ತೋಟಬೆಂಗ್ರೆ ಗ್ಯಾಂಗ್ ರೇಪ್ ಪ್ರಕರಣ: ಪೊಲೀಸರ ವಿರುದ್ಧ ಕಿಡಿಕಾರಿದ ಶೋಭಾ ಕರಂದ್ಲಾಜೆ
ಮಂಗಳೂರು, ಡಿಸೆಂಬರ್ 02: ಮಂಗಳೂರಿನ ತೋಟ ಬೆಂಗ್ರೆ ಬೀಚ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಕಾರಣ ಅಫೀಮು ಮತ್ತು ಡ್ರಗ್ಸ್ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾನು ಘಟನೆಯ ಸಂತ್ರಸ್ತೆಯ ಜೊತೆ ಮಾತನಾಡಿ ಬಂದಿದ್ದೇನೆ. ಆರೋಪಿಗಳು ಭಯಾನಕವಾಗಿ ಕೃತ್ಯ ಎಸಗಿದ್ದಾರೆ. ಅಫೀಮು, ಡ್ರಗ್ಸ್ ನಿಂದ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗಿದೆ. ಈ ಮಾದಕ ವಸ್ತುಗಳ ಜಾಲವನ್ನು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಮಾಡುತ್ತಿಲ್ಲ.
ಕೃತ್ಯ ಎಸಗಿದ ಆರೋಪಿಗಳಿಗೆ ಹಾಗೂ ಘಟನೆಯ ತನಿಖೆ ನಡೆಸಲು ನಿರ್ಲಕ್ಷ್ಯ ತೋರಿದ ಪೊಲೀಸರಿಗೆ ಕಠಿಣ ಶಿಕ್ಷೆಯಾಗಬೇಕು. ಪೊಲೀಸರು ಅಪರಾಧ ಜಾಲಗಳ ಮೂಲವನ್ನು ಪತ್ತೆ ಮಾಡಬೇಕು ಎಂದು ಹೇಳಿದರು.

ನಿರ್ಭಯಾ ಪ್ರಕರಣ ನಂತರ ಎರಡು ಬಾರಿ ಮಸೂದೆ ತಿದ್ದುಪಡಿ ಆಗಿದೆ. ಆದರೂ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಕೇಂದ್ರ ಸರಕಾರದ ಮಸೂದೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು.
ತೋಟ ಬೆಂಗ್ರೆ ರೇಪ್ ಪ್ರಕರಣದಲ್ಲಿ ಅಪ್ರಾಪ್ತರಿಗೂ ಶಿಕ್ಷೆಯಾಗಬೇಕು.ಅತ್ಯಾಚಾರ ಮಾಡಿದ ಅಪ್ರಾಪ್ತರು ಬಾಲಕರಾಗಲ್ಲ. ಅವರಿಗೂ ಕಾನೂನಿನನ್ವಯ ಶಿಕ್ಷೆಯಾಗಲಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಪರಾಧಿಗಳಿಗೆ ಕಾನೂನು, ಶಿಕ್ಷೆಯ ಭಯವಿಲ್ಲ ಎಂದು ಕಿಡಿಕಾರಿದರು.
ಈ ಅತ್ಯಾಚಾರ ಘಟನೆಯನ್ನು ತಡೆಗಟ್ಟುವಲ್ಲಿ ಮಂಗಳೂರು ಪೊಲೀಸರು ವಿಫಲರಾಗಿದ್ದಾರೆ. ಪೊಲೀಸರಿಗೆ ಇಚ್ಛಾ ಶಕ್ತಿಯ ಕೊರತೆ ಇದೆ. ಅವರು ಬೀಚ್ ಗಳಲ್ಲಿ, ಶಾಲಾ ಕಾಲೇಜು ಪರಿಸರದಲ್ಲಿ ಗಸ್ತು ತಿರುಗುತ್ತಿಲ್ಲ ಎಂದು ಕಿಡಿಕಾರಿದರು.
ಕರಾವಳಿಯಲ್ಲಿ ಅಫೀಮು ಮಾರಾಟ ಜಾಲ ಸಕ್ರಿಯವಾಗಿದೆ. ಈ ಬಗ್ಗೆ ಡಿಜಿಪಿಯವರ ಗಮನಕ್ಕೂ ತರುತ್ತೇನೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.












Click it and Unblock the Notifications