ಮಂಗಳೂರಿನಲ್ಲಿ ಪ್ರಧಾನಿ ಮೋದಿ ಕೊಟ್ಟ ಅಭಿವೃದ್ಧಿಯ ಭರವಸೆಗಳು: ಇಲ್ಲಿದೆ ಮಾಹಿತಿ
ಮಂಗಳೂರು, ಸೆಪ್ಟೆಂಬರ್, 02: ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಭೇಟಿ ನೀಡಿದ್ದು ಹಲವು ಯೋಜನೆಗಳನ್ನು ಉದ್ಘಾಟನೆ ಮಾಡಿದ್ದಾರೆ. ಮೋದಿ ಸಮಾವೇಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಪ್ರಧಾನಿ ಮೋದಿ ಅವರು 23 ನಿಮಿಷದ ಭಾಷಣದಲ್ಲಿ ಅಭಿವೃದ್ಧಿಯ ಮಂತ್ರ ಜಪಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತುಳುನಾಡಿನ ಕಂಪಿನ ಮಲ್ಲಿಗೆ ಮಾಲೆಯನ್ನು ಹಾಕಿ ಸ್ವಾಗತಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಅವರು ಪರಶುರಾಮನ ಮೂರ್ತಿಯನ್ನು ನೀಡಿ ಗೌರವಿಸಿದರು. ಇನ್ನು ಕೇಂದ್ರ ಸಚಿವ ಸರ್ಬಾನಂದ ಸೋನಾವಾಲ ಅವರು ಕೊಡಗಿನ ಪೇಟಾ ಶಾಲು, ಹಾರ ಹಾಕಿ, ಕೃಷ್ಣನ ವಿಗ್ರಹವನ್ನು ನೀಡಿ ಸನ್ಮಾನಿಸಿದರು.
ಪ್ರಧಾನಿ ಮೋದಿ ಅವರು ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ 3,800 ಕೋಟಿ ರೂಪಾಯಿಗಳ ಮೊತ್ತದ ಹಲವು ಯೋಜನೆಗಳ ಲೋಕಾರ್ಪಣೆ ಮಾಡಿದರು. ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು ಡಬಲ್ ಇಂಜಿನ್ ಸರಕಾರ ದೇಶದ ಜನರ ಅಭಿವೃದ್ಧಿಗಾಗಿ ಪಣ ತೊಟ್ಟಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಅಭಿವೃದ್ಧಿಯತ್ತ ಮಹತ್ವದ ಗುರಿ ಇಡಬೇಕಾಗಿದೆ. ದೇಶದ ಜನತೆಯ ಗೌರವಯುತ ಜೀವನಕ್ಕಾಗಿ ನೀರು, ವಿದ್ಯುತ್, ಟಾಯ್ಲೆಟ್ ಅಗತ್ಯವಾಗಿದೆ. ಆದ್ದರಿಂದ 3 ಕೋಟಿ ಜನರಿಗೆ ವಸತಿ ನೀಡಲಾಗಿದೆ. ಜಲಜೀವನ್ ಯೋಜನೆಯಡಿ ಪ್ರತಿ ಮನೆಗೆ ನೀರು ತಲುಪಲಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ 4 ಕೋಟಿ ಜನರಿಗೆ ಉಚಿತ ಆಸ್ಪತ್ರೆ ಸೌಲಭ್ಯ ದೊರಕಿದೆ. ಕರ್ನಾಟಕದಲ್ಲಿ 30 ಲಕ್ಷ ಜನರು ಈ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ ಎಂದರು.

ಬಂದರು ಸಂಪರ್ಕ ಕ್ರಾಂತಿಗಾಗಿ ಹಲವು ಯೋಜನೆ
ಅಭಿವೃದ್ಧಿಯ ಲಾಭ ಹೆಚ್ಚು ಜನರಿಗೆ ಸಿಕ್ಕಿಲ್ಲ. ಪ್ರತಿ ನಾಗರಿಕನಿಗೂ ಲಾಭ ಸಿಗಬೇಕು ಎಂಬುದು ನಮ್ಮ ಗುರಿ ಆಗಿದೆ. ದೇಶದ ಮೂಲೆ, ಮೂಲೆಗೆ ಇಂಟರ್ನೆಟ್ ತಲುಪಿಸಲು ಆಪ್ಟಿಕಲ್ ಫೈಬರ್ ಹಾಕಲಾಗುತ್ತಿದೆ. 5 ಜಿ ತರುವುದಕ್ಕಾಗಿ ನಾವು ಪ್ರಯತ್ನ ಪಡುತ್ತಿದ್ದೇವೆ. ಕರಾವಳಿ ಮತ್ತು ಪಶ್ಚಿಮ ಘಟ್ಟಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಆಗಬೇಕಾಗಿದೆ. ಈ ಮೂಲಕ ಮಧ್ಯಮ ವರ್ಗದವರ ಶಕ್ತಿ ಹೆಚ್ಚಲು ನಾವು ಒತ್ತು ನೀಡಬೇಕಾಗಿದೆ. "ಬಂದರು ಸಂಪರ್ಕದ ಕ್ರಾಂತಿಗಾಗಿ ಹಲವು ಯೋಜನೆಯನ್ನು ತಂದಿದ್ದೇವೆ. ರಾಣಿ ಅಬ್ಬಕ್ಕ, ರಾಣಿ ಭೈರಾದೇವಿಯನ್ನು ಸ್ಮರಿಸುತ್ತೇನೆ. ಈ ವೀರ ಮಹಿಳೆಯರು ನಮಗೆಲ್ಲ ಪ್ರೇರಣೆ ಆಗಿದ್ದಾರೆ," ಎಂದು ಹೇಳಿದರು.

