ಯತೀಂದ್ರ ಅಧಿಕಾರಿಗಳ ಸಭೆ ನಡೆಸಿಲ್ಲ: ಸಿದ್ದರಾಮಯ್ಯ
ಮಂಗಳೂರು, ಅ. 9: ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಕಳುಹಿಸಿರುವ ಕೇಂದ್ರ ತಾಂತ್ರಿಕ ಅಧ್ಯಯನ ತಂಡದಿಂದ ರಾಜ್ಯಕ್ಕೆ ನ್ಯಾಯ ಸಿಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ತಮ್ಮ ಪುತ್ರ ಯತೀಂದ್ರ ಮೇಲಿನ ಅರೋಪವನ್ನು ತಳ್ಳಿ ಹಾಕಿದ್ದಾರೆ.
ಪುತ್ತೂರು ತಾಲೂಕಿನ ಕೊಯ್ಲದಲ್ಲಿ ನೂತನ ಪಶು ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಲು ಮಂಗಳೂರಿಗೆ ಆಗಮಿಸಿದ ಸಂದರ್ಭ ಬಜ್ಪೆಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.[ಸಿಎಂಗಾಗಿ ಜನಾರ್ದನ ಪೂಜಾರಿ ಕಾದರು, ಆದರೆ ಸಿದ್ದು ಬರಲಿಲ್ಲ]
ಮಹದಾಯಿ ಕುರಿತ ಮುಂಬೈಯಲ್ಲಿ ಸಭೆ ಕರೆಯಲಾಗಿದ್ದು, ಅಂದಿನ ಸಭೆಯಲ್ಲಿ ಪಾಲ್ಗೊಂಡು ಚರ್ಚಿಸುವುದಾಗಿ ಮುಖ್ಯಮಂತ್ರಿ ತಿಳಿಸಿದರು.
ಮಹಾದಾಯಿ ಕುರಿತ ವಿವಾದವನ್ನು ಹೊರಗಡೆ ಇತ್ಯರ್ಥ ಮಾಡಿಕೊಳ್ಳುವಂತೆ ಟ್ರಿಬ್ಯುನಲ್ ಸಲಹೆ ನೀಡಿದೆ. ಅದರಂತೆ ತಾನು ಪ್ರಧಾನಿಮಂತ್ರಿ ಸಹಿತ ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದೇನೆ. ಮಹಾರಾಷ್ಟ್ರ ಮುಖ್ಯಮಂತ್ರಿ ಅಕ್ಟೋಬರ್ 21ಕ್ಕೆ ಮುಂಬೈನಲ್ಲಿ ಸಭೆ ಕರೆದಿದ್ದಾರೆ ಎಂದರು.

ನನ್ನ ಪುತ್ರ ಅಧಿಕಾರಿಗಳ ಸಭೆ ನಡೆಸಿಲ್ಲ
ತನ್ನ ಕ್ಷೇತ್ರಕ್ಕೆ ಸಂಬಂಧಿಸಿ ''ಸಿಎಂ ಪುತ್ರ ಅಧಿಕಾರಿಗಳ ಸಭೆ ನಡೆಸಿದ್ದಾರೆ'' ಎಂಬ ಆರೋಪ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನನ್ನ ಕ್ಷೇತ್ರದ ಸಮಸ್ಯೆಗೆ ಸಂಬಂಧಿಸಿ ನನ್ನ ಪುತ್ರ ಸಭೆ ನಡೆಸಿಲ್ಲ. ಮಾತ್ರವಲ್ಲದೆ, ಸಭೆ ನಡೆಸಲು ಅವಕಾಶವೂ ಇಲ್ಲ ಎಂದರು.

ಮತದಾರರ ಸಮಸ್ಯೆಯನ್ನು ಆಲಿಸುತ್ತಿದ್ದ
ತನ್ನ ಹಿರಿಯ ಪುತ್ರ ತನ್ನ ಕ್ಷೇತ್ರದ ಮತದಾರರ ಸಮಸ್ಯೆಯನ್ನು ಆಲಿಸುತ್ತಿದ್ದ. ಇದೀಗ ಆತನ ನಿಧನದ ಬಳಿಕ ನನ್ನ ಎರಡನೆ ಪುತ್ರ ಕ್ಷೇತ್ರಕ್ಕೆ ತೆರಳಿ ಮತದಾರರ ಸಮಸ್ಯೆಯನ್ನು ಆಲಿಸುತ್ತಾನೆ. ಆತ ವೈದ್ಯನಾಗಿದ್ದು, ರಾಜಕೀಯದಲ್ಲಿ ಆಸಕ್ತಿ ಹೊದಿಲ್ಲ. ಆದರೂ ನಾನೇ ಆತನಿಗೆ ಮತದಾರರ ಪರಿಚಯ ಮಾಡಿಸಿದ್ದೇನೆ. ಮತದಾರರ ಪರಿಚಯ ಮಾಡಿಸುವುದೇ ಅಪರಾಧವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

