ಮುತಾಲಿಕ್ ದಾಖಲೆ ಮುರಿಯುವಲ್ಲಿ ದಿನಕರ್ ವಿಫಲ
ಮಂಗಳೂರು, ಮಾ.25: ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ ಬಿಜೆಪಿ ಸೇರಿದ ಎರಡು ಗಂಟೆಯಲ್ಲಿ ಪಕ್ಷದಿಂದ ಹೊರ ಬಿದ್ದ ದಾಖಲೆಯನ್ನು ಮುರಿಯುವಲ್ಲಿ ದಿನಕರ್ ಮುಶೆಟ್ಟಿ ವಿಫಲವಾಗಿದ್ದಾರೆ. ಕಾಂಗ್ರೆಸ್ ಪಕ್ಷ ದಿನಕರ್ ಶೆಟ್ಟಿ ಅವರನ್ನು ಪಕ್ಷದಿಂದ ಹೊರಹಾಕಲು ಸುಮಾರು 8 ಗಂಟೆಗಳ ಕಾಲ ತೆಗೆದುಕೊಂಡಿದೆ.
ಮಂಗಳೂರಲ್ಲಿ ಶ್ರೀರಾಮಸೇನೆ ಕಾನೂನು ಸಲಹೆಗಾರ ನ್ಯಾಯವಾದಿ ದಿನಕರ ಶೆಟ್ಟಿ ಅವರು ಕಾಂಗ್ರೆಸ್ ಸೇರಿದ 8 ಗಂಟೆ ಒಳಗೆ ಹೊರ ದಬ್ಬಿಸಿಕೊಂಡಿದ್ದಾರೆ. ಸೋಮವಾರ ಮಧ್ಯಾಹ್ನ 12 ಗಂಟೆ ವೇಳೆಗೆ ನ್ಯಾಯವಾದಿ ದಿನಕರ ಶೆಟ್ಟಿ ಕಾಂಗ್ರೆಸ್ ಬಾವುಟ ಸ್ವೀಕರಿಸಿದ್ದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಅಭ್ಯರ್ಥಿ ಜನಾರ್ದನ ಪೂಜಾರಿ, ಆಸ್ಕರ್ ಫರ್ನಾಂಡೀಸ್, ರಮಾನಾಥ್ ರೈ ಸೇರಿದಂತೆ ಕರಾವಳಿ ಭಾಗದ ಹಿರಿಯ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.
ಆದರೆ, 2009ರ ಮಂಗಳೂರು ಪಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 28ನೇ ಆರೋಪಿಯಾಗಿರುವ ದಿನಕರ್ ಶೆಟ್ಟಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಮೋದ್ ಮುತಾಲಿಕ್ ಎಪಿಸೋಡ್ ರಿಪೀಟ್ ಆಯಿತು. ನಂತರ ಎಚ್ಚೆತ್ತುಕೊಂಡ ಕರ್ನಾಟಕ ಕಾಂಗ್ರೆಸ್ ನಾಯಕರು ದಿನಕರ್ ಶೆಟ್ಟಿ ಸೇರ್ಪಡೆಯನ್ನು ಹಿಂಪಡೆದುಕೊಂಡರು. ನಂತರ ಈ ಘಟನೆ ಬಗ್ಗೆ ಜನಾರ್ದನ ಪೂಜಾರಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.

ಒಟ್ಟಾರೆ ಮಧ್ಯಾಹ್ನ ಸೇರ್ಪಡೆಗೊಂಡ ದಿನಕರ್ ಶೆಟ್ಟಿ ಅವರು ರಾತ್ರಿ ಹೊತ್ತಿಗೆಲ್ಲ ಪಕ್ಷದಿಂದ ಹೊರಬಿದ್ದರು. ಪಬ್ ದಾಳಿಯ ಆರೋಪಿ ಆಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ ಚುನಾವಣೆಯಲ್ಲಿ ಮುಜುಗರ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಈ ತೀರ್ಮಾನ ಕೈಗೊಂಡಿದೆ. ಕಾಂಗ್ರೆಸ್ ನಲ್ಲಿರುವ ಪೂಜಾರಿ ನಿಷ್ಠ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಬಣ ದಿನಕರ ಶೆಟ್ಟಿಯನ್ನು ಪಕ್ಷಕ್ಕೆ ಕರೆತರುವಲ್ಲಿ ಯತ್ನಿಸಿದ್ದು, ಪೂಜಾರಿ ವಿರೋಧಿಸುತ್ತಿರುವ ಐವನ್ ಡಿಸೋಜ ಬಣ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಸೋಮವಾರ ರಾತ್ರಿ ನೀಡಿರುವ ಪತ್ರಿಕಾ ಪ್ರಕಟಣೆ ನೀಡಿ 'ಮಾ.24ರಂದು ನ್ಯಾಯವಾದಿ ದಿನಕರ ಶೆಟ್ಟಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದರ ಬಗ್ಗೆ ಗೊಂದಲ ಉಂಟಾಗಿದ್ದು, ಅವರನ್ನು ಪಕ್ಷದ ಸದಸ್ಯರನ್ನಾಗಿ ಸೇರ್ಪಡೆಗೊಳಿಸದಿರಲು ತೀರ್ಮಾನಿಸಲಾಗಿದೆ' ಎಂದು ಘೋಷಿಸಿದರು. ಕೊನೆಗೆ ಪೂಜಾರಿ ಅವರ ಮಾತಿನಂತೆ ದಿನಕರ್ ಶೆಟ್ಟಿ ಸದಸ್ಯತ್ವವನ್ನು ರದ್ದುಗೊಳಿಸಲಾಯಿತು.












Click it and Unblock the Notifications