ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಸಲ್ಲದು: ಯು ಟಿ ಖಾದರ್
ಮಂಗಳೂರು ಜನವರಿ 26: ದೇಶದ 70ನೇ ಗಣರಾಜ್ಯೋತ್ಸವ ವನ್ನು ಮಂಗಳೂರಿನಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಗಣರಾಜ್ಯೋತ್ಸವದ ಅಂಗವಾಗಿ ನಗರದ ನೆಹರೂ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಅವರು ಧ್ವಜಾರೋಹಣ ನೆರವೇರಿಸಿದರು.
ಬಳಿಕ ರಾಷ್ಟ್ರಗೀತೆ, ರೈತಗೀತೆಗಳ ಗಾಯನ ನಡೆಯಿತು. ತದನಂತರ ಸಚಿವ ಯು ಟಿ ಖಾದರ್ ತೆರೆದ ವಾಹನದಲ್ಲಿ ಗೌರವ ರಕ್ಷೆ ಸ್ವೀಕರಿಸಿ ಕವಾಯತು ವೀಕ್ಷಣೆ ಮಾಡಿದರು. ಬಳಿಕ ಗಣರಾಜ್ಯೋತ್ಸವದ ಸಂದೇಶ ನೀಡಿ ಯು ಟಿ ಖಾದರ್ ವರ್ಷದ 365 ದಿನದ 24 ಗಂಟೆ ಚಳಿ ,ಮಳೆ, ಗಾಳಿ ಯನ್ನು ಲೆಕ್ಕಿಸದೇ ಭಾರತಾಂಬೆಯ ನೆಲಕಾಯುವ ನಮ್ಮ ಸೈನಿಕರ ತ್ಯಾಗ , ಬಲಿದಾನಕ್ಕೆ, ಬೆಲೆ ಕಟ್ಟಲು ಸಾಧ್ಯವಿಲ್ಲ .
ನಾವೇಲ್ಲ ಅವರಿಗೆ ಎಷ್ಟು ಕೃತಜ್ಞತೆಯನ್ನು ಸಲ್ಲಿಸಿದರೂ ಕಡಿಮೆಯೇ . ಈ ಸೈನಿಕರ ತ್ಯಾಗ ಬಲಿದಾನ ದಿಂದಾಗಿ ಇಂದು ಭಾರತ ಜನಗತ್ತಿನಲ್ಲಿ ಗೌರವ ದಿಂದ ತಲೆ ಎತ್ತಿನಿಂತಿದೆ ಎಂದು ಹೇಳಿದರು.

ದೇಶದ ನಾಗರಿಕರಾಗಿ ಭವ್ಯ ಪರಂಪರೆ ಮತ್ತು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಕರ್ತವ್ಯ ವಾಗಿದೆ. ಜಾತಿ , ಧರ್ಮ, ಭಾಷೆ, ಪಂಗಡ, ಗಳೆಂಬ ಸಂಕುಚಿತ ಭಾವನೆಯಿಂದ ಹೊರಬಂದು ದೇಶದ ಒಗ್ಗಟ್ಟು ಮತ್ತು ಐಕ್ಯತೆಯನ್ನು ಕಾಪಾಡಿ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಲು ನಾವೆಲ್ಲ ಒಟ್ಟಾಗಿ ಶ್ರಮಿಸಬೇಕು ಎಂದು ಅವರು ಕೆರೆನೀಡಿದರು.

ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ ಎಂದು ಏನಾದರೂ ಮಾತನಾಡುವುದಲ್ಲ ಅಥವಾ ಬರೆಯುವುದಲ್ಲ. ಈ ದೇಶದ ಹಿತಾಸಕ್ತಿ ವಿರುದ್ಧವಾಗಿ ಅಥವಾ ಈ ದೇಶದ ಏಕತೆ ಸಮಗ್ರತೆಗೆ ಮಾರಕವಾದ ವಿಚಾರಗಳನ್ನು ನಾವು , ಅದರಲ್ಲೂ ನಮ್ಮ ವಿದ್ಯಾವಂತ ಯುವ ಜನಾಂಗ ಎಂದೂ ಮಾತನಾಡಬಾರದು , ಬರೆಯಬಾರದು . ಒಂದು ಜವಾಬ್ದಾರಿಯುತ ಯುವ ಜನಾಂಗವೇ ದೇಶದ ಅಮೂಲ್ಯ ಸೊತ್ತಾಗಿರುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಪೋಲೀಸ್ ಪಡೆ, ಎನ್ ಸಿ ಸಿ , ಸ್ಕೌಟ್ ಹಾಗು ಶಾಲಾ ಕಾಲೇಜು ವಿದ್ಯಾರ್ಥಿಗಳ ತುಕಡಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು .












Click it and Unblock the Notifications