ಮೋದಿ ಚೌಕಿದಾರ್ ಅಲ್ಲ, ಭ್ರಷ್ಟಾಚಾರದಲ್ಲಿ ಭಾಗೀದಾರ್: ಸಿದ್ದರಾಮಯ್ಯ ವಾಗ್ದಾಳಿ
ಮಂಗಳೂರು, ಮಾರ್ಚ್ 07: ಯೋಧರ ಸಾವಿನ ಮೇಲೆ ಬಿಜೆಪಿ ನಾಯಕರು ನೀಚ ರಾಜಕಾರಣ ಮಾಡಲು ಹೊರಟಿದ್ದಾರೆ . ಪ್ರಧಾನಿ ನರೇಂದ್ರ ಮೋದಿಯವರು ಹೋದಲೆಲ್ಲಾ ಯೋಧರ ವಿಚಾರದಲ್ಲಿ ರಾಜಕೀಯ ಲಾಭ ಮಾಡ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯ ಸಂಸದ ನಳಿನ್ ಕುಮಾರ್ ಕಟೀಲ್ ಒಬ್ಬ ನಿಷ್ಪ್ರಯೋಜಕ, ಉಪಯೋಗಕ್ಕೆ ಬಾರದ ವ್ಯಕ್ತಿ. ಆತನಿಗೆ ಕೇವಲ ಬೆಂಕಿ ಹಚ್ಚೋದು ಬಿಟ್ಟು ಬೇರೇನೂ ಗೊತ್ತಿಲ್ಲ ಎಂದು ಕಿಡಿಕಾರಿದರು.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಶತಗತಾಯ ಅವರನ್ನು ಸೋಲಿಸ್ಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಜನ ಶಾಂತಿಪ್ರಿಯರು, ಸಾಮರಸ್ಯ ಬೇಕೆನ್ನುವವರು. ಆದರೆ, ಬಿಜೆಪಿ ನಾಯಕರು ಅಪಪ್ರಚಾರ ನಡೆಸಿ ಜನರನ್ನು ದಾರಿ ತಪ್ಪಿಸಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಕೆಂದ್ರದಲ್ಲಿರುವ ಮೋದಿ ಸರಕಾರ ಕಳೆದ 5 ವರ್ಷದಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯ ನಡೆಸಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ವಿಫಲವಾಗಿದೆ. ಕೊಟ್ಟು ಮಾತು ನಡೆಸಿದ್ದೇವೆ ಎಂದು ಹೇಳಲು ಧೈರ್ಯ, ನೈತಿಕತೆಯಿಲ್ಲ ಅವರಿಗಿಲ್ಲ. ಜನರನ್ನು ಮರಳು ಮಾಡಿ ಕಳೆದ ಬಾರಿ ಮೋದಿ ಗೆದ್ದರು. ಮೋದಿಯ ಬಣ್ಣದ ಮಾತುಗಳನ್ನು ಮತ್ತೆ ಕೇಳಬೇಡಿ ಎಂದು ಕೈ ಮುಗಿದು ಬೇಡುತ್ತೇನೆ ಎಂದು ಸಿದ್ದರಾಮಯ್ಯ ವಿನಂತಿಸಿಕೊಂಡರು.

56 ಇಂಚಿನ ಎದೆ ಇದ್ದರೆ ಸಾಲದು
ಮೋದಿ ಮಾತನಾಡುವಾಗ ಹೇಳ್ತಾರೆ ನನಗೆ 56 ಇಂಚಿನ ಎದೆಗಾರಿಕೆ ಇದೆ ಎಂದು. 56 ಇಂಚಿನ ಎದೆ ಇದ್ದರೆ ಸಾಲದು, ಜನರ ಕಷ್ಟಗಳಿಗೆ ಸ್ಪಂದಿಸುವ ಮನಸ್ಸು, ಸರಕಾರ, ಕಾರ್ಯಕ್ರಮವಿರಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ,ರಬ್ಬರ್ ಬೆಳೆಗಾರರಿಗೆ ಸಾಕಷ್ಟು ಸಮಸ್ಯೆಯಾಗಿದೆ. ನಳಿನ್ ಒಂದು ದಿನವಾದ್ರೂ ಪಾರ್ಲಿಮೆಂಟ್ನಲ್ಲಿ ಮಾತನಾಡಿದ್ದಾನಾ? ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿ ಹಲವು ವರ್ಷದಿಂದ ಬಾಕಿಯಾಗಿದೆ. ಮೋದಿಯವರ ಮುಂದೆ ಸಂಸದರು ಮಾತೇ ಆಡಲ್ಲ.
