ಲಿಂಗಾಯತ ಧರ್ಮ ಮಾನ್ಯತೆ ಈಡೇರದಿದ್ದರೆ ದೊಡ್ಡ ಹೋರಾಟ
ಬೆಂಗಳೂರು, ಮೇ 2: ಕೇಂದ್ರ ಸರ್ಕಾರ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡದಿದ್ದರೆ ಬೃಹತ್ ಹೋರಾಟ ಆರಂಭವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿಶ್ವ ಲಿಂಗಾಯತ ಸಮಿತಿ ಧಾರವಾಡದ ಕಾರ್ಯಾಧ್ಯಕ್ಷರು ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರಿನ ರಾಷ್ಟ್ರೀಯ ಕಾರ್ಯದರ್ಶಿ ಡಾ. ಶಶಿಕಾಂತ್ ಪಟ್ಟಣ ಹೇಳಿದ್ದಾರೆ.
ಲಿಂಗಾಯತ ಧರ್ಮದ ಮಾನ್ಯತೆ ಕಾನೂನು ಮತ್ತು ನ್ಯಾಯ ಸಮ್ಮತವಾಗಿದೆ. ಇದಕ್ಕೆ ಅಡ್ಡಿಪಡಿಸುವುದು ಸಂವಿಧಾನದ ವಿರೋಧಿ ಚಟುವಟಿಕೆಯಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಅವರು ಬಿಜೆಪಿಗೆ ಅಧಿಕಾರ ನೀಡದೆ ದ್ರೋಹ ಮಾಡಿದಾಗ ಪಕ್ಷಭೇದ ಮರೆತು ಎಲ್ಲ ಲಿಂಗಾಯತರೂ ಬಿಜೆಪಿಯನ್ನು ಬೆಂಬಲಿಸಿದ್ದರು. ಅದೇ ರೀತಿ ಲಿಂಗಾಯತ ಧರ್ಮಕ್ಕೆ ಬೆಂಬಲ ಕೊಟ್ಟ ಯಾವುದೇ ರಾಜಕೀಯ ಪಕ್ಷವಿರಲಿ ಅದನ್ನು ನಾವು ಸಮರ್ಥಿಸೋಣ. ಧರ್ಮ ಮಾನ್ಯತೆ ಹೋರಾಟವನ್ನು ರಾಜಕೀಯಗೊಳಿಸಿ ಧರ್ಮ ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ.

ಅವೈದಿಕ ಹಿಂದೂಯೇತರರ ಧರ್ಮವಾದ ಲಿಂಗಾಯತ ಧರ್ಮವನ್ನು ಬಸವಣ್ಣನವರು ಸ್ಥಾಪಿಸಿದ್ದಾರೆ. ಬೌದ್ಧ, ಜೈನ, ಸಿಖ್, ಕ್ರೈಸ್ತ ಮುಸಲ್ಮಾನ ಧರ್ಮೀಯರಿಗೆ ಸಿಗುವ ಸೌಲಭ್ಯವನ್ನು ಲಿಂಗಾಯತರು ಪಡೆದುಕೊಡರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.
ತರಾತುರಿಯ ನಿರ್ಣಯವಲ್ಲ
ಕಳೆದ ಹಲವು ದಶಕದಿಂದಲೂ ಲಿಂಗಾಯತ ಧರ್ಮ ಮಾನ್ಯತೆಯ ಕುರಿತಾಗಿ ಹೋರಾಟ ನಡೆಯುತ್ತಿದೆ. ಅಖಿಲ ಭಾರತ ವೀರಶೈವ ಮಹಾಸಭೆ ವಿಶ್ವ ಲಿಂಗಾಯತ ಸಮಿತಿ, ಮಾತೆ ಮಹಾದೇವಿ ಹೀಗೆ ಅನೇಕ ಸಂಘ ಸಂಸ್ಥೆಗಳು, ವ್ಯಕ್ತಿಗಳು ಸರ್ಕಾರಕ್ಕೆ ಮನವಿ ನೀಡುತ್ತಲೇ ಬಂದಿದ್ದರು.
ಮುಂದೆ ಅನೇಕ ಸಚಿವರು, ಶಾಸಕರು ಲಿಂಗಾಯತ ಧರ್ಮ ಮಾನ್ಯತೆ ಹೋರಾಟ ಬೆಂಬಲಿಸಿದರು. ಸರ್ಕಾರ ನ್ಯಾಯಮೂರ್ತಿ ನಾಗಮೋಹನ ದಾಸ ಅವರ ನೇತೃತ್ವದ ಸಮಿತಿ ರಚಿಸಿತು.
ತಜ್ಞರು ಎರಡೂ ಕಡೆಯ ಅಭಿಪ್ರಾಯಗಳನ್ನು, ದಾಖಲೆಗಳನ್ನು ಪರಿಶೀಲಿಸಿ ಲಿಂಗಾಯತ ಧರ್ಮ ಹಾಗು ಅಲ್ಪಸಂಖ್ಯಾತ ಮಾನ್ಯತೆಗಾಗಿ ಶಿಫಾರಸು ಮಾಡಿರುವುದು ಸಂವಿಧಾನಾತ್ಮಕ ಕ್ರಮ. ಇದಕ್ಕಾಗಿ ಸರ್ಕಾರವನ್ನು ದೂರುವುದು ಸೂಕ್ತವಲ್ಲ ಎಂದಿದ್ದಾರೆ.
ವೀರಶೈವ-ಲಿಂಗಾಯತ ಧರ್ಮದ ಪರ್ಯಾಯ ಪದವಲ್ಲ
ಲಿಂಗಾಯತ ಒಂದು ಸ್ವತಂತ್ರ ಧರ್ಮ ಹಾಗೂ ವೀರಶೈವವು ಲಿಂಗಾಯತ ಧರ್ಮದ ಉಪಪಂಗಡ ಮಾತ್ರ. ಇದಕ್ಕೆ ಸಾವಿರಾರು ದಾಖಲೆಗಳಿವೆ.
ಈ ಹಿಂದೆ ಅಖಿಲ ಭಾರತ ವೀರಶೈವ ಮಹಾಸಭೆಯು ಸಲ್ಲಿಸಿದ ಧಾರ್ಮಿಕ ಮಾನ್ಯತೆ ಮನವಿಯ ಅರ್ಜಿಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ವೀರಶೈವ ಪದ ಬಳಕೆ ಮತ್ತು ಅದಕ್ಕೆ ಪೂರಕವಾದ ದಾಖಲೆಗಳ ಕೊರತೆಯ ಕಾರಣವನ್ನು ಅದು ಮುಂದಿಟ್ಟಿತ್ತು. ಈ ತಪ್ಪು ಈಗ ಮರುಕಳಿಸಬಾರದು ಎಂದು ಅವರು ಹೇಳಿದ್ದಾರೆ.












Click it and Unblock the Notifications