ಮಂಗಳೂರು: ಅಲೋಶಿಯಸ್ ಕಾಲೇಜು ರಸ್ತೆ ಮರುನಾಮಕರಣಕ್ಕೆ ಭಾರೀ ವಿರೋಧ
ಮಂಗಳೂರು, ಜೂನ್ 30: ಮಂಗಳೂರು ನಗರದ ಲೈಟ್ ಹೌಸ್ ರಸ್ತೆಗೆ ಅಲೋಶಿಯಸ್ ಕಾಲೇಜು ರಸ್ತೆ ಎಂಬುದಾಗಿ ನಾಮಕರಣ ಮಾಡಬೇಕು ಎಂದು ಆಗ್ರಹಿಸಿ ಜೂಲೈ 2 ರಂದು ಬೃಹತ್ ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಲಾಗಿದೆ.
ಕಾಲೇಜು ಪರ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಪ್ರಿನ್ಸಿಪಾಲರು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ನಗರ ಪಾಲಿಕೆ ಅಸ್ತಿತ್ವಕ್ಕೆ ಬರುವ ಮುನ್ನವೇ ಅಂದರೆ 40 ವರ್ಷಗಳ ಹಿಂದೆಯೇ ಈ ನಾಮಕರಣ ಮಾಡಲಾಗಿತ್ತು. 100 ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಸಂಸ್ಥೆಯನ್ನು ಹಾದು ಹೋಗುವ ರಸ್ತೆಗೆ ಅದೇ ಸಂಸ್ಥೆಯ ಹೆಸರಿಡುವುದು ಸಮಂಜಸವೇ ಆಗಿದೆ ಎಂದು ಪ್ರಿನ್ಸಿಪಾಲರು ಹೇಳಿದ್ದಾರೆ.

ಆದರೆ, ಇದರ ನಡುವೆ ರಸ್ತೆಗೆ ಸುಂದರ ರಾಮ ಶೆಟ್ಟಿ ರಸ್ತೆ ಎಂದು ನಾಮಕರಣ ಮಾಡಲು ಜುಲೈ 2 ರಂದು ಬೆಳಗ್ಗೆ 10 ಗಂಟೆಗೆ ವಿಜಯ ಬ್ಯಾಂಕ್ ನ ಪ್ರಾದೇಶಿಕ ಕಚೇರಿ ಎದುರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಅಧ್ಯಕ್ಷ ಮುಲ್ಕಿ ಕರುಣಾಕರ ತಿಳಿಸಿದ್ದಾರೆ.
'ಒನ್ಇಂಡಿಯಾ' ಕನ್ನಡ ಜೊತೆಗೆ ಮಾತನಾಡಿದ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಮೋಹನ್, "ವಿಜಯ ಬ್ಯಾಂಕ್ ನೌಕರರ ಸಂಘಟನೆ ಈ ರಸ್ತೆಗೆ ಮುಲ್ಕಿ ಸುಂದರರಾಮ್ ಶೆಟ್ಟಿ ರಸ್ತೆ ಎಂಬುದಾಗಿ ನಾಮಕರಣ ಮಾಡುವ ನಿರ್ಧಾರದಿಂದ ಹಿಂದೆ ಸರಿಯದೇ ಇರುವುದು ಬೇಸರದ ಸಂಗತಿ. ಸುಂದರರಾಮ್ ಶೆಟ್ಟಿ ಅವರ ವ್ಯಕ್ತಿತ್ವ ಅವರು ಬ್ಯಾಂಕ್ ರಾಷ್ಟ್ರೀಕರಣಗೊಂಡ ಬಳಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾಡಿದ ಸಾಧನೆಯ ಬಗ್ಗೆ ಯಾವುದೇ ಆಕ್ಷೇಪವಿಲ್ಲ," ಎಂದರು.












Click it and Unblock the Notifications