ಮಹಾದಾಯಿ, ರೈತರ ಸಾಲಮನ್ನಾ ವಿಚಾರದಲ್ಲಿ ಕೇಂದ್ರಕ್ಕೆ ನಿಯೋಗ ಕರೆದುಕೊಂಡು ಹೋಗಿದ್ದೆ. ಈಶ್ವರಪ್ಪ, ಸದಾನಂದ ಗೌಡ, ಶೋಭಾ, ನಳಿನ್ ಸೇರಿಸಿ ಹಲವರು ನಿಯೋಗದಲ್ಲಿದ್ರು. ರೈತರ ಸಾಲಮನ್ನಾ ಮಾಡಲು ಮೋದಿಯವರಲ್ಲಿ ಗೋಗರೆದೆ. ಆದರೆ, ಈ ಗಿರಾಕಿಗಳು ಬಂದವರು ತುಟಿಪಿಟಿಕ್ ಅಂದಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ರಾಹುಲ್ ಪ್ರಧಾನಿ ಆಗೋದು ಗ್ಯಾರಂಟಿ
ನರೇಂದ್ರ ಮೋದಿ ಚೌಕಿದಾರ್ ಅಲ್ಲ, ಭ್ರಷ್ಟಾಚಾರದಲ್ಲಿ ಭಾಗೀದಾರ್ ಎಂದು ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ಅವರು, ಮೋದಿ ದೇಶವನ್ನೇ ಲೂಟಿ ಹೊಡೆದಿದ್ದಾರೆ. ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿ ದೇಶಕ್ಕೆ ಇಲ್ಲಿಯವರೆಗೆ ಬಂದಿಲ್ಲ. ಮುಂಬರುವ ಚುನಾವಣೆಯಲ್ಲಿ ಮೋದಿ ಸೋತು ರಾಹುಲ್ ಗಾಂಧಿ ಪ್ರಧಾನಿ ಆಗೋದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಳಿನ್ ಕಟೀಲ್ ಪಿಟೀಲು ಬಾರಿಸುತ್ತಿದ್ದಾರೆ
ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ, ಮೋದಿ ಅವರಿಗೆ ಹೆಂಡತಿ ಮಕ್ಕಳ ಚಿಂತೆ ಇಲ್ಲ.ಆದ್ರೆ ಬೇರೆ ಮಹಿಳೆಯರ ಬಗ್ಗೆ ಮೋದಿ ಚಿಂತೆ ಮಾಡ್ತಾರೆ.ಮುಸ್ಲಿಂ ಹೆಣ್ಮಕ್ಕಳ ಬಗ್ಗೆ ಮೋದಿಗೆ ಯಾಕೆ ಇಷ್ಟು ಚಿಂತೆ? ಎಂದು ಅವರು ಪ್ರಶ್ನಿಸಿದ ಅವರು ತ್ರಿಪಲ್ ತಲಾಖ್ ಯಾಕೆ ತಂದ್ರಿ. ನಮ್ಮ ಹೆಣ್ಣು ಮಕ್ಕಳನ್ನು ನಾವು ನೋಡಿಕೊಳ್ಳತ್ತೇವೆ ಎಂದು ಹೇಳಿದರು.
ಶೋಭಕ್ಕಾ-ಯಡಿಯೂರಪ್ಪ ರಾಜ್ಯದ ಸೂಪರ್ ಜೋಡಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಷ್ಟೆಲ್ಲಾ ಸಮಸ್ಯೆ ಇರುವಾಗ ಸಂಸದ ನಳಿನ್ ಕುಮಾರ್ ಕಟೀಲ್ ಪಿಟೀಲು ಬಾರಿಸುತ್ತಿದ್ದಾರೆ ಇಬ್ರಾಹಿಂ ಲೇವಡಿ ಮಾಡಿದರು.

ಮೋದಿಗಿಂತ ಮೋಸಗಾರ ಮತ್ತೊಬ್ಬರಿಲ್ಲ
ಪರಿವರ್ತನಾ ಯಾತ್ರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು.ಮೋದಿ ಯುವಕರನ್ನು ಭಾವನಾತ್ಮಕ ವಾಗಿ ಮೋಸ ಮಾಡಿದ್ದಾರೆ. ನೀಡಿದ ಭರವಸೆಗಳನ್ನು ಒಂದೂ ಪೂರೈಸಿಲ್ಲ. ರೈತರ ಕಾರ್ಯಕ್ರಮಗಳನ್ನು ಮೋದಿ ಮಾಡಿಲ್ಲ. 5 ವರ್ಷದ ಹಿಂದೆ ಏನು ಹೇಳಿದ್ದಾರೋ ಅದನ್ನೇ ಇವತ್ತು ಹೇಳಿದ್ದಾರೆ ಎಂದು ವ್ಯಂಗ್ಯ ವಾಡಿದರು.
