ಸುಳ್ಯ ಬಳಿ ಕುಡಿದ ಮತ್ತಿನಲ್ಲಿ ತಾಯಿಯ ಹತ್ಯೆಗೈದ ಪುತ್ರನ ಬಂಧನ
ಮಂಗಳೂರು, ಫೆಬ್ರವರಿ 21: ಪುತ್ರನೋರ್ವ ಹೆತ್ತ ತಾಯಿ ಮೇಲೆ ಕಲ್ಲೆಸೆದು ಹತ್ಯೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಸುಳ್ಯ ತಾಲೂಕಿನ ಕಾಯ್ಮಣ ಗ್ರಾಮದ ಅಂಕಜಾಲು ಎಂಬಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಅಂಕಜಾಲು ಜನತಾ ಕಾಲನಿ ನಿವಾಸಿ ನಾವುರ ಎಂಬುವರ ಪತ್ನಿ ಚೀಂಕು(53) ಮಗನಿಂದಲೇ ಹತ್ಯೆಗೀಡಾದ ತಾಯಿ. ನಾವುರ, ಚೀಂಕು ದಂಪತಿಯ ಪುತ್ರ ಗೋಪಾಲ(33) ತಾಯಿಯ ಕೊಲೆ ಮಾಡಿದ ಆರೋಪಿ.
ಮೂರು ದಿನಗಳ ಹಿಂದೆ ನಾವುರ ಮತ್ತು ಚೀಂಕು ಮದ್ಯಪಾನ ಮಾಡಿದ ಮತ್ತಿನಲ್ಲಿ ಜಗಳ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಆ ಸಂದರ್ಭದಲ್ಲಿ ಅಲ್ಲಿಗೆ ಪಾನಮತ್ತನಾಗಿ ಆಗಮಿಸಿದ್ದ ಪುತ್ರ ಗೋಪಾಲ್ ಸಹ ಕಲಹದಲ್ಲಿ ಭಾಗಿಯಾದ . ಪಾನಮತ್ತನಾಗಿದ್ದ ಗೋಪಾಲ ಕೋಪದಿಂದ ತನ್ನ ತಾಯಿ ಚೀಂಕು ಅವರಿಗೆ ಅಡಕೆ ಪುಡಿ ಮಾಡುವ ಕಲ್ಲನ್ನು ಹೊಟ್ಟೆಗೆ ಎಸೆದಿದ್ದ ಎಂದು ಆರೋಪಿಸಲಾಗಿದೆ.

ಈ ಘಟನೆಯಲ್ಲಿ ಗಂಭೀರ ಗಾಯಗೊಂಡ ಚೀಂಕು ಅವರಿಗೆ ಚಿಕಿತ್ಸೆ ನೀಡಲಾಯಿತಾದರೂ ನಿನ್ನೆ ಬುಧವಾರ ಸಂಜೆ (ಫೆ.20) ಮೃತಪಟ್ಟಿದ್ದಾರೆ. ಈ ಕುರಿತು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಗೋಪಾಲ್ ಅವರನ್ನು ಬಂಧಿಸಲಾಗಿದೆ.












Click it and Unblock the Notifications