ಬಾಲಕಿ ಮೇಲೆ ಅತ್ಯಾಚಾರ:ನಟೋರಿಯಸ್ ರೌಡಿ ಆಕಾಶ ಭವನ ಶರಣ್ ಬಂಧನ
ಮಂಗಳೂರು, ಏಪ್ರಿಲ್ 04:ಮಂಗಳೂರಿನ ನಟೋರಿಯಸ್ ರೌಡಿ ಆಕಾಶ್ ಭವನ ಶರಣ್ ನನ್ನು ಕೊನೆಗೂ ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶರಣ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಹುಲಿವೇಷ ನೃತ್ಯ ತರಬೇತಿ ನೀಡುವುದಾಗಿ ಹೇಳಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರಗೈದ ಆರೋಪ ಶರಣ್ ಮೇಲಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗುತ್ತಿದ್ದಂತೆ ರೌಡಿ ಶರಣ್ ತಲೆಮರೆಸಿಕೊಂಡಿದ್ದ.
ಅತ್ಯಾಚಾರದ ಬಗ್ಗೆ ಇದೇ ಜನವರಿ 7ರಂದು ಶರಣ್ ವಿರುದ್ಧ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ರೌಡಿ ಶರಣ್ ನನ್ನು ಬಂಧಿಸಿದ್ದಾರೆ.

ಶರಣ್ ಹುಲಿವೇಷ ತರಬೇತಿ ನೀಡುತ್ತಿದ್ದು, ತರಬೇತಿಗಾಗಿ ಬಂದಿದ್ದ ಬಾಲಕಿಯೊಬ್ಬಳನ್ನು ಪುಸಲಾಯಿಸಿ ಜಿಲ್ಲೆಯ ಹೊರಗಿನ ಲಾಡ್ಜ್ ವೊಂದಕ್ಕೆ ಕರೆದೊಯ್ದು, ಅಲ್ಲಿ ಮೂರು ದಿನಗಳ ಕಾಲ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿದೆ. ಅತ್ಯಾಚಾರದ ಬಳಿಕ ಬಾಲಕಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು.
ಆರೋಪಿ ಶರಣ್ ವಿರುದ್ಧ ಅತ್ಯಾಚಾರ, ಕೊಲೆ ಬೆದರಿಕೆ ಸೇರಿದಂತೆ ಪೊಕ್ಸೋ ಕಾಯ್ದೆಯಡಿ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೌಡಿ ಶೀಟರ್ ಆಗಿರುವ ಆಕಾಶ್ ಭವನ ಶರಣ್ ವಿರುದ್ಧ ಕೊಲೆ ಬೆದರಿಕೆ, ಹಫ್ತಾ ವಸೂಲಿ, ಸುಳ್ಯದ ಕೆವಿಜಿ ಸಂಸ್ಥೆಯ ಡಾ.ರಾಮಕೃಷ್ಣ ಹತ್ಯೆ ಪ್ರಕರಣ ಹಾಗೂ ಮಹಿಳೆಯೋರ್ವರ ಮೇಲೆ ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.












Click it and Unblock the Notifications