ಹಾಸನದಲ್ಲಿ ರಸ್ತೆ ಅಘಫಾತ; ಬೆಳ್ತಂಗಡಿಯ ಸಹೋದರರು ಬಲಿ
ಮಂಗಳೂರು, ಜೂನ್ 20; ಅನ್ಲಾಕ್ ಆಗುತ್ತಿದ್ದಂತೆಯೇ ಬೆಂಗಳೂರಿನಿಂದ ಊರಿಗೆ ಮರಳುತ್ತಿದ್ದ ಬೆಳ್ತಂಗಡಿಯ ಸಹೋದರರಿಬ್ಬರು ಹಾಸನದ ಕೆಂಚಟ್ಟಹಳ್ಳಿಯಲ್ಲಿ ನಡೆದ ಅಫಘಾತದಲ್ಲಿ ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ.
ಮೃತಪಟ್ಟವರನ್ನು ಬೆಳ್ತಂಗಡಿಯ ಇಂದಬೆಟ್ಟು ಗ್ರಾಮದ ಕುತ್ರಬೆಟ್ಟು ನಿವಾಸಿಗಳಾದ ಯೋಗಿಶ್(23) ಜಯಪ್ರಕಾಶ್ (25) ಎಂದು ಗುರುತಿಸಲಾಗಿದೆ. ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು.
ಹಾಸನ ನಗರದ ಹೊರವಲಯದ ಕೆಂಚಟ್ಟಹಳ್ಳಿಯಲ್ಲಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಂಪ್ ಇರುವ ಸ್ಥಳದಲ್ಲಿ ಕಾರಿನ ಮುಂದಿದ್ದ ಲಾರಿ ಚಾಲಕ ಒಮ್ಮೆಲೇ ಬ್ರೇಕ್ ಹಾಕಿದ್ದರಿಂದ ವೇಗದಲ್ಲಿದ್ದ ಕಾರು ನೇರವಾಗಿ ಲಾರಿಯ ಹಿಂಭಾಗಕ್ಕೆ ಗುದ್ದಿದೆ.

ಅಫಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಒಟ್ಟು ನಾಲ್ವರು ಇದ್ದರು. ಯೋಗಿಶ್ ಮತ್ತು ಜಯಪ್ರಕಾಶ್ ಮೃತಪಟ್ಟಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಕ್ಕಳನ್ನು ಕಾಯುತ್ತಿದ್ದರು; ಮನೆಗೆ ಆಧಾರಸ್ತಂಭವಾಗಿದ್ದ ಜಯಪ್ರಕಾಶ್ ಮತ್ತು ಯೋಗಿಶ್ ಅಫಘಾತವಾಗುವ ಕೆಲ ನಿಮಿಷಗಳ ಹಿಂದೆಯಷ್ಟೇ ಮನೆಯವರಿಗೆ ಕರೆ ಮಾಡಿದ್ದರು. ಕೆಲವೇ ಗಂಟೆಗಳಲ್ಲಿ ಮನೆ ತಲುಪುವುದಾಗಿಯೂ ಹೇಳಿದ್ದರು.
ಮಕ್ಕಳ ಬರುವಿಕೆಗಾಗಿಯೇ ಮನೆಯಲ್ಲಿ ಹಿರಿಜೀವಗಳು ಕಾಯುತ್ತಿದ್ದರು. ಭಾರೀ ಮಳೆ ಸುರಿಯುತ್ತಿದ್ದರಿಂದ ಮಕ್ಕಳು ಮನೆಗೆ ಬಂದ ಕೂಡಲೇ ಸ್ನಾನ ಮಾಡಲು ಬಿಸಿ ನೀರನ್ನೂ ಕಾಯಿಸಿದ್ದರು. ಆದರೆ ಮಕ್ಕಳು ರಸ್ತೆ ಅಫಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿರುವುದು ಹಿರಿಜೀವಗಳಿಗೆ ಸಿಡಿಲು ಬಡಿದಂತಾಗಿದೆ.

ಮನೆಗೆ ಆಧಾರಸ್ತಂಭವಾಗಿದ್ದರು; ಸಹೋದರರ ತಂದೆ ಎರಡು ವರ್ಷದ ಹಿಂದೆಯಷ್ಟೇ ತೀರಿ ಹೋದ ಬಳಿಕ ಕುತ್ರಬೆಟ್ಟುವಿನ ಅಜ್ಜನ ಮನೆಯಲ್ಲೇ ವಾಸವಾಗಿದ್ದಾರೆ. ಹಿರಿಯ ಸಹೋದರ ಜಯಪ್ರಕಾಶ್ ಬೆಂಗಳೂರಿನಲ್ಲಿ ಎಲೆಕ್ಟ್ರೀಷಿಯನ್ ಆಗಿದ್ದು, ಕಿರಿಯ ಸಹೋದರ ಯೋಗಿಶ್ ಬೆಳ್ತಂಗಡಿಯಲ್ಲಿ ಖಾಸಗಿ ಬಸ್ ನಿರ್ವಾಹಕರಾಗಿದ್ದರು.
ಕೆಲಸದ ನಿಮಿತ್ತ ಇಬ್ಬರೂ ಬೆಂಗಳೂರಿಗೆ ತೆರಳಿದ್ದರು. ಈ ಸಹೋದರರಿಗೆ ತಂಗಿಯೊಬ್ಬರಿದ್ದು ಆರು ತಿಂಗಳ ಹಿಂದೆಯಷ್ಟೇ ಮದುವೆ ಮಾಡಿ ಕೊಡಲಾಗಿತ್ತು. ಮನೆಯನ್ನು ಮುನ್ನಡೆಸುತ್ತಿದ್ದ ಮಕ್ಕಳು ಅಫಘಾತದಲ್ಲಿ ತೀರಿ ಹೋದ ಸುದ್ದಿ ಮನೆಯವರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.












Click it and Unblock the Notifications