ನಮ್ಮ ಒಳ್ಳೆಯ ಕೆಲಸದ ಬಗ್ಗೆ ಟೀಕೆ ಮಾಡಿದ್ದೀರಲ್ಲ, ನಿಮಗೆ ಹೃದಯ ಇದ್ಯಾ. ಮೋದಿಗಿಂತ ಮೋಸಗಾರ ದೇಶದಲ್ಲಿ ಮತ್ತೊಬ್ಬರಿಲ್ಲ. ರಾಜ್ಯ ಸರ್ಕಾರದ ವಿಷಯ ಬಿಟ್ಟು ಬಿಡಿ.ನೀವು ಏನು ಮಾಡಿದ್ದೀರಿ ಮೊದಲು ಹೇಳಿ ಎಂದು ಕಿಡಿಕಾರಿದರು. ಕುಮಾರಸ್ವಾಮಿ ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿ ಅಂತ ಹೇಳಿದ್ರಿ. ಮೋದಿ, ಅದಾನಿ ಅಂಬಾನಿಗಳ ರಿಮೋಟ್ ಕಂಟ್ರೋಲ್ ಆಗಿದ್ದಾರೆ. ಅವರ ಪರ ಕೆಲಸ ಮಾಡಿದ್ದಾರೆ. ರಫೆಲ್ ಬಗ್ಗೆ ಮೋದಿ ಸುಳ್ಳು ಹೇಳಿದ್ದಾರೆ. ಮೋದಿ ವಿರುದ್ಧ ಕೇಸ್ ಹಾಕಬೇಕು. ಮೋದಿ ಚೌಕಿದಾರ ಅಲ್ಲ, ಹಗರಣಗಳ ಪಾಲುದಾರ ಎಂದು ದಿನೇಶ್ ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಮೂರ್ತಿಗಳಿಗೆ ಉಸಿರುಗಟ್ಟುವ ಸ್ಥಿತಿಯಿದೆ
ಈ ಸಂದರ್ಭದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್, ಬಿಜೆಪಿ ದೇಶದ ಜನಸಾಮಾನ್ಯರ ಪರವಾಗಿ ಯಾವುದೇ ಕಾರ್ಯಕ್ರಮ ಮಾಡಿಲ್ಲ. ಪಾರ್ಲಿಮೆಂಟ್ನಲ್ಲಿ ವಿದ್ಯಾರ್ಥಿ, ಯುವಜನಾಂಗ, ರೈತರ ಬಗ್ಗೆ ಚರ್ಚೆ ಮಾಡಿಲ್ಲ. ನೀತಿ ಆಯೋಗದ ಅಧ್ಯಕ್ಷರು ಯಾಕೆ ರಾಜೀನಾಮೆ ಕೊಟ್ಟು ಹೋದರು ಎಂದು ಬಿಜೆಪಿ ನಾಯಕರು ಉತ್ತರಿಸ ಬೇಕು ಎಂದು ಕಿಡಿಕಾರಿದರು.
ದೇಶದ ನ್ಯಾಯಮೂರ್ತಿಗಳಿಗೆ ಉಸಿರುಗಟ್ಟುವ ಸ್ಥಿತಿ ನಿರ್ಮಾಣವಾಗಿದೆ. ಮೋದಿ ದೇಶದ ಚೌಕಿದಾರ್ ಚೋರ್ ಆಗಿದ್ದಾರೆ ಎಂದು ರಾಹುಲ್ ಹೇಳಿದ ಮಾತು ಸತ್ಯವಾಗಿದೆ. ಬಿಜೆಪಿ ಸಂಸದರು ಯಾವುದೇ ಜನಪರ ಯೋಜನೆ ಹಮ್ಮಿಕೊಂಡಿಲ್ಲ. ಈ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಯಾವುದಾದರೂ ಒಂದು ಜನಪರ ಯೋಜನೆ ಸಂಪೂರ್ಣ ಅನುಷ್ಠಾನಾ ಮಾಡಿದ್ದಾರಾ? ಎಂದು ಖಾದರ್ ಪ್ರಶ್ನಿಸಿದರು.












Click it and Unblock the Notifications