ಪ್ರತೀಕಾರ ದಾಳಿಯ ಭಯ, ಸಂಜೆಯಾಗುತ್ತಿದ್ದಂತೆ ಮಂಗಳೂರು ಸ್ತಬ್ಧ
ಮಂಗಳೂರು, ಜನವರಿ 9: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಎರಡು ಹತ್ಯೆ ಪ್ರಕರಣಗಳು ಜನರನ್ನು ಬೆಚ್ಚಿಬೀಳಿಸಿವೆ. ಅಮಾಯಕರಿಬ್ಬರು ದುಷ್ಕರ್ಮಿಗಳ ದಾಳಿಗೆ ಬಲಿಯಾದ ಬಳಿಕ ಮತ್ತೆ ನಗರದಲ್ಲಿ ಪ್ರತಿಕಾರದ ದಾಳಿಗಳ ಭೀತಿ ಆವರಿಸಿದೆ.
ಈ ಹಿನ್ನೆಲೆಯಲ್ಲಿ ಮಂಗಳೂರು ಸಂಜೆಯಾಗುತ್ತಿದ್ದಂತೆ ಸ್ಥಬ್ಧವಾಗುತ್ತಿದೆ. ಕತ್ತಲಾಗುತ್ತಿದ್ದಂತೆ ಜನರು ಮನೆ ಸೇರಿಕೊಳ್ಳುತ್ತಿದ್ದು ಮಂಗಳೂರಿನ ರಸ್ತೆಗಳಲ್ಲಿ ರಾತ್ರಿ ಹೊತ್ತು ಅಘೋಷಿತ ಬಂದ್ ಜಾರಿಯಲ್ಲಿರುತ್ತದೆ.
ಮೊಬೈಲ್ ಕರೆನ್ಸಿ ಮತ್ತು ಸಿಮ್ ಕಾರ್ಡ್ ಮಾರಾಟ ಮಾಡಿಕೊಂಡಿದ್ದ ದೀಪಕ್ ರಾವ್ ಅವರನ್ನು ದುಷ್ಕರ್ಮಿಗಳು ಜನವರಿ 3 ರಂದು ಮಂಗಳೂರು ಹೊರವಲಯದ ಕಾಟಿಪಳ್ಳದಲ್ಲಿ ಹತ್ಯೆ ಮಾಡಿದ್ದರು.
ಇದರ ಬೆನ್ನಲ್ಲೇ ಜನವರಿ 3 ರಂದು ರಾತ್ರಿ ಸುರತ್ಕಲ್ ನಲ್ಲಿ ಮುದಸ್ಸಿರ್ ಹಾಗೂ ಕೊಟ್ಟಾರ ಚೌಕಿಯಲ್ಲಿ ಅಬ್ದುಲ್ ಬಶೀರ್ ಎಂಬವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು.

ಅಮಾಯಕರು ಬಲಿ
ಈ ಪ್ರತಿಕಾರದ ದಾಳಿಗೆ ದುಷ್ಕರ್ಮಿಗಳು ಗುರಿಯಾಗಿಸಿದ್ದು ಅಮಾಯಕರನ್ನು. ಒಬ್ಬ ಸಿಮ್ ಮಾರಾಟ ಮಾಡುವ ಏಜೆಂಟ್, ಇನ್ನೋರ್ವ ಫಾಸ್ಟ್ ಫುಡ್ ಅಂಗಡಿಯ ಮಾಲಿಕ . ದೀಪಕ್ ರಾವ್ ಕೊಲೆ ಪ್ರಕರಣಕ್ಕೂ ಇಬ್ಬರಿಗೂ ಸಂಬಂಧವೇ ಇರಲಿಲ್ಲ. ಇಬ್ಬರೂ ದಿನದ ಕೆಲಸ ಮುಗಿಸಿ ಮನೆಗೆ ತೆರಳುವ ಹೊತ್ತಿಗೆ ದುಷ್ಕರ್ಮಿಗಳ ದಾಳಿಗೆ ಒಳಗಾಗಿದ್ದರು.

