ಉಳ್ಳಾಲ: ಪಬ್ ಜಿ ಆಟಕ್ಕೆ ಬಾಲಕನ ಹತ್ಯೆ, ಕಳವಳ ವ್ಯಕ್ತಪಡಿಸಿದ ಯುಟಿ ಖಾದರ್
ಮಂಗಳೂರು, ಎಪ್ರಿಲ್ 6: ಪಬ್ ಜಿ ಆಟದಿಂದ ಮಂಗಳೂರಿನ ಉಳ್ಳಾಲದ ಕೆಸಿ ರಸ್ತೆಯಲ್ಲಿ ನಡೆದಿದ್ದ ಬಾಲಕನ ಕೊಲೆ ಪ್ರಕರಣವನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಮಾಜಿ ಸಚಿವ ಯುಟಿ ಖಾದರ್ ಆಗ್ರಹಿಸಿದ್ದಾರೆ.
ಪಬ್ ಜಿ ಸೇರಿದಂತೆ ವಿವಿಧ ಮಾರಕ ವಿಡಿಯೋ ಗೇಮ್ ಗಳು ನಿಷೇಧವಾಗಿದ್ದರೂ ಬೇರೆ ಬೇರೆ ರೂಪದಲ್ಲಿ ಮಕ್ಕಳ ಮೊಬೈಲ್ನಲ್ಲಿ ಸಿಗುತ್ತಿವೆ. ಹೀಗಾಗಿ ಇಂತಹ ಗೇಮ್ಗಳನ್ನು ಸಂಪೂರ್ಣವಾಗಿ ನಿಷೇಧವಾಗುವಂತೆ ಸರ್ಕಾರ ನಿಯಮ ರೂಪಿಸಬೇಕೆಂದು ಯುಟಿ ಖಾದರ್ ಹೇಳಿದರು.
ದೇಶದ ಮಾನವ ಸಂಪನ್ಮೂಲವನ್ನು ಶಿಥಿಲಗೊಳಿಸಲು ಪರೋಕ್ಷ ಯುದ್ಧ ಮಾಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕಠಿಣ ಕಾನೂನು ಮಾಡಲೇಬೇಕು. ವಿದ್ಯಾರ್ಥಿ ಸಮುದಾಯ ವಿಡಿಯೋ ಗೇಮ್ನಿಂದ ಕ್ರೂರ ಮನಸ್ಥಿತಿ ಹೊಂದುತ್ತಿದ್ದಾರೆ. ವಿದ್ಯಾರ್ಥಿಗಳು ನಾಲ್ಕು ಗೋಡೆ ನಡುವೆ ಮೊಬೈಲ್ನಲ್ಲೇ ತಲ್ಲೀನರಾಗುತ್ತಿದ್ದಾರೆ. ಸರ್ಕಾರ ಸೈಬರ್ ಪ್ರಕರಣ ಸಂಬಂಧಿಸಿದಂತೆ ಜನಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.

ಮಕ್ಕಳು ಮೊಬೈಲ್ನಲ್ಲಿ ಏನು ಮಾಡುತ್ತಿದ್ದಾರೆ, ಯಾವ ಸಾಫ್ಟ್ವೇರ್ಗಳನ್ನು ಅಪ್ ಲೋಡ್ ಮಾಡುತ್ತಾರೆ ಎಂಬುದಕ್ಕೆ ಪೇರೆಂಟಲ್ ಕೋಡ್ ಆಕ್ಸಸ್ ತರಬೇತಿ ಶಿಬಿರವನ್ನು ನಡೆಸಿಕೊಡುವ ಬಗ್ಗೆ ದಕ್ಷಿಣ ಕನ್ನಡ ಮಹಿಳಾ ಕಾಂಗ್ರೆಸ್ ಗ್ರಾಮ-ಗ್ರಾಮಗಳಲ್ಲಿ ತರಬೇತಿ ಕಾರ್ಯಗಾರ ಮಾಡುವ ಬಗ್ಗೆ ಚಿಂತನೆ ನಡೆಸಿದೆ. ತಮ್ಮ ನೇತೃತ್ವದಲ್ಲಿ ಕಾರ್ಯಾಗಾರ ಮಾಡೋಕೆ ಸಿದ್ಧತೆ ನಡೆಸಿದ್ದು, ಒಂದು ತಿಂಗಳ ಒಳಗೆ ತರಬೇತಿ ಶಿಬಿರ ಆರಂಭ ಮಾಡುವುದಾಗಿ ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ.
ಪೋಷಕರಿಗೆ ಈ ಬಗ್ಗೆ ಅರಿವು ಮೂಡಿಸಲು ಗ್ರಾಮ ಮಟ್ಟದಲ್ಲಿ ತರಬೇತಿ ಶಿಬಿರಗಳನ್ನು ಮಾಡುತ್ತೇವೆ. ಈಗಾಗಲೇ ತರಬೇತಿ ತಂತ್ರಜ್ಞರನ್ನು ಈಗಾಗಲೇ ಸಂಪರ್ಕಿಸಲಾಗಿದೆ ಎಂದು ಮಾಹಿತಿ ನೀಡಿದರು.












Click it and Unblock the Notifications