ವಿಡಿಯೋ; ಸಚಿವರ ತವರು ಕ್ಷೇತ್ರ ಸುಳ್ಯದಲ್ಲಿ ಇದೆಂಥ ಸ್ಥಿತಿ?
ಮಂಗಳೂರು, ಜುಲೈ 14; ರಭಸವಾದ ಹೊಳೆಯಲ್ಲಿ ಮಹಿಳೆಯನ್ನು ಹೊತ್ತು ಆಸ್ಪತ್ರೆಗೆ ದಾಖಲು ಮಾಡಬೇಕಾದ ಪರಿಸ್ಥಿತಿ ಜನರದ್ದು. ಕರ್ನಾಟಕದ ಸರ್ಕಾರದಲ್ಲಿ ಸಚಿವರಾಗಿರುವ ಎಸ್. ಅಂಗಾರ ಪ್ರತಿನಿಧಿಸುವ ಕ್ಷೇತ್ರದ ದಯನೀಯ ಪರಿಸ್ಥಿತಿಯ ವಿಡಿಯೋ ಇಲ್ಲಿದೆ.
ಮೀನುಗಾರಿಕಾ ಮತ್ತು ಬಂದರು, ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರರ ಸ್ವ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂಗಾರ ಸತತ 30 ವರ್ಷಗಳ ಕಾಲ ಶಾಸಕನಾಗಿ ಆಯ್ಕೆಯಾದರೂ ಇನ್ನೂ ಸುಳ್ಯದ ಹಲವು ಭಾಗಗಳಲ್ಲಿ ಅತೀ ಬೇಡಿಕೆಯ ರಸ್ತೆ ಮತ್ತು ಸೇತುವೆ ಆಗಿಲ್ಲ. ಇದಕ್ಕೆ ಮತ್ತೊಂದು ನಿದರ್ಶನವಾಗಿ ವಿಡಿಯೋವೊಂದು ಹರಿದಾಡುತ್ತಿದೆ.

ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಮರಸಂಕ ಎಂಬ ಊರಿನಲ್ಲಿ 9 ಕುಟುಂಬದ 50 ಜನರು ವಾಸವಾಗಿದ್ದಾರೆ. ಆದರೆ ಮರಸಂಕ ಊರಿಗೆ ತಲುಪಲು ರಸ್ತೆಯೂ ಇಲ್ಲ, ಸೇತುವೆಯೂ ಇಲ್ಲ. ರಭಸವಾಗಿ ಹರಿಯುವ ಹೊಳೆ ದಾಟಿ ಹೋಗಬೇಕು.
ಮಂಗಳವಾರ ಸಂಜೆ ಮರಸಂಕ ನಿವಾಸಿ ದೇವಕಿ ಮನೆಯ ಅಂಗಳದಲ್ಲಿ ಕಾಲು ಜಾರಿ ಬಿದ್ದಿದ್ದು, ಕಾಲಿನ ಮೂಳೆ ಮುರಿಯಿತು. ಅತೀವ ನೋವಿನಿಂದ ಬಳಲುತ್ತಿದ್ದರು. ಸ್ಥಳೀಯರು ಅಂಬುಲೆನ್ಸ್ಗೆ ಕರೆ ಮಾಡಿದರೂ ಹೊಳೆ ದಾಟಲು ಸಾಧ್ಯವಾಗಲಿಲ್ಲ.
ಹೀಗಾಗಿ ಸ್ಥಳೀಯರು ದೇವಕಿಯವರನ್ನು ಸ್ಟ್ರೆಚರ್ನಲ್ಲಿ ಹೊತ್ತುಕೊಂಡು ರಭಸವಾಗಿ ಹರಿಯುವ ಹೊಳೆ ದಾಟಿದ್ದಾರೆ. ಪಯಸ್ವಿನಿ ನದಿಗೆ ಸೇರುವ ಹೊಳೆ ಇದಾಗಿದ್ದು, ಭಾರೀ ಮಳೆಯ ಹಿನ್ನೆಲೆ ರಭಸವಾಗಿ ಹೊಳೆ ಹರಿಯುತ್ತಿದೆ. ಜೀವವನ್ನು ಲೆಕ್ಕಿಸದೆ ಸ್ಥಳೀಯರು ದೇವಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಹಿಂದಿನ ಚುನಾವಣೆಯ ಸಂದರ್ಭದಲ್ಲಿ ಸೇತುವೆಯ ಬೇಡಿಕೆಯನ್ನಿಟ್ಟು ಮರಸಂಕ ಊರಿನ ಜನ ಚುನಾವಣಾ ಬಹಿಷ್ಕಾರ ಮಾಡಿದ್ದರು. ಆದರೆ ಆ ಸಂದರ್ಭದಲ್ಲಿ ಎಸ್. ಅಂಗಾರ ಈ ಬಾರಿ ಖಂಡಿತ ಸೇತುವೆ ಮಾಡಿಕೊಡುವುದಾಗಿ ಆಶ್ವಾಸನೆ ನೀಡಿದ್ದರು.
ಈಗ ಸೇತುವೆ ಆಗಿಲ್ಲ. ಶಾಸಕರಾದ ಅಂಗಾರ ಮಾತ್ರ ಸಚಿವರಾದರು ಅಂತಾ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications