ಕರಾವಳಿಯಲ್ಲಿ ಜಲಕ್ಷಾಮದ ಆತಂಕ; ಅಪಾಯದಲ್ಲಿ ಶಿಶಿಲದ ದೇವರ ಮೀನುಗಳು
ಮಂಗಳೂರು, ಏಪ್ರಿಲ್ 12: ಬೇಸಿಗೆ ವೇಳೆ ಕರಾವಳಿಯಲ್ಲಿ ಸೂರ್ಯನ ಪ್ರಖರ ಕಿರಣಗಳ ಕಾವು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಉರಿ ಬಿಸಿಲಿನ ಬೇಗೆಗೆ ಜನರು ಹಾಗೂ ಪ್ರಾಣಿಗಳು ತತ್ತರಿಸುತ್ತಿವೆ.
ಒಂದೆಡೆ ಬಿಸಿಲು ಕೆಂಡದಂತೆ ಸುಡುತ್ತಿದ್ದರೆ ಜಲಮೂಲಗಳಲ್ಲಿ ಜಲವೇ ಅತ್ಯಂತ ವೇಗವಾಗಿ ಆವಿಯಾಗುತ್ತಿದೆ. ಪ್ರಮುಖವಾಗಿ ಪಶ್ಚಿಮ ಘಟ್ಟದ ತಪ್ಪಲಿನ ತಾಲ್ಲೂಕುಗಳಲ್ಲಿ ನದಿಗಳ ನೀರಿನ ಹರಿವು ಕೂಡಾ ಕಡಿಮೆಯಾಗಿದೆ. ಹಲವು ಕಡೆಗಳಲ್ಲಿ ನದಿಯೇ ಬರಿದಾಗಿದೆ.
ನಡುಬೇಸಿಗೆಯ ಕಾವಿಗೆ ನದಿ-ಹಳ್ಳಗಳಲ್ಲಿ ನೀರು ಆವಿಯಾಗುತ್ತಿದ್ದು, ಜಲಕ್ಷಾಮ ಉಂಟಾಗುವ ಆತಂಕ ಎದುರಾಗಿದೆ. ಪ್ರಮುಖವಾಗಿ ದೇವರ ಮೀನುಗಳಿಂದಲೇ ಪ್ರಖ್ಯಾತವಾಗಿರುವ ಬೆಳ್ತಂಗಡಿ ತಾಲೂಕಿನ ಶಿಶಿಲದ ಶಿಶಿಲೇಶ್ವರ ದೇವಸ್ಥಾನದ ದೇವರ ಮೀನುಗಳಿಗೆ ಜಲಕ್ಷಾಮದ ಆತಂಕ ಎದುರಾಗಿದೆ.
ಕಪಿಲಾ ನದಿ ದಂಡೆಯಲ್ಲಿರುವ ದೇವಸ್ಥಾನದ ಪ್ರಮುಖ ಆಕರ್ಷಣೆಯೇ ದೇವರ ಮೀನುಗಳು. ಸಾವಿರಾರು ಮೀನುಗಳು ಒಂದೆಡೆ ಸೇರಿ ಭಕ್ತರು ಹಾಕುವ ಪ್ರಸಾದವನ್ನು ತಿನ್ನುವುದೇ ನೋಡಲು ಕಣ್ಣಿಗೆ ಹಬ್ಬ. ಆದರೆ, ಕಪಿಲಾ ನದಿಯಲ್ಲಿ ನೀರು ದಿನದಿಂದ ದಿನಕ್ಕೆ ಆವಿಯಾಗುತ್ತಿರುವುದು ದೇವಳದ ಭಕ್ತರ ಆತಂಕಕ್ಕೆ ಕಾರಣವಾಗಿದೆ.
ಅಲ್ಲದೇ ನೀರಿನ ಹರಿವು ಕಡಿಮೆಯಾಗಿ, ನೀರಿನಲ್ಲಿ ಆಮ್ಲಜನಕ ಕಡಿಮೆಯಾಗಿ ಮೀನುಗಳ ದೇಹ ರಚನೆಗೆ ತೊಂದರೆಯಾಗುವ ಆತಂಕವೂ ಸ್ಥಳೀಯರಲ್ಲಿದೆ. ದೇವಳದ ಎರಡು ಕಿ.ಮೀ ಸುತ್ತಮುತ್ತ ನದಿಯಲ್ಲಿ ಮೀನು ಹಿಡಿಯುವುದನ್ನು ಈಗಾಗಲೇ ನಿಷೇಧಿಸಲಾಗಿದೆ.
ಪಶ್ಚಿಮ ಘಟ್ಟದಿಂದ ಕಪಿಲಾ ನದಿಗೆ ಬರುವ ನೀರಿನ ಒರತೆಯ ಹರಿವು ಕಡಿಮೆಯಾಗಿದ್ದು, ಸುತ್ತಮುತ್ತಲಿನ ಕೃಷಿಕರು ಕಪಿಲಾ ನದಿಯ ನೀರನ್ನೇ ಕೃಷಿಗೆ ಅವಲಂಬಿಸಿದ್ದಾರೆ.
ಪಶ್ಚಿಮ ಘಟ್ಟ ಭಾಗಗಳಲ್ಲಿ ಮಳೆಯಾದರೆ ಮಾತ್ರ ಕಪಿಲಾ ನದಿಗೆ ನೀರು ಬರುವುದರಿಂದ ಮೇ ತಿಂಗಳ ವೇಳೆಯಲ್ಲಿ ನೀರು ಮತ್ತಷ್ಟು ಬರಿದಾಗುವ ಸಾಧ್ಯತೆಗಳಿವೆ.