’ಜೋಡುಮಾರ್ಗ ಉದ್ಯಾನವನ’ ಲೋಕಾರ್ಪಣೆ
ಸಚಿವ ಬಿ.ರಮಾನಾಥ ರೈರವರ ಮುತುವರ್ಜಿಯಿಂದ ಹಾಗೂ ಅವರ ಕಲ್ಪನೆಯಂತೆ ಪರಿಸರ ಇಲಾಖೆಯ ನಿರ್ಮಲ ಬಂಟ್ವಾಳ ಯೋಜನೆಯಡಿ 1.40 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ 'ಜೋಡುಮಾರ್ಗ ಉದ್ಯಾನವನ'ವನ್ನು ರಿಬ್ಬನ್ ಕತ್ತರಿಸುವ ಮೂಲಕ ರವಿವಾರ ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು.

ಕಹಳೆಯೊಂದಿಗೆ ಉದ್ಯಾನವನದ ಬಳಿ ಸ್ವಾಗತ
'ಜೋಡುಮಾರ್ಗ ಉದ್ಯಾನವನ' ಲೋಕಾರ್ಪಣೆ ಸಮಾರಂಭಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಬಂಟ್ವಾಳ ಪುರಸಭೆಯ ವತಿಯಿಂದ ಚಂಡೆ, ಕೊಂಬು, ಕಹಳೆಯೊಂದಿಗೆ ಉದ್ಯಾನವನದ ಬಳಿ ಸ್ವಾಗತಿಸಲಾಯಿತು. ಉದ್ಯಾನವನದ ವೇದಿಕೆಯಲ್ಲಿ ರಸಮಂಜರಿ ಏರ್ಪಡಿಸಲಾಗಿತ್ತು.

ಜಿಲ್ಲೆಯ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು
10 ನಿಮಿಷ ನಡೆದ ಈ ಕಾರ್ಯಕ್ರಮದಲ್ಲಿ ನೂರಾರು ಮಂದಿ ಕಾರ್ಯಕರ್ತರು,ಸಾರ್ವಜನಿಕರು ಭಾಗವಹಿಸಿದರು. ಮುಖ್ಯಮಂತ್ರಿಯವರ ಫೋಟೊ ಕ್ಲಿಕ್ಕಿಸಲು ಜನರು ನೂಕುನುಗ್ಗಲು ನಡೆಸಿದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಜಿಲ್ಲಾಧಿಕಾರಿ, ಐಜಿಪಿ, ಎಸ್ಪಿ ಸೇರಿದಂತೆ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು.

ಉದ್ಯಾನವನದಲ್ಲಿ ವಿಹಾರ ನಡೆಸಿದ ಮುಖ್ಯಮಂತ್ರಿ
ಬಿ.ರಮಾನಾಥ ರೈ, ಯು.ಟಿ.ಖಾದರ್, ಶಾಸಕರಾದ ಅಭಯಚಂದ್ರ ಜೈನ್, ಐವನ್ ಡಿಸೋಜ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪಿಯೂಸ್ ರೋಡ್ರೀಗಸ್ ಸೇರಿದಂತೆ ಜಿಪಂ, ತಾಪಂ ಹಾಗೂ ಪುರಸಭಾ ಸದಸ್ಯರ ಸಹಿತ ಪ್ರಮುಖರೊಂದಿಗೆ ಉದ್ಯಾನವನದಲ್ಲಿ ವಿಹಾರ ನಡೆಸಿದ ಮುಖ್ಯಮಂತ್ರಿ ಉದ್ಯಾನವನದ ಸೊಬಗನ್ನು ವೀಕ್ಷಿಸಿದರು. ಬಳಿಕ ನೆರೆದಿದ್ದ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಕೈಬೀಸಿ ಉಪ್ಪಿನಂಗಡಿಯತ್ತ ತೆರಳಿದರು.












Click it and Unblock the Notifications