ಕಾರ್ಯಕರ್ತನನ್ನು ತಡೆದ ಪೊಲೀಸರು
ಬಂಗ್ರ ಕೂಳೂರಿನಲ್ಲಿ ಸರ್ಕಾರದ ಅಧಿಕೃತ ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದ ಪ್ರಧಾನಿ ಮೋದಿ ಅವರ ಕಾರಿನತ್ತ ಓಡಿದ ಬಿಜೆಪಿ ಕಾರ್ಯಕರ್ತನನ್ನು ಪೊಲೀಸರು ತಡೆದಿದ್ದಾರೆ. ಕಾರ್ಯಕ್ರಮದ ಬಳಿಕ ಮೋದಿ ಅವರ ಎಸ್ಪಿಜಿ ವಾಹನ ತೊಡಕಾಗಿತ್ತು. ಈ ವೇಳೆ ಜನದಟ್ಟಣೆಯನ್ನು ಚದುರಿಸಲು ಮಂಗಳೂರು ಪೊಲೀಸ್ ಕಮಿಷನರ್ ಲಾಠಿ ಬೀಸಿದ ಪ್ರಕರಣವೂ ನಡೆದಿದೆ.

ಜನದಟ್ಟಣೆ, ಎಸ್ಪಿಜಿ ಮಾಡಿದ್ದೇನು?
ಜನಸಾಗರ, ವಾಹನ ದಟ್ಟಣೆಯ ನಡುವೆಯೇ ಆಗಮಿಸಿದ ಎಸ್ಪಿಜಿ ವಾಹನ ಡಿವೈಡರ್ ಏರಲು ಪ್ರಯತ್ನ ಪಟ್ಟಿದೆ. ಆದರೆ ಅದು ಅಸಾಧ್ಯವಾದ ಕಾರಣ ಡಿವೈಡರ್ನಿಂದ ಇಳಿದು ರಸ್ತೆಯಲ್ಲಿ ಸಂಚರಿಸಿದೆ. ಪ್ರಧಾನಿ ಮೋದಿ ಅವರ ಕಾರ್ಯಕ್ರಮಕ್ಕೆ ಕಪ್ಪುಬಟ್ಟೆ ತೊಟ್ಟು ಬಂದವರನ್ನು, ಭದ್ರತಾ ಪಡೆಯವರು ಅವರು ಆ ಬಟ್ಟೆಯನ್ನು ಬಿಚ್ಚಿಸಿದ್ದಾರೆ.

ಎಸ್ಪಿಜಿ ತಂಡ ವಿಧಿಸಿದ್ದ ನಿಯಮಗಳು
ಮೋದಿ ಅವರ ಸರ್ಕಾರದ ಅಧಿಕೃತ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವವರಿಗೆ ಎಸ್ಪಿಜಿ ತಂಡ ಕೆಲವೊಂದು ನಿಯಮಗಳನ್ನು ವಿಧಿಸಿತ್ತು. ಅದರಂತೆ ಬೆಂಕಿ ಪೊಟ್ಟಣ, ಲೈಟರ್, ಕರಪತ್ರ, ಕಪ್ಪು ಬಟ್ಟೆಗಳನ್ನು ನಿಷೇಧಿತ ವಸ್ತುಗಳನ್ನು ಕಾರ್ಯಕ್ರಮಕ್ಕೆ ತರದಂತೆ ಖಡಕ್ ವಾರ್ನಿಂಗ್ ಮಾಡಿತ್ತು. ಆದ್ದರಿಂದ ಕಪ್ಪುಬಟ್ಟೆ ತೊಟ್ಟು ಬಂದವರು ಅಲ್ಲಿಯೇ ಬಟ್ಟೆ ಬಿಚ್ಚಿ ಬೇರೆ ಬಣ್ಣದ ಬಟ್ಟೆಯನ್ನು ತೊಟ್ಟ ಪ್ರಸಂಗವೂ ನಡೆಯಿತು.












Click it and Unblock the Notifications