ಯಡಿಯೂರಪ್ಪ ವಿರುದ್ಧ ಕಿಡಿಕಾರಿದ ಸಚಿವ ರಮಾನಾಥ ರೈ
ನವೆಂಬರ್ 11, ಮಂಗಳೂರು : ಬಿಜೆಪಿ ನಾಯಕ ಯಡಿಯೂರಪ್ಪ ಅವರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಕಿಡಿ ಕಾರಿದ್ದಾರೆ. ಯಡಿಯೂರಪ್ಪ ಅವರು ಮುಖ್ಯ ಮಂತ್ರಿ ಸಿದ್ಧರಾಮಯ್ಯ ವಿರುದ್ಧ ಸಡಿಲ ಭಾಷೆ ಬಳಸಿರುವುದು ಅರಣ್ಯ ಸಚಿವರ ಸಿಟ್ಟಿಗೆ ಕಾರಣ.
'ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೂರ್ಖ ಎಂದು ಕರೆದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಹೇಳಿಕೆ ಖಂಡನೀಯ. ಮುಂಬರುವ ದಿನಗಳಲ್ಲಿ ಯಾರು ಮೂರ್ಖರು ಎಂಬುದನ್ನು ದಕ್ಷಿಣ ಕನ್ನಡ ಜಿಲ್ಲೆಯ ಪ್ರಜ್ಞಾವಂತ ಜನರೇ ಉತ್ತರ ನೀಡಲಿದ್ದಾರೆ' ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮನಾಥ್ ರೈ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಯಡಿಯೂರಪ್ಪ ಅವರ ಭಾಷೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದಿದ್ದಾರೆ.
ಬಿಜೆಪಿಯ ಪರಿವರ್ತನಾ ಯಾತ್ರೆ ಪ್ರಾರಂಭದಲ್ಲೇ ವಿಫಲಗೊಂಡಿದೆ. ಸಭೆಗೆ ಜನ ಸೇರುವುದೂ ಕೂಡಾ ಕಡಿಮೆಯಾಗಿದೆ. ಸೀರೆ ಕೊಟ್ಟರೂ ಜನ ಪರಿವರ್ತನಾ ರ್ಯಾಲಿ ಕಡೆಗೆ ಬರುತ್ತಿಲ್ಲ. ಇದರಿಂದ ಯಡಿಯೂರಪ್ಪ ಮಾನಸಿಕ ಸ್ಥಿಮಿತ ಕಳೆದುಕೊಂಡು ಏನೇನೋ ಮಾತನಾಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಸರಕಾರ ಈಡೇರಿಸಿದೆ ಎಂದು ಹೇಳಿದ ಅವರು ಜೈಲಿಗೆ ಹೋದ ವ್ಯಕ್ತಿ ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅವರು ಯಡಿಯೂರಪ್ಪ ಅವರನ್ನು ವ್ಯಂಗ್ಯದ ಮೊನಚಿನಿಂದ ಚುಚ್ಚಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕ ಸಚಿವ ಯುಟಿ ಖಾದರ್ , ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಜಿಲ್ಲೆಗೆ ಬಂದು ಪಕ್ಷದ ವಿಚಾರ ತಿಳಿಸಿದರೆ ಯಾರಿಗೂ ಸಮಸ್ಯೆಯಿಲ್ಲ. ಆದರೆ ಸಿಎಂ ವಿರುದ್ಧ ಕೀಳಾಗಿ ಮಾತನಾಡುವುದು ಸರಿಯಲ್ಲ . ಚೆಕ್ ಮುಖಾಂತರ ದುಡ್ಡು ಸ್ವೀಕರಿಸಿದ್ದ ಯಡಿಯೂರಪ್ಪ , ಅವರೇ ನೇಮಿಸಿದ ಲೋಕಾಯುಕ್ತರ ಮೂಲಕ ಜೈಲಿಗೆ ಹೋದವರು ಎಂದರು.












Click it and Unblock the Notifications