ಸಿನಿಮೀಯ ಶೈಲಿಯಲ್ಲಿ ರೌಡಿ ಕಾಲಿಯಾ ರಫೀಕ್ ಕೊಲೆ
ಕಾಸರಗೋಡು ಉಪ್ಪಳ ನಿವಾಸಿ ನಟೋರಿಯಸ್ ರೌಡಿ ಕಾಳಿಯಾ ರಫೀಕ್ ನನ್ನು ದುಷ್ಕರ್ಮಿಗಳ ಗುಂಪೊಂದು ಮಂಗಳವಾರ ಮಧ್ಯರಾತ್ರಿ ಸಿನಿಮಾ ಶೈಲಿಯಲ್ಲಿ ಕೊಲೆ ಮಾಡಿ ಪರಾರಿಯಾಗಿದೆ.
ಮಂಗಳೂರು, ಫೆಬ್ರವರಿ 15: ಕಾಸರಗೋಡು ಉಪ್ಪಳ ನಿವಾಸಿ ನಟೋರಿಯಸ್ ರೌಡಿ ಕಾಳಿಯಾ ರಫೀಕ್ ನನ್ನು ದುಷ್ಕರ್ಮಿಗಳ ಗುಂಪೊಂದು ಮಂಗಳವಾರ ಮಧ್ಯರಾತ್ರಿ ಸಿನಿಮಾ ಶೈಲಿಯಲ್ಲಿ ಕೊಲೆ ಮಾಡಿದೆ. ಕೋಟೆಕಾರು ಪೆಟ್ರೋಲ್ ಬಂಕಿನಲ್ಲಿ ಟಿಪ್ಪರ್ ಲಾರಿಯಿಂದ ರಫೀಕ್ ಕಾರಿಗೆ ಢಿಕ್ಕಿ ಹೊಡೆದು ನಂತರ ಅಟ್ಟಾಡಿಸಿ ಗುಂಡಿಕ್ಕಿ, ತಲವಾರಿನಿಂದ ಕಡಿದು ಕೊಲೆ ಮಾಡಿ ಪರಾರಿಯಾಗಿದೆ.
ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈತ ಕೇರಳ ಹಾಗೂ ಕರ್ನಾಟಕದಲ್ಲಿ 40ಕ್ಕೂ ಹೆಚ್ಚು ಕೊಲೆ, ಕೊಲೆಯತ್ನ, ಸುಳಿಗೆಯಂತಹ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಮಂಗಳವಾರ ರಾತ್ರಿ 11.45ರ ವೇಳೆ ಉಪ್ಪಳದಿಂದ ಮಂಗಳೂರಿನ ಕಡೆ ತನ್ನ ಸಂಬಂಧಿ ಜಾಹಿದ್ ಮತ್ತು ಇಬ್ಬರು ಸ್ನೇಹಿತರೊಂದಿಗೆ ರಫೀಕ್ ರಿಟ್ಜ್ ಕಾರಲ್ಲಿ ಪ್ರಯಾಣಿಸುತ್ತಿದ್ದ. ಕಾಲಿಯಾ ರಫೀಕ್ ತನ್ನ ಕಾರಿನಲ್ಲಿ ಕೋಟೆಕಾರು ಪೆಟ್ರೋಲ್ ಬಂಕಿನ ಮುಂಭಾಗ ಬರುತ್ತಿದ್ದಂತೆ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಲಾರಿಯೊಂದು ಸಿನಿಮೀಯ ರೀತಿಯಲ್ಲಿ ಮುಖಮುಖಿ ಢಿಕ್ಕಿ ಹೊಡೆದಿದೆ. ಇದೇ ವೇಳೆ ರಫೀಕ್ ಕಾರನ್ನು ಹಿಂಬಾಲಿಸುತ್ತಿದ್ದ ಉಪ್ಪಳದ ನೂರ್ ಅಲಿ ಸಹಿತ ಐವರ ತಂಡವು ರಫೀಕ್ ಮತ್ತು ಆತನ ಸಂಬಂಧಿ ಜಾಹಿದ್ ಮೇಲೆ ಮುಗಿಬಿದ್ದಿದೆ.[ಗಂಡು ಸಲಿಂಗಕಾಮಿ ಎಂದು ವಧು ಆತ್ಮಹತ್ಯೆಗೆ ಶರಣಾದಳೇ?]
ರಫೀಕ್ ಪ್ರಾಣ ಉಳಿಸಲು ಪೆಟ್ರೋಲ್ ಬಂಕ್ನ ಒಳನುಗ್ಗಿ ಓಡಿದ್ದು ಬಂಕ್ನ ಕಛೇರಿ ಹಿಂದುಗಡೆ ತಲುಪಿದಾಗ ದುಷ್ಕರ್ಮಿಗಳು ಆತನ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ. ಗಾಯಗೊಂಡು ಬಿದ್ದ ರಫೀಕ್ ನ ಕುತ್ತಿಗೆ, ಬೆನ್ನು, ಕೈಗಳಿಗೆ ಯದ್ವಾ-ತದ್ವಾ ತಲವಾರಿನಿಂದ ಇರಿದ ಪರಿಣಾಮ ರಫೀಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇತ್ತ ರಫೀಕನ ಸಂಬಂಧಿ ಜಾಹಿದ್ನ ಬಲಗೈಯನ್ನು ತಲವಾರಿನಿಂದ ಕಡಿಯಲಾಗಿದ್ದು ಜಾಹಿದ್ ಮತ್ತು ಇನ್ನಿಬ್ಬರು ಸ್ನೇಹಿತರು ದುಷ್ಕರ್ಮಿಗಳಿಂದ ತಪ್ಪಿಸಿ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡ ಜಾಹಿದ್ ನನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.[ಸೌಜನ್ಯ ಕೊಲೆ: ವೀರೇಂದ್ರ ಹೆಗ್ಗಡೆ ಸಂಬಂಧಿಕರ ಕೈವಾಡ, ಆರೋಪ]
ಕೊಲೆಗೈದ ದುಷ್ಕರ್ಮಿಗಳ ಗುಂಪಲ್ಲಿ ನೂರ್ ಅಲಿ, ಕಸಾಯಿ ಅಲಿ, ರೌಫ್, ಜಿಯಾ ಸೇರಿ ಒಟ್ಟು ಐವರು ನಟೋರಿಯಸ್ ರೌಡಿಗಳು ಇದ್ದರೆಂದು ಹೇಳಲಾಗುತ್ತಿದೆ. ಕಲಿಯಾ ರಫೀಕ್ ಅನೇಕ ಗ್ಯಾಂಗ್ ವಾರ್ಗಳನ್ನು ನಡೆಸುತ್ತಾ, ತನ್ನದೇ ಗ್ಯಾಂಗ್ ಕಟ್ಟಿಕೊಂಡು ಅಪರಾಧ ಕೃತ್ಯಗಳನ್ನು ಎಸಗುತ್ತಲೇ ಇದ್ದ. ಗ್ಯಾಂಗ್ಗಳ ನಡುವಿನ ವೈಷಮ್ಯದಿಂದ ಕೊಲೆ ನಡೆದಿರುವುದಾಗಿ ಶಂಕಿಸಲಾಗಿದೆ. ಸ್ಥಳಕ್ಕೆ ಎಸಿಪಿ ಶೃತಿ, ಉಳ್ಳಾಲ ಇನ್ಸ್ ಪೆಕ್ಟರ್ ಗೋಪಿಕೃಷ್ಣ, ಮಂಗಳೂರು ಸಿಸಿಬಿ ಪೊಲೀಸರು ಮತ್ತು
ಮಂಜೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.