ಮಂಗಳೂರು: ಕಟ್ಟಡದ ತಳ ಭಾಗದಲ್ಲಿದ್ದ 10ಸಾವಿರಕ್ಕೂ ಅಧಿಕ ಮೀನುಗಳ ಸ್ಥಳಾಂತರ
ಮಂಗಳೂರು, ನವೆಂಬರ್27: ಬೃಹತ್ ಮರಗಳನ್ನು ಸ್ಥಳಾಂತರ ಮಾಡುವ ಕಾರ್ಯವನ್ನು ಮಂಗಳೂರಿನ ಪರಿಸರ ಪ್ರೇಮಿ ಮಾಡಿದ್ದರು. ಇದೀಗ ಅದೇ ಮಾದರಿಯಲ್ಲಿ ಮೀನುಗಳನ್ನು ರಕ್ಷಿಸಲು ಅವುಗಳನ್ನು ಸ್ಥಳಾಂತರ ಮಾಡುವ ಕಾರ್ಯ ಭರದಿಂದ ಸಾಗಿದೆ.
ಕೊಡಿಯಾಲಬೈಲ್ನ ಟಿಎಂಎಪೈ ಕನ್ವೆನ್ಷನ್ ಸೆಂಟರ್ನ ಮುಂಭಾಗದ ನಿರ್ಮಾಣ ಹಂತದಲ್ಲಿರುವ ಕಟ್ಟಡದ ತಳಭಾಗದ ಮೂರು ಎಕರೆ ಜಾಗದಲ್ಲಿ ತುಂಬಿಕೊಂಡಿರುವ ನೀರಿನಲ್ಲಿದ್ದ ಸಾವಿರಾರು ಮೀನುಗಳನ್ನು ಸಂರಕ್ಷಿಸಲಾಗಿದೆ. ಇಲ್ಲಿನ ಮೀನುಗಳನ್ನು ಬಲೆ ಹಾಕಿ ನಾಜೂಕಾಗಿ ಹಿಡಿದು ನಗರದ ಕಾವೂರು ಕೆರೆ ಹಾಗೂ ಮಂಗಳಾದೇವಿ ಸಮೀಪದ ಗುಜ್ಜರಕೆರೆಗೆ ಬಿಡಲಾಗಿದೆ.
ಶಾರೀಕ್ ಮನೆ ಮಾಲೀಕನ ವಶಕ್ಕೆ ಪಡೆದ ಪೊಲೀಸರು
ಮಂಗಳೂರಿನ ಪರಿಸರ ಪ್ರೇಮಿಗಳಾದ ಜೀತ್ ಮಿಲನ್ ರೋಚ್, ಭುವನ್ ದೇವಾಡಿಗ, ಸೆಲ್ಮಾ, ನಿಧಿ ಹಾಗೂ ಅತೀಕ್ ಎನ್ನುವವರ ತಂಡ ಮೀನುಗಳನ್ನು ಸಂರಕ್ಷಣೆ ಮಾಡಿದ್ದಾರೆ. ಈ ತಂಡ ಬರೋಬ್ಬರಿ 10ಸಾವಿರಕ್ಕೂ ಅಧಿಕ ಮೀನುಗಳನ್ನು ರಕ್ಷಿಸಿದ್ದಾರೆ.
ನಾರ್ತನ್ ಸ್ಕೈ ಮಾಲೀಕರ ನಿರ್ಮಾಣ ಹಂತದ ಕಟ್ಟಡ ಸಾಕಷ್ಟು ಕಾಲದಿಂದ ಕಾಮಗಾರಿ ನಡೆಯದೆ ಹಾಗೆಯೇ ಉಳಿದಿತ್ತು. ಈ ಕಟ್ಟಡದ ತಳಭಾಗದ ಮೂರು ಎಕರೆ ಪ್ರದೇಶದಲ್ಲಿ ನೀರು ತುಂಬಿಕೊಂಡಿತ್ತು. ಈ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ಮನಪಾ ಆರೋಗ್ಯ ಇಲಾಖೆ, ತಿಲಿಪಿಯಾ(ಸರ್ಕಾರ್) ಮೀನುಮರಿಗಳನ್ನು ಹಾಕಿತ್ತು. ಸಾಕಷ್ಟು ಕಾಲಗಳಿಂದ ನೀರಿನಲ್ಲಿದ್ದ ಈ ಮೀನುಗಳು 10 ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯಷ್ಟಾಗಿದೆ ಮತ್ತೆ ಕಾಮಗಾರಿ ನಡೆಸುವ ವೇಳೆ ಈ ಮೀನುಗಳ ರಕ್ಷಣಾ ಕಾರ್ಯಾಚರಣೆಯ ಹೊಣೆಯನ್ನು ಜೀತ್ ಮಿಲನ್ ರೋಚ್ ಅವರಿಗೆ ವಹಿಸಿದ್ದರು.
15 -20 ಫೀಟ್ ಆಳದ ಕಟ್ಟಡದ ತಳಭಾಗದಲ್ಲಿ ತುಂಬಿದ್ದ ಅಗಾಧ ಪ್ರಮಾಣದ ನೀರನ್ನು ಖಾಲಿ ಮಾಡುವುದೇ ದುಸ್ತರವಾಗಿತ್ತು. ಅದಕ್ಕಾಗಿ 11 ದಿನಗಳ ಕಾಲ 6 ಪಂಪ್ಗಳನ್ನು ಬಳಸಿ ಪ್ರತಿನಿತ್ಯ ಬೆಳಗ್ಗೆ 6ರಿಂದ ರಾತ್ರಿ 8ರವರೆಗೆ ಖಾಲಿ ಮಾಡಲಾಗಿತ್ತು. ಆ ಬಳಿಕ ಮೀನಿನ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಬಲೆಯನ್ನು ಬಳಸಿ ಮೀನುಗಳನ್ನು ಹಿಡಿಯಲಾಗಿತ್ತು. ಹೀಗೆ ಹಿಡಿದ ಮೀನುಗಳನ್ನು ಕ್ರೇಟ್ ಗಳ ಮೂಲಕ ಸಾಗಿಸಿ ಸುರಕ್ಷಿತವಾಗಿ ಕೆರೆಗಳಿಗೆ ಬಿಡಲಾಗಿದೆ. ಮುಗುಡು ಮೀನುಗಳನ್ನು ಕೂಳೂರು ಫಲ್ಗುಣಿ ನದಿಗೆ ಬಿಡಲಾಗಿದೆ.