ಸಾವಿನಲ್ಲೂ ಸಾರ್ಥಕತೆ ಮೆರೆದ ಮಂಗಳೂರಿನ ಬಾಲಕಿ ಪ್ರತೀಕ್ಷಾ
ಮಂಗಳೂರು, ನವೆಂಬರ್.02: ಮಂಗಳೂರಿನ ವಿದ್ಯಾರ್ಥಿನಿಯೊಬ್ಬಳು ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ. ಈ ಮೂಲಕ ಆಕೆ ಇತರರಿಗೆ ಮಾದರಿಯಾಗಿದ್ದಾಳೆ.
ಆ ವಿದ್ಯಾರ್ಥಿನಿಯ ಹೆಸರು ಪ್ರತೀಕ್ಷಾ (16). ಅಶೋಕನಗರದ ನಿವಾಸಿ ಶ್ರೀ ಕುಮಾರಸ್ವಾಮಿ ಕೊಕ್ಕಡ ಮತ್ತು ವಂದನಾ ಕುಮಾರಸ್ವಾಮಿಯವರ ಮುದ್ದಿನ ಸುಪುತ್ರಿ. ನಗರದ ಪ್ರತಿಷ್ಠಿತ ಶಾರದಾ ವಿದ್ಯಾಲಯದಲ್ಲಿ 10 ನೇ ತರಗತಿಯಲ್ಲಿ ಕಲಿಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ.
ಪ್ರತೀಕ್ಷಾಗೆ ಹತ್ತನೇ ವಯಸ್ಸಿಗೆ ಬಲವಾದ ಎಲುಬಿನ ಕ್ಯಾನ್ಸರ್ ಕಾಣಿಸಿಕೊಂಡು ಹಾಸಿಗೆ ಹಿಡಿದಳು. ಆ ನಂತರ ಕಾಯಿಲೆಯನ್ನು ದಿಟ್ಟತನದಿಂದ ಎದುರಿಸಿದ ಪ್ರತೀಕ್ಷಾ ಹಿತೈಷಿಗಳ ಹಾಗೂ ಶಾಲೆಯವರ ಸಹಕಾರದಿಂದ ಎರಡು ವರ್ಷಗಳ ಬಳಿಕ ಗುಣಮುಖಳಾದಳು.

ಆದರೆ ಇತ್ತೀಚೆಗೆ ಕೆಲ ತಿಂಗಳುಗಳ ಹಿಂದೆ ಮತ್ತೆ ಆ ಕಾಯಿಲೆ ಆವರಿಸಿಕೊಂಡಿತ್ತು. ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಲೇ ವ್ಯಾಸಂಗ ಮುಂದುವರೆಸಿದ್ದ ಪ್ರತೀಕ್ಷಾ ನಿನ್ನೆ ಗುರುವಾರ (ನವೆಂಬರ್.01) ಕೊನೆಯುಸಿರೆಳೆದಳು.
ಕಳೆದ 4 ತಿಂಗಳುಗಳಿಂದ ತೀವ್ರವಾಗಿ ಬಾಧಿಸುತ್ತಿದ್ದ ಕಾಯಿಲೆಯಿಂದಾಗಿ ಶಾಲೆಗೆ ಹಾಜರಾಗಲು ಅಸಾಧ್ಯವಾದರೂ ಶಾಲೆಯ ಶಿಕ್ಷಕರು ಪ್ರತೀಕ್ಷಾಳ ಮನೆಗೆ ತೆರಳಿ ಧೈರ್ಯ ತುಂಬುತ್ತಿದ್ದರು.
ಈ ಮಧ್ಯೆ ತಾನು ಈ ಕಾಯಿಲೆಯಿಂದ ಬದುಕುಳಿಯುವುದು ಅಸಾಧ್ಯವೆಂಬುದನ್ನು ಅರಿತ ಆ ಮುಗ್ಧ ಬಾಲೆ ಆಸ್ಪತ್ರೆಯಲ್ಲಿ ತನ್ನ ತಾಯಿಯನ್ನು ಹತ್ತಿರ ಕರೆದು "ಅಮ್ಮಾ ಒಂದು ವೇಳೆ ನನ್ನ ಆತ್ಮ ದೇವರಿಗೆ ಪ್ರಿಯವಾದರೆ, ನನ್ನ ಅಂತ್ಯಸಂಸ್ಕಾರ ಮಾಡದೆ ನನ್ನ ದೇಹವನ್ನು ಆಸ್ಪತ್ರೆಗೆ ದಾನ ಮಾಡಿ" ಎಂದು ವಿನಂತಿಸಿದ್ದಳು. ಇದನ್ನು ಕೇಳಿದ ಹೆತ್ತ ಕರುಳಿಗೆ ದಿಗಿಲು ಬಡಿದಂತಾಗಿತ್ತು. ಪ್ರತೀಕ್ಷಾ ತನ್ನ ನಿವೇದನೆ ಹೇಳಿ ಎರಡೇ ದಿನಕ್ಕೆ ಕೊನೆಯುಸಿರೆಳೆದಳು.
ಪ್ರತೀಕ್ಷಾಗೆ ಡಾಕ್ಟರ್ ಆಗಬೇಕೆಂಬ ಆಸೆಯಿತ್ತು. ಅದಕ್ಕೆ ಪೂರಕವಾಗಿ ವಿಜ್ಞಾನದಲ್ಲಿ ಆಸಕ್ತಿ ಹೆಚ್ಚಿತ್ತು. ಈ ಹಿನ್ನೆಲೆಯಲ್ಲಿ ಆಕೆ ತನ್ನ ದೇಹದಾನ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿರಬಹುದು ಎನ್ನುತ್ತಾರೆ ಹೆತ್ತವರು.

"ದೇಹದಾನ ಎಂಬುದು ನಮ್ಮ ಬ್ರಾಹ್ಮಣ ಸಂಪ್ರದಾಯದಲ್ಲಿ ಇಲ್ಲ. ಆದರೂ ಆಕೆಯ ಇಚ್ಛೆಯನ್ನು ನಾವು ಈಡೇರಿಸುವ ನಿಟ್ಟಿನಲ್ಲಿ ಒಪ್ಪಿಗೆ ಸೂಚಿಸಿದೆವು" ಎನ್ನುತ್ತಾರೆ ತಂದೆ ಕುಮಾರಸ್ವಾಮಿ. ಪ್ರೀತಿಯ ಮಗಳ ಕೊನೆಯ ಇಚ್ಛೆಯಂತೆ ತಂದೆ ತಾಯಿ ಬಂಧು ಬಳಗದವರು ಪ್ರತೀಕ್ಷಾಳ ದೇಹವನ್ನು ಕೆಎಂಸಿ ಆಸ್ಪತ್ರೆಗೆ ದಾನ ಮಾಡಿದರು.












Click it and Unblock the Notifications