೋಡ್, ಕೈಕಂಬ, ಶಾಂತಿ ಅಂಗಡಿ ಮತ್ತಿತರ ಪ್ರದೇಶಗಳನ್ನು ಸಾರ್ವಜನಿಕರೊಂದಿಗೆ ಖುದ್ದು ಪರಿಶೀಲನೆ ನಡೆಸಿದ್ದರು.

ಸ್ಥಳೀಯ ಯುವಕರಿಂದ ಮಾಹಿತಿ
ಸ್ಥಳೀಯ ಯುವಕರನ್ನು ಕರೆದು ಪ್ರಾದೇಶಿಕ ಬೆಳವಣಿಗೆಯ ಬಗ್ಗೆ ಆತ್ಮೀಯತೆಯಲ್ಲಿ ಮಾತನಾಡಿ ಅಣ್ಣಾಮಲೈ ವಿಷಯ ಕಲೆ ಹಾಕಿದರು. ಎಸ್ ಡಿಪಿಐ ಸ್ಥಳೀಯ ಸಮಿತಿ ಅಧ್ಯಕ್ಷ ಅಶ್ರಫ್ ಕೊಲೆ ಪ್ರಕರಣವನ್ನು ಅವಲೋಕಿಸಿದ ಅವರು ಬಳಿಕ ಪರಿಸ್ಥಿತಿ ನಿಯಂತ್ರಿಸುವಂತೆ ತಮ್ಮ ತಂಡದ ಸದಸ್ಯರಿಗೆ ನಿರ್ದೇಶನ ನೀಡಿದರು.

ತಾವೇ ಎದುರು ನಿಂತ ಅಣ್ಣಾಮಲೈ
ಅಶ್ರಫ್ ಮೃತದೇಹವನ್ನು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬಳಿಕ ಮಂಗಳೂರು ಹೂರವಲಯದ ಕಣ್ಣೂರು ಜುಮ್ಮಾ ಮಸೀದಿಯಲ್ಲಿ ನಮಾಜ್ ನಿರ್ವಹಿಸಲಾಯಿತು. ಈ ವೇಳೆ ಅಣ್ಣಾಮಲೈ ಖುದ್ದು ಭದ್ರತೆ ನಿರ್ವಹಿಸಿದ್ದರು.

ಎಚ್ಚರಿಕೆ ವಹಿಸಿದ ಖಡಕ್ ಎಸ್ಪಿ
ಶವಯಾತ್ರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಭದ್ರತೆ ಕಾರ್ಯ ಕೈಗೊಳ್ಳಲು ಪೊಲೀಸರು ಹರಸಾಹಸ ಪಡಬೇಕಾಯಿತು. ಈ ಸಂದರ್ಭದಲ್ಲಿ ಫರಂಗಿಪೇಟೆ, ಕಣ್ಣೂರು ಪರಿಸರದಲ್ಲಿ ಸಣ್ಣಪುಟ್ಟ ಅಹಿತಕರ ಘಟನೆಗಳು ಸಂಭವಿಸಿದ್ದು, ಇದನ್ನು ಅಣ್ಣಾಮಲೈ ಅವರೇ ಸ್ವತಃ ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ಕ್ರಿಮಿನಲ್ ಗಳಿಗೆ ನಡುಕ
ಸಿಂಗಂ ಎಂದೇ ಖ್ಯಾತರಾಗಿರುವ ಐಪಿಎಸ್ ಅಧಿಕಾರಿ, ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಆಗಮನದಿಂದಾಗಿ ಬಂಟ್ವಾಳ ತಾಲೂಕಿನಾದ್ಯಂತ ಕ್ರಿಮಿನಲ್ ವ್ಯಕ್ತಿಗಳಲ್ಲಿ ನಡುಕ ಉಂಟಾಗಿದೆ.

ಬಂಟ್ವಾಳದಿಂದ ಕಾಲ್ಕಿತ್ತ ಮುಖಂಡರು
ಬಂಟ್ವಾಳ ಡಿವೈಎಸ್ಪಿ, ಎಸ್ಐ ಹಾಗೂ ಪಿಎಸ್ಐ ಕಚೇರಿಗಳಿಗೆ ಬಂದು ಪ್ರಭಾವ ಬಳಸುತ್ತಿದ್ದ ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿಗಳಿಗೆ ಈಗ ಮೈನಡುಕ ಉಂಟಾಗಿದೆ. ವಿವಾದಿತ ಸಂಘಟನೆಗಳ ಮುಖಂಡರು ಕೂಡ ಬಂಟ್ವಾಳದಿಂದ ಜಾಗ ಖಾಲಿ ಮಾಡಿದ್ದಾರೆ.












Click it and Unblock the Notifications