ಕೊನೆಯುಸಿರೆಳೆದ ಬಷೀರ್
ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮುದಸ್ಸಿರ್ ಹಾಗು ಅಬ್ದುಲ್ ಬಶೀರ್ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಮುದಸ್ಸಿರ್ ಚೇತರಿಸಿಕೊಂಡು ಮನೆಗೆ ತೆರಳಿದರೆ, ಅಬ್ದುಲ್ ಬಷೀರ್ ಚಿಕೆತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.

ಪ್ರತಿ ದಾಳಿಯ ಭಯ
ಈ ಎಲ್ಲಾ ಪ್ರಕರಣಗಳಲ್ಲಿ ದಾಳಿ ನಡೆಸಿದ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಈ ಹತ್ಯೆ ಹಾಗು ಹಲ್ಲೆಗಳಿಗೆ ಪ್ರತಿಕಾರದ ದಾಳಿಗಳು ನಡೆಯುವ ಆತಂಕ ಮಂಗಳೂರಿಗರನ್ನು ಕಾಡುತ್ತಿದೆ. ಹೀಗಾಗಿ ಸಂಜೆ ಯಾಗುತ್ತಿದ್ದಂತೆ ಗಿಜಿಗುಡುತ್ತಿದ್ದ ಮಂಗಳೂರು ನಗರದ ರಸ್ತೆಗಳಲ್ಲಿ ಈಗ ಜನರೇ ಕಾಣಸಿಗುವುದಿಲ್ಲ. ಅಮಾಯಕ ಜನರು ದುಷ್ಕರ್ಮಿಗಳ ಪ್ರತಿದಾಳಿ ಭಯದಿಂದ ಬೇಗನೆ ಮನೆ ಸೇರುತ್ತಿದ್ದಾರೆ.

ವ್ಯಾಪಾರ ವಹಿವಾಟಿಗೆ ಹೊಡೆತ
ನಗರದಲ್ಲಿ ಸಂಜೆ ಹೊತ್ತು ವಿರಳ ಜನ ಸಂಚಾರದಿಂದಾಗಿ ವ್ಯಾಪಾರ ವಹಿವಾಟಿಗೆ ಭಾರಿ ಹೊಡೆತ ಬೀಳುತ್ತಿದೆ. ಸಂಜೆಯಾಗುತ್ತಿದ್ದಂತೆ ನಗರದ ಮಾಲ್ ಗಳಲ್ಲಿ ಜನರ ಶಾಪಿಂಗ್ ಕಡಿಮೆಯಾಗಿದೆ. ಸಿಟಿ ಬಸ್ ಗಳಲ್ಲಿ ಜನರ ಪ್ರಯಾಣ ಕಡಿಮೆಯಾಗಿದೆ.

ಭಯದ ಕರಿಛಾಯೆ
ರಾತ್ರಿ ಹೊತ್ತು ಒಂಟಿಯಾಗಿ ಜನರು ಮನೆಯಿಂದ ಹೊರಬಂದು ತಿರುಗಾಡಲು ಅಂಜುತ್ತಿದ್ದಾರೆ. ನಗರದ ಸುರತ್ಕಲ್, ಕಷ್ಣಾಪುರ, ಕಾಟಿಪಳ್ಳ, ಕುಳಾಯಿ, ಕೊಟ್ಟಾರ, ಹೊಯಿಗೆ ಬಜಾರ್, ಬಂದರು ಪ್ರದೇಶ ಸೇರಿದಂತೆ ನಗರದ ಹಲವಾರು ಜನ ನಿಬಿಡ ಪ್ರದೇಶಗಳಲ್ಲಿ ರಾತ್ರಿಯಾಗುತ್ತಿದ್ದಂತೆ ಭಯದ ಕರಿಛಾಯೆ ಜನಸಾಮಾನ್ಯರನ್ನು ಆವರಿಸುತ್ತಿದೆ.

ಗಸ್ತು ಹೆಚ್ಚಿಸುವ ಅವಶ್ಯಕತೆ
ಜನರ ಮನಸ್ಸಿನಲ್ಲಿರುವ ಆತಂಕವನ್ನು ದೂರ ಮಾಡುವ ದೃಷ್ಟಿಯಿಂದ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಜನರ ಭಯ ನಿವಾರಣೆಗೆ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸುವ ಅವಶ್ಯಕತೆ ಇದೆ.












Click it and Unblock the Notifications