ಬಂಟ್ವಾಳದ ಕಡೇಶಿವಾಲಯ ದೇವಸ್ಥಾನದಲ್ಲಿ ಕಳ್ಳತನ, ವಿಗ್ರಹ ದರೋಡೆ
ಮಂಗಳೂರು, ಸೆಪ್ಟೆಂಬರ್ 12: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಕಾರ್ಣಿಕ ದೇವಾಲಯಯೊಂದಕ್ಕೆ ನುಗ್ಗಿದ ಕಳ್ಳರು ದೇವರ ವಿಗೃಹ ಸೇರಿದಂತೆ ಇನ್ನಿತರ ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ನಡೆದಿದೆ.
ಬಂಟ್ವಾಳ ತಾಲೂಕಿನ ಕಡೇಶಿವಾಲಯ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ಕದ್ದೊಯ್ದಿದ್ದಾರೆ. ಸೋಮವಾರ ನಸುಕಿನ ಜಾವ ಈಗ ಘಟನೆ ನಡೆದಿದೆ.

ದೇವಸ್ಥಾನದ ಮುಂಬಾಗಿಲು ಮುರಿದು ಒಳಹೊಕ್ಕ ಕಳ್ಳರು, ಮುಖ್ಯ ದೇವರ ಗರ್ಭಗುಡಿಯ ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಅಲ್ಲಿಂದ ಗರ್ಭಗುಡಿಯಲ್ಲಿದ್ದ ದೇವರ ಮೂರ್ತಿಯನ್ನು ಮತ್ತು ಉಳಿದ ದೇವರ ಗುಡಿಯಲ್ಲಿದ್ದ ಮೂರ್ತಿಗಳನ್ನು ಕದ್ದೊಯ್ದಿದ್ದಾರೆ.
ಲಕ್ಷ್ಮೀನರಸಿಂಹ ದೇವರ ಮೂರ್ತಿ ಸಹಿತ ಉಳಿದ ಮೂರ್ತಿಗಳನ್ನೂ ಕದ್ದೊಯ್ದಿರುವ ಕಳ್ಳರು ಉತ್ಸವ ಮೂರ್ತಿಯನ್ನು ಮಾತ್ರ ಕೊಂಡೊಯ್ದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ದೇವಸ್ಥಾನದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಆದರೆ ಕಳ್ಳರು ಕ್ಯಾಮರಾವನ್ನು ಹಾಳುಗೆಡವಿ ಅದರ ಫೂಟೇಜ್ ಗಳನ್ನೂ ಹೊತ್ತೊಯ್ದಿದ್ದಾರೆ.

ದೇವಸ್ಥಾನದ ಅರ್ಚಕರು ಪೂಜೆ ಕಾರ್ಯಕ್ಕೆ ತೆರಳಿದ ಸಂದರ್ಭ ಘಟನೆ ಗಮನಕ್ಕೆ ಬಂದಿದೆ. ಬಳಿಕ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಬಂದು ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications