ಹೊಸ ವರ್ಷಾಚರಣೆ ತಕರಾರಿಗೆ ಜತೆಯಲ್ಲಿದ್ದವನದೇ ಕೊಲೆ
ಮಂಗಳೂರು, ಜನವರಿ 1: ಹೊಸ ವರ್ಷದ ಆರಂಭದಲ್ಲೇ ಮಂಗಳೂರಲ್ಲಿ ನೆತ್ತರು ಹರಿದಿದೆ. ಹೊಸ ವರುಷವನ್ನು ಸ್ವಾಗತಿಸುವ ವಿಚಾರದಲ್ಲಿ ಯುವಕರಿಬ್ಬರ ಮಧ್ಯೆ ನಡೆದ ಮಾತಿನ ಚಕಮಕಿ ಕೊಲೆಯಲ್ಲಿ ಪರ್ಯವಸಾನವಾದ ಘಟನೆ ಕುತ್ತಾರ್ ಜಂಕ್ಷನ್ ನಲ್ಲಿ ನಡೆದಿದೆ. ಕುತ್ತಾರ್ ನಲ್ಲಿರುವ ಸಲೂನ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಬಳ್ಳಾರಿ ಮೂಲದ ರುದ್ರವಣಿ ಸಂತೋಷ್ (26) ಕೊಲೆಯಾದ ಯುವಕ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಸಮೀಪ ಇರುವ ಕುತ್ತಾರ್ ನಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಅದೇ ಸಲೂನ್ ನಲ್ಲಿ ಕೆಲಸ ಮಾಡುತ್ತಿದ್ದ ಈತನ ಸ್ನೇಹಿತ ಶಿಕಾರಿಪುರದ ಪ್ರದೀಪ್ ಜೊತೆ ಹೊಸ ವರ್ಷಾಚರಣೆ ವಿಷಯದಲ್ಲಿ ಮಾತಿನ ಚಕಮಕಿ ನಡೆದಿದೆ.[ಕೆಆರ್ ಪೇಟೆ ತಾಲೂಕಿನಲ್ಲಿ ಜೆಡಿಎಸ್ ಕಾರ್ಯಕರ್ತನ ಕೊಲೆ]

ಈ ವೇಳೆ ಕುಡಿದ ಅಮಲಿನಲ್ಲಿದ್ದ ಪ್ರದೀಪ್, ಸಂತೋಷ್ ಗೆ ಚೂರಿಯಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸಂತೋಷ್ ನನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದರೂ ಸಫಲವಾಗಿಲ್ಲ. ಕೊಲೆ ಮಾಡಿದ ಆರೋಪಿ ಪ್ರದೀಪ್, ಉಳ್ಳಾಲ ಪೊಲೀಸರಿಗೆ ಶರಣಾಗಿದ್ದಾನೆ.[ಪುಣೆ ಟೆಕಿ ಕೊಲೆ ಪ್ರಕರಣ, ಬೆಂಗಳೂರಿನ ಬುದ್ಧಿವಂತ ಕ್ರಿಮಿನಲ್ ಬಲೆಗೆ]
ಮೂಲ್ಕಿಯಲ್ಲಿ ಯುವಕ ನಾಪತ್ತೆ :
ಕಿನ್ನಿಗೋಳಿಯ ಕಿಲೆಂಜೂರು ಕಂಬಳಿ ಮನೆ ನಿವಾಸಿ ಉಮೇಶ್ ಶೆಟ್ಟಿ (29) ಎಂಬ ಯುವಕ ನಾಪತ್ತೆಯಾಗಿದ್ದಾನೆ. ಪಣಂಬೂರಿನ ಟ್ರಾನ್ಸ್ ಪೋರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಉಮೇಶ್, ಪ್ರತಿ ದಿನ ಪಣಂಬೂರಿಗೆ ಬಸ್ ನಲ್ಲಿ ಹೋಗಿ ಬರುತ್ತಿದ್ದ. ಈತ ಪಕ್ಷಿಕೆರೆಯಲ್ಲಿ ಬಸ್ ನಿಂದ ಇಳಿದು ಅಪರಿಚಿತ ವಾಹನದಲ್ಲಿ ತೆರಳಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಕುರಿತು ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications