ಸರಿಯಾಗಿರುವುದು ಟಿಪ್ಪು, ಅಪನಗದೀಕರಣ ತಪ್ಪು ಎಂದ ಸಚಿವ ಖಾದರ್
ಮಂಗಳೂರು, ನವೆಂಬರ್ 8: ದೇಶದ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ವೇತಪತ್ರ ಹೊರಡಿಸಬೇಕು ಎಂದು ಸಚಿವ ಯು.ಟಿ.ಖಾದರ್ ಬುಧವಾರ ಒತ್ತಾಯಿಸಿದರು. ದೇಶದ ಆರ್ಥಿಕ ಸ್ಥಿತಿ ಕುಸಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ದೇಶದ ಸ್ಥಿತಿಗತಿ ಬಗ್ಗೆ ಪ್ರಧಾನಿ ಸತ್ಯಾಸತ್ಯತೆಯನ್ನು ಜನರ ಮುಂದಿಡಬೇಕು ಎಂದು ಒತ್ತಾಯಿಸಿದರು.
ಮಂಗಳೂರಿನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಪ್ರತಿ ಯೋಜನೆ ದೇಶದ ಜನರ ಸಂಕಷ್ಟ ಕ್ಕೆ ಕಾರಣವಾಗಿದೆ. ನೋಟು ನಿಷೇಧದ ಕ್ರಮದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಬುಡಮೇಲಾಗಿದೆ. ನೋಟು ನಿಷೇಧ ವಿಚಾರವಾಗಿ

ರಾಹುಲ್ ಗಾಂಧಿ ಹೇಳಿದ್ದು ಸತ್ಯ, ನರೇಂದ್ರ ಮೋದಿ ಹೇಳಿದ್ದು ಸುಳ್ಳು ಎಂದು ಜನರಿಗೆ ಈಗ ಅರಿವಾಗಿದೆ ಎಂದರು.
ಮೋದಿ ಅವರು ವಿದೇಶದಲ್ಲಿರುವ ಕಪ್ಪು ಹಣ ತರುತ್ತೇವೆಂದು ಹೇಳಿ ಇನ್ನೂ ತಂದಿಲ್ಲ. ಒಂದೆಡೆ ಕಪ್ಪು ಹಣ ವಶ ಯಶಸ್ವಿಯಾಗಿಲ್ಲ, ಇನ್ನೊಂದೆಡೆ ಭಯೋತ್ಪಾದನೆ ಹೆಚ್ಚಾಗುತ್ತಲೇ ಇದೆ ಎಂದು ವ್ಯಂಗ್ಯವಾಡಿದರು.
ದೇಶದ ಜಿಡಿಪಿ ಕುಸಿಯುತ್ತಿರುವುದಕ್ಕೆ ಯಾರು ಕಾರಣ ಎಂದು ಪ್ರಶ್ನಿಸಿದ ಅವರು, ಕೇಂದ್ರದ ನೀತಿಯಿಂದಾಗಿ ಲಕ್ಷಾಂತರ ಯುವಜನರು ಕೆಲಸ ಕಳೆದುಕೊಳ್ಳುವಂತಾಗಿದೆ. ದೇಶದ ಜನರನ್ನು ಬಿಜೆಪಿ ಸರಕಾರ ಮೋಸ ಮಾಡಿದೆ. ಬಡವರು ಸಹ ತಮ್ಮದೇ ಹಣ ಪಡೆಯಲು ಸರತಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿಯಿದೆ ಎಂದರು.
ಟಿಪ್ಪು ಜಯಂತಿ ಆಚರಣೆ ಕುರಿತು ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ದೇಶಪ್ರೇಮಿ. ಟಿಪ್ಪು ಜಯಂತಿಯನ್ನು ಸರಕಾರ ಆಚರಿಸುತ್ತಿದೆ ಹೊರತು ಮುಸ್ಲಿಮರಷ್ಟೇ ಅಲ್ಲ. ಯಾವುದೇ ರಾಜರನ್ನು ಜಾತಿ, ಧರ್ಮಕ್ಕೆ ಸೀಮಿತಗೊಳಿಸಬಾರದು. ಇತಿಹಾಸದಲ್ಲಿ ಟಿಪ್ಪು ಹಲವರಿಗೆ ಸಹಾಯ ಮಾಡಿದ ವಿಷಯಗಳೂ ಇವೆ. ಇತರ ಜಯಂತಿಗಳ ಜತೆ ಸರಕಾರ ಆಚರಿಸುತ್ತಿರುವ ಈ ಜಯಂತಿಗೂ ಜನರು ಸಹಕಾರ ನೀಡಲಿದ್ದಾರೆ ಎಂದು ಹೇಳಿದರು .












Click it and Unblock the Notifications