ಬಿಜೆಪಿ ರಾಜ್ಯಾಧ್ಯಕ್ಷರ ಊರಲ್ಲೇ ಮನಕಲಕುವ ಘಟನೆ: ಫೋಟೋ ವೈರಲ್
ಮಂಗಳೂರು, ಸೆಪ್ಟೆಂಬರ್ 24: ಬಡ ರೋಗಿಯೊಬ್ಬರನ್ನು ಸುಮಾರು ಒಂದು ಕಿ.ಮೀ ತನಕ ಮರದ ಖುರ್ಚಿಯಲ್ಲಿ ಸಾಗಿಸಿದ ಮನಕಲಕುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಇನ್ನೂ ಆಶ್ಚರ್ಯದ ಸಂಗತಿ ಅಂದರೆ, ಇದು ನಡೆದಿದ್ದು ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ರವರ ಆದರ್ಶ ಗ್ರಾಮ ಯೋಜನೆಯ ಗ್ರಾಮದಲ್ಲಿ!
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಳ್ಪ ಗ್ರಾಮವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಸಂಸದರ ಆದರ್ಶ ಗ್ರಾಮವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದೇ ಗ್ರಾಮದ ಪಡ್ಕಿಲಾಯ ಎಂಬ ಊರಿನಲ್ಲಿ ರಾಮಣ್ಣ ಪೂಜಾರಿ ಎಂಬ ವೃದ್ಧರೊಬ್ಬರ ಆರೋಗ್ಯ ಹದಗೆಟ್ಟ ಕಾರಣ ವೈದ್ಯಕೀಯ ಚಿಕಿತ್ಸೆಗಾಗಿ ಸುಮಾರು 1 ಕಿ.ಮೀನಷ್ಟು ದೂರ ಮರದ ಕುರ್ಚಿಯಲ್ಲಿ ಕಾಲ್ನಡಿಗೆ ಮೂಲಕ ಸಾಗಿಸಿದ ಫೋಟೊ ಇದೀಗ ಸಾಕಷ್ಟು ವೈರಲ್ ಆಗಿದೆ. ಮಾತ್ರವಲ್ಲ ಚರ್ಚೆಗೂ ಗ್ರಾಸವಾಗಿದೆ.

ಈ ಊರಿನಲ್ಲಿ ಸರಿಯಾದ ರಸ್ತೆ ಸಂಪರ್ಕವಿಲ್ಲ, ವಾಹನದ ಸೌಲಭ್ಯಗಳೂ ಇಲ್ಲ. ಪರಿಣಾಮ, ಊರ ರೋಗಿಯೊಬ್ಬರನ್ನು ಮರದ ಕುರ್ಚಿಯಲ್ಲಿ ಎತ್ತಿಕೊಂಡು ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಈ ಆದರ್ಶ ಗ್ರಾಮದಲ್ಲೇ ಈ ತರಹ ಪರಿಸ್ಥಿತಿ ಇದ್ದರೆ, ಬೇರೆ ಗ್ರಾಮಗಳನ್ನು ಕೇಳುವವರು ಯಾರು ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ.












Click it and Unblock the Notifications