ಮಂಗಳೂರಿನಲ್ಲಿ ಗಣೇಶೋತ್ಸವ ಪ್ರಯುಕ್ತ ಧಾರ್ಮಿಕ ಸಭೆ
ಮಂಗಳೂರು, ಆಗಸ್ಟ್ 27: ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್ನ ಓಂಕಾರನಗರದಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭೆ ಶನಿವಾರ ಜರುಗಿತು.
"ದ.ಕ. ಜಿಲ್ಲೆಯಲ್ಲಿ ಧರ್ಮ ಧರ್ಮದ ನಡುವೆ ಇತ್ತೀಚೆಗೆ ಹದಗೆಡುತ್ತಿರುವ ಸೌಹಾರ್ದಯುತ ಸಂಬಂಧ ಮತ್ತೆ ಮರು ಸ್ಥಾಪಿಸಬೇಕು. ಪ್ರಾಚೀನ ತುಳುನಾಡಿನಲ್ಲಿ ಪ್ರತಿಷ್ಠಿತ ಬಂಟ ಮನೆತನದ ಗುತ್ತಿನ ಚಾವಡಿಯಲ್ಲಿ ನ್ಯಾಯ ತೀರ್ಮಾನ ನಡೆಸುವ ಪದ್ಧತಿ ಜಾರಿಯಲ್ಲಿತ್ತು. ಗುತ್ತಿನ ಯಜಮಾನ ತೆಗೆದುಕೊಂಡ ನಿಷ್ಪಕ್ಷಪಾತದ ತೀರ್ಮಾನ ಸರ್ವರ ಮೆಚ್ಚುಗೆಗೆ ಪಾತ್ರವಾಗುತ್ತಿತ್ತು. ಈ ಹಿಂದಿನ ವ್ಯವಸ್ಥೆಯೇ ಜಾರಿಗೆ ಬರುವ ಅನಿವಾರ್ಯತೆ ಇದೆ," ಎಂದು ಉಳ್ಳಾಲ ಸಯ್ಯದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹೇಳಿದರು.

ಕೂಳೂರು ಚರ್ಚ್ನ ಧರ್ಮಗುರು ರೇಫಾ ವಿನ್ಸೆಂಟ್ ಡಿಸೋಜ ಮಾತನಾಡಿ, "ಸಾರ್ವಜನಿಕ ಗಣೇಶೋತ್ಸವದಿಂದ ಈಶಸೇನೆ, ದೇಶಸೇನೆ ಹಾಗೂ ಕಲಾಸೇನೆ ಎಂಬ ನಾಲ್ಕು ಬಗೆಯ ಸೇನಾ ಕಾರ್ಯಗಳು ನಡೆಯುತ್ತಿರುವುದು ಪ್ರಶಂಸನೀಯ," ಎಂದರು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ರಾಜ್ ಕಿರಣ್ ಜಿ.ರೈ ಮಾತನಾಡಿ, "ಪ್ರಪಂಚದಾದ್ಯಂತ ಶ್ರೀ ಗಣೇಶನನ್ನು ಆರಾಧಿಸಲಾಗುತ್ತಿದ್ದು, ಗಣೇಶೋತ್ಸವದ ಕಾರ್ಯಕ್ರಮದಲ್ಲಿ ಸರ್ವಧರ್ಮೀಯರನ್ನು ಒಗ್ಗೂಡಿಸುವ ಮೂಲಕ ಶ್ರೀ ಗಣೇಶ ಸರ್ವರೂ ಸೇರಿ ಆರಾಧಿಸುವ ದೇವರಾಗಿದ್ದಾರೆ," ಎಂದು ಹೇಳಿದರು.
ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಭಂಡಾರಿ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಬಂಟರ ಮಾತೃ ಸಂಘದ ಪದಾಧಿಕಾರಿಗಳಾದ ವಸಂತ ಶೆಟ್ಟಿ, ರವೀಂದ್ರನಾಥ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಜ್ ಕಿರಣ್ ಜಿ. ರೈ, ಮಾಂಡೋವಿ ಮೋಟರ್ಸ್ನ ಆಡಳಿತ ನಿರ್ದೇಶಕ ಆರೂರು ಸಂಜಯರಾವ್, ಮನೋಹರ ಶೆಟ್ಟಿ, ಡಾ. ಮಹಮ್ಮದ್ ಇಕ್ಬಾಲ್, ಪತ್ರಕರ್ತ ರೊನಾಲ್ಡ್ ಫೆರ್ನಾಂಡೀಸ್, ಡಾ. ಸದಾನಂದ ಪೆರ್ಲ, ಜೀವನ್ರಾಮ್ ಸುಳ್ಯರವರನ್ನು ಸನ್ಮಾನಿಸಿ ಗೌರವಿಸಲಾಯಿತು.












Click it and Unblock the Notifications